3 ಬಾರಿ ಕಲಾಪ ಮುಂದಕ್ಕೆ

ವಿಧಾನಸಭಾ ಕಲಾಪದಲ್ಲಿ ಉಭಯ ಪಕ್ಷಗಳಿಂದ ಗದ್ದಲ (ಸಂಗ್ರಹ ಚಿತ್ರ)
ವಿಧಾನಸಭಾ ಕಲಾಪದಲ್ಲಿ ಉಭಯ ಪಕ್ಷಗಳಿಂದ ಗದ್ದಲ (ಸಂಗ್ರಹ ಚಿತ್ರ)

ವಿಧಾನಸಭೆ: ಪ್ರವೀಣ್ ತೊಗಾಡಿಯಾ ಅವರು ಬೆಂಗಳೂರು ಪ್ರವೇಶಿಸದಂತೆ ನಿಷೇಧ ಹೇರಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಬಿಜೆಪಿ ಪ್ರಸ್ತಾಪಿಸಿದ ವಿಷಯ ತಾರಕಕ್ಕೆ ಹೋಗಿ, ಮೂರು ಬಾರಿ ಕಲಾಪ ಮುಂದೂಡಿದರೂ ಹತೋಟಿಗೆ ಬರಲಿಲ್ಲ.

ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಕೋಲಾಹಲ ಸೃಷ್ಟಿಯಾಗಿದ್ದರಿಂದ ಪ್ರಶ್ನೋತ್ತರ ಹೊರತುಪಡಿಸಿ ಇನ್ನಾವ ವಿಷಯವೂ ಪ್ರಸ್ತಾಪವಾಗದೆ ಬುಧವಾರದ ಕಲಾಪ ಅಂತ್ಯಗೊಂಡಿತು. ಬೆಳಗ್ಗೆ 11.15ಕ್ಕೆ ಸದನ ಆರಂಭವಾದಾಗ ಬಿಜೆಪಿ ಉಪನಾಯಕ ಆರ್. ಅಶೋಕ್ ಅವರು ನಿಷೇಧಕ್ಕೆ ಸಂಬಂ„ಸಿ ವಿಷಯ ಪ್ರಸ್ತಾಪಿಸಲು ಮುಂದಾದರು. ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ `ಅಶಾಂತಿ ಉಂಟು ಮಾಡುವ ಯಾವುದೇ ವ್ಯಕ್ತಿಗೆ ಅವಕಾಶ ನೀಡಲ್ಲ. ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುವವರಿಗೆ ಅವಕಾಶ ನೀಡಲ್ಲ' ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಶ್ನೋತ್ತರ ವೇಳೆಯ ನಂತರ ಶೂನ್ಯವೇಳೆಯಲ್ಲಿ ವಿಷಯಕ್ಕೆ ಅವಕಾಶ ಮಾಡಿಕೊಡುತ್ತೇನೆ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದ ನಂತರ ಸದಸ್ಯರು ಸುಮ್ಮನಾದರು. ಪ್ರಶ್ನೋತ್ತರ ಕಲಾಪದ ನಂತರ ಆರ್. ಅಶೋಕ್ ವಿಷಯ ಪ್ರಸ್ತಾಪಿಸಿ, ತೊಗಾಡಿಯಾ ಸಮಾವೇಶದಲ್ಲಿ ಭಾಗವಹಿಸಿದರೆ ಕಾಂಗ್ರೆಸ್‍ಗೆ ಏಕೆ ಹೊಟ್ಟೆ ಉರಿ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಬಿಜೆಪಿ ಸದಸ್ಯರು ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಧರಣಿ ನಡೆಸಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಕೂಗಿದರು. ಪ್ರಸ್ತಾಪ ಮಂಡಿಸಿದ್ದೀರಿ, ಗೃಹ ಸಚಿವರಿಂದ ಉತ್ತರ ಕೊಡಿಸುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ನುಡಿದರು. ಮುಖ್ಯಮಂತ್ರಿಯವರು ಇಲ್ಲೇ ಇದ್ದಾರೆ, ಅವರೇ ಉತ್ತರಿಸಲಿ ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಧಿಕ್ಕಾರ ಕೂಗಿದಾಗ ಸ್ಪೀಕರ್ ಸದನವನ್ನು 10 ನಿಮಿಷ ಮುಂದೂಡಿದರು. ನಂತರ 1.30ಕ್ಕೆ ಸದನ ಆರಂಭವಾದಾಗ ಧರಣಿ ಮುಂದುವರಿದು, ಭೋಜನ ವಿರಾಮ ಘೋಷಿಸಲಾಯಿತು. ಭೋಜನ ವಿರಾಮದ ನಂತರ ಬಿಜೆಪಿ ಧರಣಿ ಮಧ್ಯೆಯೇ ಗೃಹ ಸಚಿವ ಕೆ.ಜೆ. ಜಾರ್ಜ್ ಪ್ರಸ್ತಾಪಕ್ಕೆ ಉತ್ತರಿಸಿದರು.

ಹಿಂದಿನಿಂದಲೂ ಪ್ರಚೋದನಾಕಾರಿ ಮತ್ತು ಉದ್ರೇಕಕಾರಿ ಭಾಷಣ ಮಾಡುತ್ತಿರುವ ತೊಗಾಡಿಯಾ ಮೇಲೆ 19 ಪ್ರಕರಣಗಳು ದೇಶಾದ್ಯಂತ ದಾಖಲಾಗಿವೆ. ಹೀಗಾಗಿ ಅವರಿಗೆ ಬೆಂಗಳೂರಿನಲ್ಲಿ ಅವಕಾಶ ನೀಡಲು ಸಾಧ್ಯ ಇಲ್ಲ ಎಂದರು. ಇದನ್ನು ಒಪ್ಪದ ಬಿಜೆಪಿ ಸದಸ್ಯರು ಧರಣಿ ಮುಂದುವರಿಸಿದರು. ಮತ್ತೆ ಬಿಜೆಪಿ-ಕಾಂಗ್ರೆಸ್ ನಡುವೆ ಮಾತಿನ ಚಕಮಕಿ, ಪರಸ್ಪರ ಧಿಕ್ಕಾರ ನಡೆಯಿತು. ಸ್ಪೀಕರ್ ಕಲಾಪವನ್ನು ಗುರುವಾರಕ್ಕೆ ಮುಂದೂಡಿದರು.

ಸರ್ಕಾರದ ತೊಗಾಡಿಯಾ ಅವರ ಮೇಲಿನ ನಿರ್ಬಂಧಕ್ಕೆ ದೆಹಲಿಯಿಂದ ಆದೇಶ ಬಂದಂತಿದೆ. ಅದಕ್ಕೇ ಮುಖ್ಯಮಂತ್ರಿಯವರು ಸೂಚನೆ ನೀಡಿರುವುದರಿಂದ ಪೊಲೀಸರು ನಿಷೇಧ ಹೇರಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ. ಹಿಂದೂಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದೀರಿ. ಶಾಂತಿ ಕದಡುವುದಿಲ್ಲ ಎಂದು ಹೇಳುತ್ತಾ ಅದಕ್ಕೇ ನೀವೇ ಅವಕಾಶ ಮಾಡಿಕೊಡುತ್ತಿದ್ದೀರಿ. ಹಿಂದೂಗಳನ್ನು ಅವಮಾನಿಸುತ್ತಿದ್ದೀರಿ.
-ಜಗದೀಶ್ ಶೆಟ್ಟರ್, ಪ್ರತಿಪಕ್ಷ ನಾಯಕ

ದಿ ಈಸ್ ನಾಟ್ ಕರೆಕ್ಟ್. ಬಿಜೆಪಿಯವರು ಕೇಳುತ್ತಿರುವುದೇ ತಪ್ಪು. ಶಾಂತಿ ಕದಡುವ ಯಾವುದೇ ವ್ಯಕ್ತಿಗೆ ಅವಕಾಶ ಕೊಡಲ್ಲ. ಅಲ್ಪಸಂಖ್ಯಾತ, ಬಹುಸಂಖ್ಯಾತ ಎಲ್ಲರೂ ಒಂದೇ. ಯಾರೇ ಆಗಲಿ ಸಮಾಜದಲ್ಲಿ ಶಾಂತಿ ಕದಡಲು, ದ್ವೇಷ ಉಂಟಾಗಲು ಅವಕಾಶ ಕೊಡಲ್ಲ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com