ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಯೋಜನೆಗಳಿಗೆ ಸೂಕ್ತ ಪ್ರಚಾರ ದೊರೆಯತ್ತಿಲ್ಲದ ಬಗ್ಗೆ ಪಕ್ಷದ ಸಮನ್ವಯ ಸಮಿತಿ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯï ಸಿಂಗ್ ನೇತೃತ್ವದಲ್ಲಿ ಶುಕ್ರವಾರ ಆರಂಭಗೊಂಡ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ. ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವು ಜನಪರ ಕಾರ್ಯಕ್ರಮ ನೀಡಿದೆ. ಆದರೆ ಯುಪಿಎ ಸರ್ಕಾರದ ಅವಧಿಯಲ್ಲಿ ಆದ ತಪ್ಪು ಇಲ್ಲಿಯೂ ಆಗುತ್ತಿದೆ. ಯಾವ ಸಚಿವರೂ ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಮಾತನಾಡುತ್ತಿಲ್ಲ. ಸಚಿವರು ಹಾಗೂ ಶಾಸಕರು ಈ ವಿಚಾರವನ್ನು ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಮಾರ್ಕೆಟಿಂಗ್ ಮಾಡುವ ಜವಾಬ್ದಾರಿ ಪ್ರದರ್ಶಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.
ಪಕ್ಷ ಮತ್ತು ಸರ್ಕಾರದ ಮಧ್ಯೆ ಇನ್ನಷ್ಟು ಸಮನ್ವಯ ಅಗತ್ಯ ಎಂಬ ವಿಚಾರ ಬಲವಾಗಿ ಪ್ರತಿಪಾದನೆಯಾಗಿದ್ದು, ಪಕ್ಷದ ಕಾರ್ಯಕ್ರಮಗಳಿಂದ ಸಚಿವರು ಮತ್ತು ಶಾಸಕರು ದೂರ ಉಳಿಯುವುದು ಕೆಟ್ಟ ಸಂಪ್ರದಾಯ. ಪಕ್ಷದ ವೇದಿಕೆಯಲ್ಲಿ ಆಯೋಜಿಸುವ ಕಾರ್ಯಕ್ರಮಗಳಿಗೆ ಸಚಿವರು ಗೈರಾದರೆ, ಸಿದ್ದರಾಮಯ್ಯನವರು ಪ್ರಶ್ನಿಸಬೇಕು. ಪಕ್ಷ ಸಂಘಟನೆ ದೃಷ್ಟಿಯಿಂದ ಸಚಿವರ ನಿರ್ಲಿಪ್ತ ಧೋರಣೆ ಕ್ಷಮಿಸಲು ಸಾಧ್ಯವಿಲ್ಲ ಎಂದು ದಿಗ್ಗಿ ಎಚ್ಚರಿಸಿದ್ದಾರೆ.
ಭಾಗ್ಯ ಬೇಡವಯ್ಯ
ಸಮನ್ವಯ ಸಮಿತಿ ಸಭೆಯಲ್ಲಿ ಸರ್ಕಾರದ ಜನಪ್ರಿಯ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆಯಾದರೂ ಭವಿಷ್ಯದಲ್ಲಿ `ಭಾಗ್ಯ ಸರಣಿ'ಗೆ ಕೊಕ್ಕೆ ಬೀಳುವ ಮುನ್ಸೂಚನೆ ಲಭಿಸಿದೆ. ಪಕ್ಷದ ಪ್ರಣಾಳಿಕೆಯಲ್ಲಿ ಪ್ರಸ್ತಾಪವಾದ ಎಷ್ಟು ಅಂಶಗಳು ಅನುಷ್ಠಾನಕ್ಕೆ ಬಂದಿವೆ ಎಂಬ ಬಗ್ಗೆ ವಿವರಣೆ ಪಡೆದ ಸಿಂಗ್, ಪಕ್ಷದ ಜತೆ ತಾದಾತ್ಮ್ಯ ಸಂಬಂಧ ಇರುವ ಹೆಸರಿನ ಯೋಜನೆಗಳು ಯಾವುದೆಂದು ಪ್ರಶ್ನಿಸಿದ್ದಾರೆ. ಮಾತ್ರವಲ್ಲ ಮುಂದಿನ ಬಜೆಟ್ನಲ್ಲಿ ಸರ್ಕಾರ ಘೋಷಿಸುವ ಮಹತ್ವದ ಕಾರ್ಯಕ್ರಮದಲ್ಲಿ ಇಂಥ ಕುರುಹುಗಳು ಇರಬೇಕು. ನೆಹರೂ, ಇಂದಿರಾ ಹಾಗೂ ರಾಜೀವ್ ಗಾಂಧಿ ಅವರ ಹೆಸರಿನಲ್ಲಿಯೇ ಯೋಜನೆಗಳ ಜಾರಿಯಾಗಬೇಕೆಂಬ ಕಿವಿ ಮಾತನ್ನು ಸಿಂಗ್ ನೀಡಿದ್ದಾರೆ.
`ಜಾರಿ'ಕೊಂಡ ಡಿಗ್ಗಿ
ಸಚಿವ ಜಾರಕಿಹೊಳಿ ರಾಜಿನಾಮೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಕೂಡಾ ಜಾರಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಸಮನ್ವಯ ಸಮಿತಿ ಸಭೆಯಲ್ಲೇ ಈ ವಿಷಯ ತಿಳಿಸಿರುವ ಅವರು, ಮಾಧ್ಯಮಗಳಿಗೂ ಇದೇ ಹೇಳಿಕೆ ನೀಡಿದ್ದಾರೆ. ಇದು ಸಿದ್ದರಾಮಯ್ಯ ಮತ್ತು ಜಾರಕಿಹೊಳಿ ಅವರಿಬ್ಬರ ಮಧ್ಯೆ ಇರುವ ವಿಚಾರ. ಅವರಿಬ್ಬರೂ ಬಗೆಹರಿಸಿಕೊಳ್ಳುತ್ತಾರೆ ಎಂದರು.
ಸಂಜೆ ಮಾತನಾಡುತ್ತೇನೆ
ಜಾರಕಿಹೊಳಿ ಜತೆ ನಾನು ಮಾತನಾಡುತ್ತೇನೆ ಎಂದ ಸಿದ್ದರಾಮಯ್ಯ, ಅವರು ಬೆಂಗಳೂರಿಗೆ ಬರುತ್ತಾರೆ. ಚರ್ಚೆ ನಡೆಸುತ್ತೇನೆ ಎಂದಷ್ಟೇ ಹೇಳಿದರು.
ಅಪರಾಧಿನಾನಲ್ಲ, ಬೆಂಬಲಿಸಿ ಎಂದ ಸಿಎಂ
ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಸಮನ್ವಯ ಸಮಿತಿ ಸಭೆಯಲ್ಲೂ ಸಿಎಂ ಸಿದ್ದರಾಮಯ್ಯ ಪ್ರತಿಪಾದಿಸಿಕೊಂಡಿದ್ದಾರೆ. ಈ ವಿಚಾರದಲ್ಲಿ ಪ್ರತಿ ಪಕ್ಷ ಬಿಜೆಪಿ `ಇಮೇಜ್ ಟಾರ್ನಿಷ್' (ವ್ಯಕ್ತಿತ್ವ ಮುಕ್ಕು ) ಮಾಡಲು ಯತ್ನಿಸುತ್ತಿದೆ ಎಂದು ದಿಗ್ವಿಜಯ್ ಸಿಂಗ್ ಸಮ್ಮುಖದಲ್ಲಿ ಹೇಳಿರುವ ಅವರು, ಈ ಸಂಬಂಧ ಕಾನೂನು ಹೋರಾಟ ಹೇಗೆ ಮಾಡಬೇಕು? ಸರ್ಕಾರಕ್ಕೆ ಸಚಿವರು ಮತ್ತು ಪಕ್ಷದ ಸಹಾಯ ಹೇಗಿರಬೇಕೆಂಬ ಬಗ್ಗೆ ನೆರವು ಕೋರಿದ್ದಾರೆ ಎಂದು ಕಾಂಗ್ರೆಸ್ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಏಪ್ರಿಲ್ನಲ್ಲಿ ಪುನಾರಚನೆ ?
ಇದರ ಜತೆಗೆ ಸಮನ್ವಯ ಸಮಿತಿ ಸಭೆಯಲ್ಲಿ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆದಿದೆ. ಏಪ್ರಿಲ್ ನಲ್ಲಿ ಸಂಪುಟ ಪುನಾರಚನೆ ಮಾಡಿ ಎಂಬ ಗ್ರೀನ್ ಸಿಗ್ನಲ್ ಅನ್ನು ದಿಗ್ವಿಜಯ್ ಸಿಂಗ್ ನೀಡಿದ್ದಾರೆ.
Advertisement