ಬೆಂಗಳೂರು: ಕನ್ನಡ ಚಳವಳಿ ವಾಟಾಳ್ ಪಕ್ಷದ ಕಾರ್ಯಕರ್ತರು ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಉಪ್ಪಿನ ಅಭಿಷೇಕ ಮಾಡಿ ಗಾಂಧೀಜಿ ಬೆಂಗಳೂರು ಭೇಟಿಯ ಶತಮಾನೋತ್ಸವ ಆಚರಿಸಿದರು.
ಗಾಂಧೀಜಿ ಬೆಂಗಳೂರು ಭೇಟಿ ಶತಮಾನೋತ್ಸವ ಅಂಗವಾಗಿ ಪಕ್ಷದ ನಾಯಕ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಗಾಂಧೀಜಿ ಭಾವಚಿತ್ರ ಮೆರವಣಿಗೆನಡೆಸಲಾಯಿತು. ನಂತರ ಮೈಸೂರು ಬ್ಯಾಂಕ್ ವೃತ್ತದಲ್ಲಿ ನಡೆದ ಸಮಾರಂಭದಲ್ಲಿ ವಾಟಾಳ್ ನಾಗರಾಜ್ ಮತ್ತು ಕಾರ್ಯಕರ್ತರು ಗಾಂಧೀಜಿ ಭಾವಚಿತ್ರಕ್ಕೆ ಉಪ್ಪಿನ ಅಭಿಷೇಕ ಮಾಡಿದರು.
ಈ ಮೂಲಕ ಗಾಂಧೀಜಿ ನೇತೃತ್ವದ ಉಪ್ಪಿನ ಸತ್ಯಾಗ್ರಹದ ದಿನಗಳನ್ನು ಸ್ಮರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಗಾಂಧೀಜಿ ಬೆಂಗಳೂರಿನಲ್ಲಿ 45 ದಿನ ತಂಗಿದ್ದು, ನಾಡಿನ ಪುಣ್ಯವಾಗಿದ್ದು, ಅದನ್ನು ಎಲ್ಲರೂ ಸ್ಮರಿಸಬೇಕಿದೆ. ಹಾಗೆಯೇ ಅವರ ಹೋರಾಟದ ಹಾದಿಯಲ್ಲಿಯೇ ಎಲ್ಲರೂ ಸಾಗಬೇಕಾಗಿದೆ. ಗಾಂಧೀಜಿ ಅವರು ಅಂದು ಪ್ರಕೃತಿ ಚಿಕಿತ್ಸೆಗಾಗಿ ಬಂದಿದ್ದರು. ಅದಕ್ಕೀಗ 100 ವರ್ಷವಾಗಿರುವ ನೆನೆಪಿಗೆ ಸರ್ಕಾರ ಪ್ರತಿ ಜಿಲ್ಲೆಯಲ್ಲಿಯೂ ಆದರ್ಶ ಪ್ರಕೃತಿ ಚಿಕಿತ್ಸಾ ಕೇಂದ್ರಗಳನ್ನು ತೆರೆಯಬೇಕು. ಹಾಗೆಯೇ ಉಪ್ಪಿನ ಸತ್ಯಾಗ್ರಹ
ನೆನಪಿಸಲು ಸರ್ಕಾರ ಉಚಿತ ಅಕ್ಕಿ ಜತೆಗೆ ಉಪ್ಪನ್ನೂ ಉಚಿತವಾಗಿ ನೀಡಬೇಕೆಂದು ಆಗ್ರಹಿಸಿದರು. ಇದೇ ವೇಳೆ ರಾಜೀವ್ ಗಾಂಧಿ ಆರೋಗ್ಯ ವಿವಿಯಲ್ಲಿ ಗಾಂಧೀಜಿ ಫೋಟೋ ಕಳವು ಮಾಡಿರುವ ಘಟನೆ ಯನ್ನು ವಾಟಾಳ್ ಖಂಡಿಸಿದರು. ಫೋಟೋ ಕಳವು ಮಾಡಿದವರು ವಾಪಸ್ ನೀಡುವ ಮೂಲಕ ಗಾಂಧೀಜಿಗೆ ಗೌರವ ಸಲ್ಲಿಸಬೇಕೆಂದರು.
Advertisement