ಹಾಸನ: ಜೆಡಿಎಸ್ ಮುಖಂಡ ಮತ್ತು ಶಾಸಕ ಜಮೀರ್ ಅಹ್ಮದ್ ಅವರ ವಿರುದ್ಧ ವಾಗ್ದಾಳಿ ಮಾಡುತ್ತಿದ್ದ ವೇಳೆ ಅವರನ್ನು ಮೀರ್ ಸಾದಿಕ್ ಗೆ ಹೋಲಿಸಿದ್ದ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರು ಈ ಸಂಬಂಧ ಎದ್ದಿದ್ದ ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ.
ಸೋಮವಾರ ಹಾಸನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್ ಡಿ ದೇವೇಗೌಡ ಅವರು, "ಮೀರ್ಸಾದಿಕ್ ಹೋಲಿಕೆಯನ್ನು ಯಾರೂ ವ್ಯಕ್ತಿಗತವಾಗಿ ತೆಗೆದುಕೊಳ್ಳಬಾರದು ಎನ್ನುವ ಎಂದು ಹೇಳಿದ್ದಾರೆ. "ಇತಿಹಾಸದಲ್ಲಿನ ಕೆಲ ವ್ಯಕ್ತಿಗಳ ಬಗ್ಗೆ ನಾವು ಓದಿ, ಕೇಳಿ ತಿಳಿದಿರುತ್ತೇವೆ. ಮಂಥರೆ ಇಲ್ಲದಿದ್ದರೆ ರಾಮಾಯಣ ನಡೆಯುತ್ತಿರಲಿಲ್ಲ. ಶಕುನಿ ಇಲ್ಲದಿದ್ದರೆ ಮಹಾಭಾರತ ನಡೆಯುತ್ತಿರಲಿಲ್ಲ. ಅದೇ ರೀತಿ ಕೆಲವು ವ್ಯಕ್ತಿಗಳಿಂದ ಕೆಲ ಘಟನೆಗಳು ನಡೆದಿರುತ್ತವೆ. ಎಲ್ಲವನ್ನೂ ವ್ಯಕ್ತಿಗತವಾಗಿ ನೋಡಬಾರದು ಎಂದು ಅವರು ಹೇಳಿದರು.
ಆ ಮೂಲಕ ಶಾಸಕ ಜಮೀರ್ ಅಹಮದ್ ಖಾನ್ ಅವರನ್ನು ಮೀರ್ಸಾದಿಕ್ ಎಂದು ಕರೆದಿದ್ದರಿಂದ ಎದ್ದಿದ್ದ ವಿವಾದವನ್ನು ತಣ್ಣಗಾಗಿಸಲು ದೇವೇಗೌಡ ಅವರು ಯತ್ನಿಸಿದರು. ಅಂತೆಯೇ, ಶಾಸಕ ಜಮೀರ್ ಹೆಸರನ್ನು ಹೇಳಲು ನಿರಾಕರಿಸುವ ಮೂಲಕ ತಮ್ಮಲ್ಲಿರುವ ಅಸಮಾಧಾನವನ್ನು ಮತ್ತೆ ಹೊರ ಹಾಕಿದರು. ಅಲ್ಲದೆ ಪಕ್ಷದ ಬಗ್ಗೆ ಮಾತನಾಡುವವರ ಬಗ್ಗೆ ಸೂಕ್ತ ಸಮಯದಲ್ಲಿ ತೀರ್ಮಾನಿಸುತ್ತೇವೆ ಎನ್ನುವ ಮೂಲಕ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸುಳಿವು ನೀಡಿದರು.
Advertisement