
ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರ ಸ್ವಾಮಿ ಅವರ ವಿರುದ್ಧ ಬಂಡಾಯವೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ದೇವನಹಳ್ಳಿ ಶಾಸಕ ಪಿಳ್ಳಮುನಿಶಾಮಪ್ಪ ರಾಜಿನಾಮೆ ನೀಡಿದ ಕೇವಲ 24 ಗಂಟೆಗಳಲ್ಲಿಯೇ ಯೂಟರ್ನ್ ಹೊಡೆದಿದ್ದು, ರಾಜೀನಾಮೆ ವಾಪಾಸ್ ಪಡೆದಿದ್ದಾರೆ.
ಶಾಸಕ ಪಿಳ್ಳ ಮುನಿಶಾಮಪ್ಪ ರಾಜಿನಾಮೆ ನೀಡಿದ ವಿಚಾರ ತಿಳಿಯುತ್ತಿದ್ದಂತೆಯೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಶಾಸಕರನ್ನು ಓಲೈಸುವ ಯತ್ನ ನಡೆಸಿದ್ದರು. ಸತತ ಮಾತುಕತೆ ಬಳಿಕ ದೇವೇಗೌಡ ಅವರ ಸಂಧಾನಕ್ಕೆ ಒಪ್ಪಿಗೆ ನೀಡಿದ ಪಿಳ್ಳ ಮುನಿಶಾಮಪ್ಪ ಅವರು ಇಂದು ಸ್ಪೀಕರ್ ಕೋಳಿವಾಡ ಅವರ ನಿವಾಸಕ್ಕೆ ತೆರಳಿ ತಮ್ಮ ರಾಜೀನಾಮೆ ವಾಪಾಸ್ ಪಡೆದಿದ್ದಾರೆ.
ಇನ್ನು ನಿನ್ನೆ ಸ್ಪೀಕರ್ ಕೋಳಿವಾಡ್ ನಿವಾಸಕ್ಕೆ ಭೇಟಿ ನೀಡಿದ್ದ ಪಿಳ್ಳ ಮುನಿಶಾಮಪ್ಪ ಅವರು ರಾಜೀನಾಮೆ ಪತ್ರ ಸಲ್ಲಿಸಿ, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದರು. ಅಲ್ಲದೆ ರಾಜಿನಾಮೆ ಪತ್ರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿಯವರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದರು. ದೇವನಹಳ್ಳಿ ಕ್ಷೇತ್ರದ ಸ್ಥಳೀಯ ಮುಖಂಡ ನಿಸರ್ಗ ನಾರಾಯಣಸ್ವಾಮಿ ಅವರನ್ನು ಜೆಡಿಎಸ್ಗೆ ಸೇರ್ಪಡೆ ಮಾಡಿಕೊಂಡಿರುವುದು ಹಾಗೂ ಅವರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡುವ ಒಪ್ಪಂದ ಆಗಿರುವುದು ಪಿಳ್ಳಮುನಿಶಾಮಪ್ಪ ಅವರ ಅಸಮಾಧಾನಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುನಿಶಾಮಪ್ಪ ಅವರು, "ಹಿಂದಿನಿಂದಲೂ ನಾನು ಪಕ್ಷಕ್ಕಾಗಿ ದುಡಿದದಿದ್ದೇನೆ. ಆದರೆ ನನ್ನ ಮಾತಿಗೆ ಬೆಲೆ ಇಲ್ಲದಾಗ ಬೇಸರವಾಗಿತ್ತು. ನಾನು ಕ್ಷೇತ್ರದ ಜನರಿಂದ ನೇರವಾಗಿ ಆಯ್ಕೆಯಾಗಿದ್ದು, 5 ವರ್ಷ ಕ್ಷೇತ್ರದಲ್ಲಿ ಕೆಲಸ ಮಾಡಬೇಕಾಗಿದೆ. ಆದರೆ ವರಿಷ್ಠರು ಎಲ್ಲವನ್ನೂ ಸರಿ ಮಾಡಿದ್ದಾರೆ. ಹೀಗಾಗಿ ರಾಜಿನಾಮೆ ವಾಪಸ್ ಪಡೆದಿರುವುದಾಗಿ ಹೇಳಿದ್ದಾರೆ.
Advertisement