ರಾಜಕೀಯ
ಜಮೀರ್ ಅಹ್ಮದ್ ಜಾತಕ ನನ್ನ ಬಳಿ ಇದೆ, ಎಲ್ಲ ಅಕ್ರಮಗಳ ದಾಖಲೆ ಬಿಡುಗಡೆ ಮಾಡ್ತೀನಿ: ಅಲ್ತಾಫ್ ಖಾನ್
ಜಮೀರ್ ಅಹ್ಮದ್ ಖಾನ್ ಅವರ ಎಲ್ಲ ಅಕ್ರಮಗಳ ದಾಖಲೆ ನನ್ನ ಬಳಿ ಇದ್ದು, ಶೀಘ್ರ ಅವುಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಜೆಡಿಎಸ್ ಮುಖಂಡ ಅಲ್ತಾಫ್ ಖಾನ್ ಹೇಳಿದ್ದಾರೆ.
ಬೆಂಗಳೂರು: ಜಮೀರ್ ಅಹ್ಮದ್ ಖಾನ್ ಅವರ ಎಲ್ಲ ಅಕ್ರಮಗಳ ದಾಖಲೆ ನನ್ನ ಬಳಿ ಇದ್ದು, ಶೀಘ್ರ ಅವುಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಜೆಡಿಎಸ್ ಮುಖಂಡ ಅಲ್ತಾಫ್ ಖಾನ್ ಹೇಳಿದ್ದಾರೆ.
ಸುಮಾರು 25 ವರ್ಷಗಳ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಅಲ್ತಾಫ್ ಖಾನ್ ಬದಲಾದ ಪರಿಸ್ಥಿತಿಯಲ್ಲಿ ಇಂದು ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಇಂದು ಬೆಂಗಳೂರಿನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಅಲ್ತಾಫ್ ಖಾನ್ ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ ಗೆ ಸೇರ್ಪಡೆಯಾದರು.
ಈ ವೇಳೆ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅಲ್ತಾಫ್ ಖಾನ್, ಜಮೀರ್ ಅಹ್ಮದ್ ಅವರ ಜಾತಕ ನನ್ನ ಬಳಿ ಇದೆ. ಅವರ ಎಲ್ಲ ಅಕ್ರಮಗಳ ದಾಖಲೆಗಳನ್ನು ನಾನು ಶೀಘ್ರ ಬಿಡುಗಡೆ ಮಾಡುತ್ತೇನೆ. ಬಹುಶಃ ಅವರ ಮನೆಯವರಿಗೆ ಜಮೀರ್ ಕುರಿತ ಸಂಪೂರ್ಣ ಮಾಹಿತಿ ಇಲ್ಲದೇ ಇರಬಹುದು. ಆದರೆ ನನ್ನ ಬಳಿ ಜಮೀರ್ ಅವರ ಅಕ್ರಮಗಳ ಎಲ್ಲ ದಾಖಲೆಗೂ ಇವೆ. ಒಂದು ಕಾಲದಲ್ಲಿ ಚಾಮರಾಜ ಪೇಟೆಯಲ್ಲಿ ಓಟು ಕೊಡಿಸುವಂತೆ ನನ್ನನ್ನು ಗೋಗರೆದಿದ್ದರು. ನನ್ನ ಕಾಲಿಗೆ ಬಿದ್ದು ಓಟು ಕೊಡಿಸುವಂತೆ ಕೇಳಿದ್ದರು. ಈ ಕುರಿತು ವಿಡಿಯೋ ನನ್ನ ಬಳಿ ಇದೆ. ಚಾಮರಾಜಪೇಟೆಯಲ್ಲಿ ಮನೆ ಮಾಡಿಕೊಳ್ಳಲು ನಾನು ಹಣ ನೀಡಿದ್ದೆ. ಆದರೆ ಈಗ 300 ಕೋಟಿಗೂ ಹಣ ಎಲ್ಲಿಂದ ಬಂತು. ಅಲ್ಲದೆ ನಗರದ ಸಿಟಿ ಮಾರುಕಟ್ಟೆಲ್ಲಿ ಬಡವರ 10 ಅಂಗಡಿಗಳನ್ನು ಅಕ್ರಮವಾಗಿ ಮಾರಾಟ ಮಾಡಿ ಹಣಗಳಿಸಿದ್ದಾರೆ ಎಂದು ಅಲ್ತಾಫ್ ಆರೋಪಿಸಿದರು.
ಚಾಮರಾಜಪೇಟೆಗೆ ಬರ್ತೀನಿ ಏನ್ ಮಾಡ್ತೀರಾ: ಜಮೀರ್ ಗೆ ಟಿಎ ಶರವಣ ಸವಾಲು
ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಟಿಎ ಶರಣವಣ, ಜಮೀರ್ ಚಾಮರಾಜಪೇಟೆಗೆ ಬಂದು ನೋಡಿ ಎಂದು ಹೇಳಿದ್ದರು. ಆದರೆ ಈಗ ನಾವು ಚಾಮರಾಜಪೇಟೆಯಲ್ಲೇ ಇದ್ದೇವೆ. ಏನ್ ಮಾಡ್ತೀರಾ ಜಮೀರ್ ಎಂದು ಪ್ರಶ್ನಿಸಿದರು. 'ನಮ್ಮ ಕ್ಷೇತ್ರದಲ್ಲಿ ರೇವಣ್ಣ ನಿಂತು ಗೆದ್ದು ತೋರಿಸಲಿ ಎಂದು ಸವಾಲು ಹಾಕ್ತೀರಾ..? ಮೊದಲು ನಿಮಗೆ ಠೇವಣಿ ಸಿಗುತ್ತದೆಯೇ ಎಂದು ನೋಡಿಕೊಳ್ಳಿ ಎಂದು ಕಾಲೆಳೆದರು. ಜೆಡಿಎಸ್ ತಾಯಿಯಂತೆ, ದೇವೇಗೌಡ ನನ್ನ ತಂದೆಯಂತೆ, ಕುಮಾರಸ್ವಾಮಿ ಅಣ್ಣಾ ಎಂದು ಹೇಳುತ್ತಿದ್ದಿರಿ.. ಈಗ ಅವರ ವಿರುದ್ಧವೇ ನಿಂತು ಬೆನ್ನಿಗೆ ಚೂರಿ ಹಾಕ್ತೀರಾ ಎಂದು ಶರವಣ ಆಕ್ರೋಶ ವಕ್ತಪಡಿಸಿದರು.