ಚುನಾವಣೆಯಲ್ಲಿ ಹೊಸ ಪಕ್ಷಗಳ ಅಸ್ತಿತ್ವ ಕಷ್ಟ: ರಾಜಕೀಯ ತಜ್ಞರ ವಿಶ್ಲೇಷಣೆ

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅನೇಕ ಹೊಸ ರಾಜಕೀಯ ಪಕ್ಷಗಳು ರಾಜಕಾರಣಕ್ಕೆ ಎಂಟ್ರಿ ಪಡೆದಿವೆ.ಆದರೆ, ರಾಷ್ಟ್ರೀಯ ಪಕ್ಷಗಳ ಪ್ರಾಬಲ್ಯ ನಡುವೆ ಅವು ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟಸಾಧ್ಯ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸಾಂದರ್ಭಿಕ ಚಿತ್ರ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸಾಂದರ್ಭಿಕ ಚಿತ್ರ

ಬೆಂಗಳೂರು :ಮುಂಬರುವ  ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅನೇಕ ಹೊಸ ರಾಜಕೀಯ ಪಕ್ಷಗಳು ರಾಜಕಾರಣಕ್ಕೆ ಎಂಟ್ರಿ ಪಡೆದಿವೆ.ಆದರೆ, ರಾಷ್ಟ್ರೀಯ ಪಕ್ಷಗಳ ಪ್ರಾಬಲ್ಯ ನಡುವೆ ಅವು ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟಸಾಧ್ಯ  ಎಂಬುದು ರಾಜಕೀಯ ತಜ್ಞರ ಅಭಿಮತವಾಗಿದೆ.

ಇತ್ತೀಚಿಗೆ ಸ್ಥಾಪನೆಯಾಗಿರುವ ಕೆಲ ಪಕ್ಷಗಳು ಪಕ್ಷದ ಚಿಹ್ನೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರೆ, ಮತ್ತೆ ಕೆಲವು ಪಕ್ಷಗಳು  ಚುನಾವಣಾ ಆಯೋಗದಿಂದ ಚಿಹ್ನೆ ದೊರೆಯುವ ವಿಶ್ವಾಸದಲ್ಲಿವೆ.

ಹೊಸ ಪಕ್ಷಗಳಿಗೆ ರಾಜ್ಯ ಚಿಕ್ಕ ಕೋಣೆಯಂತಿದೆ. ವಿಶೇಷವಾಗಿ ರಾಷ್ಟ್ರೀಯ ಪಕ್ಷಗಳು ಒಂದಾದ ನಂತರ ಒಂದರಂತೆ ರಾಜ್ಯದಲ್ಲಿ ಜಯ ಗಳಿಸುತ್ತಿವೆ. ಆದರೂ ಕೆಲವು ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ರಾಜಕೀಯದಲ್ಲಿ ಅಸ್ತಿತ್ವ ಪಡೆಯಬಹುದೆಂಬ ವಿಶ್ವಾಸ ಹೊಸ ರಾಜಕೀಯ ಪಕ್ಷಗಳ ಸ್ಥಾಪಕರದ್ದಾಗಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 ಇತ್ತೀಚಿನದಿನಗಳಲ್ಲಿ ನಟ ಉಪೇಂದ್ರ ಅವರ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ, ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಅವರ  ಭಾರತೀಯ ಜನಶಕ್ತಿ ಕಾಂಗ್ರೆಸ್, ಹೋರಾಟಗಾರ ಟಿವಿ  ಸತೀಶ್ ಅವರ ಜನ ಸಾಮಾನ್ಯರ ಪಕ್ಷ, ವರ್ತೂರು ಪ್ರಕಾಶ್ ಅವರ ನಮ್ಮ ಕಾಂಗ್ರೆಸ್  ಜನರ ಗಮನ  ಸೆಳೆದಿವೆ.

ಈಗಾಗಲೇ ಎರಡು ಪಕ್ಷಗಳು  ಚುನಾವಣಾ ಆಯೋಗದಿಂದ ಚಿಹ್ನೆ ಪಡೆಯುವಲ್ಲಿಯೂ ಯಶಸ್ವಿಯಾಗಿವೆ. ಶೆಣೈ ಅವರ ಜನಶಕ್ತಿ ಕಾಂಗ್ರೆಸ್ ಚಿಹ್ನೆ ಪಡೆಯುವ ವಿಶ್ವಾಸದಲ್ಲಿದೆ. ಒಂದು ವೇಳೆ  ಚುನಾವಣಾ ಆಯೋಗ ಫೆಬ್ರವರಿ ಅಂತ್ಯದೊಳಗೆ ಚಿಹ್ನೆ ನೀಡದಿದ್ದರೆ  ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಅನುಪಮಾ ಶೆಣೈ ತಿಳಿಸಿದ್ದಾರೆ.

 ಹೀಗೆ ಅನುಪಮಾ ಶೈಣೈ ಪಕ್ಷದ ಚಿಹ್ನೆಗಾಗಿ ಹೋರಾಟ ಮಾಡುತ್ತಿದ್ದರೆ, ನಟ ಉಪೇಂದ್ರ ಪಕ್ಷ ಉದ್ಘಾಟನೆ ಸಂದರ್ಭದಲ್ಲಿ ನಿರೀಕ್ಷಿತ ಜನ ಬೆಂಬಲ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಉತ್ತರ ಕರ್ನಾಟಕದ ಮಹದಾಯಿ ವಿವಾದ ಕಡೆಗೆ ಹೆಚ್ಚಿನ ಗಮನ ನೀಡದೇ, ಆ ಭಾಗದಲ್ಲಿ  35ರಿಂದ 40 ಸ್ಥಾನಗಳಲ್ಲಿ ಜಯಗಳಿಸುವ ವಿಶ್ವಾಸ ಹೊಂದಿರುವುದಾಗಿ ಜನ ಸಾಮಾನ್ಯರ ಪಕ್ಷದ ಸ್ಥಾಪಕ ಸತೀಶ್ ಹೇಳುತ್ತಾರೆ.

 ಕರ್ನಾಟಕದ ರಾಜಕಾರಣದ ಇತಿಹಾಸ ನೋಡಿದರೆ, ಯಾವುದೇ ಪ್ರಾದೇಶಿಕ ಪಕ್ಷಗಳು ಯಶಸ್ವಿಯಾಗಿಲ್ಲ.  ರಾಷ್ಟ್ರೀಯ ಪಕ್ಷಗಳ ಗೈರು ಹಾಜರಿಯಲ್ಲಿ ಮಾತ್ರ ಅವು ಯಶಸ್ವಿಯಾಗಿರಬಹುದು  ಎಂದು ರಾಜಕೀಯ ವಿಶ್ಲೇಷಕರ ಸಂದೀಪ್ ಶಾಸ್ತ್ರಿ ಹೇಳುತ್ತಾರೆ.

 ಮೈಸೂರು ವಿವಿ ರಾಜಕೀಯ ಶಾಸ್ತ್ರದ ಪ್ರೊಫೆಸರ್ ಮುಜಾಫರ್ ಅಸಾದಿ ಹೇಳುವಂತೆ, ಹಿಂದಿನ ಚುನಾವಣೆ ಸಂದರ್ಭದಲ್ಲಿ ಸರ್ವೋದಯ ಪಕ್ಷ, ಬಡವರ ರೈತರ ಪಕ್ಷ ಸೇರಿದಂತೆ ಅನೇಕ ಹೊಸ ಪಕ್ಷಗಳು ಚುನಾವಣೆಗೆ ಸ್ಪರ್ಧಿಸಿದ್ದರೂ ಯಾವುದೇ ಪರಿಣಾಮ ಬೀರಲಿಲ್ಲ.  ರಾಷ್ಟ್ರೀಯ ಪಕ್ಷಗಳ ಮತಗಳನ್ನು ತಗ್ಗಿಸುವಲ್ಲಿಯೂ ಯಶಸ್ವಿಯಾಗಿಲ್ಲ  ಎನ್ನುತ್ತಾರೆ.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com