ಮಂಗಳೂರು : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉಲ್ಲಾಳ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ ಸ್ಟ್ರೀಟ್ , ಕವೂರ್ , ಮಾರಾಕದ ಮೊದಲಾದ ಕಡೆಗಳಲ್ಲಿ ನಿನ್ನೆ ರೋಡ್ ಶೋ ನಡೆಸಿದರು.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಅಮಿತ್ ಶಾ, ಕೇಂದ್ರಸರ್ಕಾರ ನೀಡಿರುವ ಅನುದಾನದ ಬಗ್ಗೆ ರಾಜ್ಯಸರ್ಕಾರ ಲೆಕ್ಕ ತೋರಿಸುವಂತೆ ಪದೇ ಪದೇ ಕೇಳುತ್ತಿದ್ದರೂ ಸಿದ್ದರಾಮಯ್ಯ ಸರ್ಕಾರ ವರದಿ ಸಲ್ಲಿಸುವ ಬಗ್ಗೆ ಏನನ್ನೂ ಮಾತನಾಡುತ್ತಿಲ್ಲ ಎಂದರು.
ಆದಾಗ್ಯೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರಮೋದಿ ಹಾಗೂ ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಬೆದರಿಕೆ ಹಾಕಿದ್ದಾರೆ. ಹಿಂದೆ ಮಾಡಿದ ಆರೋಪಗಳಿಗೆ ಪ್ರತಿಕ್ರಿಯಿಸದ ಸಿದ್ದರಾಮಯ್ಯ, ಸಾಮಾನ್ಯ ಮನುಷ್ಯನನ್ನು ಮೋಸಗೊಳಿಸಲು ನಮ್ಮ ವಿರುದ್ಧ ಮೊಕದ್ದಮೆ ಹೂಡಿದ್ದಾರೆ ನಾವು ಹೆದರುವುದಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ, ಸಚಿವರು, ಸ್ಥಳೀಯ ಶಾಸಕರು ಸೋತರಷ್ಟೇ ಸಾಕು ಆಗುವುದಿಲ್ಲ. ಇಡೀ ರಾಜ್ಯವನ್ನು ಕಾಂಗ್ರೆಸ್ ಮುಕ್ತಗೊಳಿಸಬೇಕು. ಕಮೀಷನ್ ಸರ್ಕಾರದ ವಿರುದ್ಧ ಜನತೆ ಸೂಕ್ತ ಪಾಠ ಕಲಿಸಬೇಕು . ಪ್ರತಿಯೊಬ್ಬ ಕಾರ್ಯಕರ್ತನೂ ಕನಿಷ್ಠ ಪಕ್ಷ 50 ಮತದಾರರಿಗಾದರೂ ಈ ವಿಷಯ ಮುಟ್ಟಿಸಬೇಕು ಎಂದು ಅವರು ಆಗ್ರಹಿಸಿದರು.
ಇದಕ್ಕೂ ಮುನ್ನ ಕೊಲ್ಯದ ಸೌಭಾಗ್ಯಸಭಾ ಭವನದಿಂದ ಉಲ್ಲಾಳ್ ವೃತ್ತದವರೆಗೂ ರೋಡ್ ಶೋ ನಡೆಸಿದ ಅಮಿತ್ ಶಾ, ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂತೋಷ್ ಕುಮಾರ್ ಪರ ಮತ ಚಲಾಯಿಸುವಂತೆ ಮತದಾರರಿಗೆ ಮನವಿ ಮಾಡಿಕೊಂಡರು.
ಎರಡನೇ ಹಂತದ ರೋಡ್ ಶೋ ನವಭಾರತ್ ಸರ್ಕಲ್ ನಿಂದ ಆರಂಭವಾಗಿ ಕಾರ್ ಸ್ಟ್ರೀಟ್ ರಸ್ತೆಯ ವೆಂಕಟರಮಣ ದೇವಸ್ಥಾನದ ಮುಂಭಾಗ ಅಂತ್ಯಗೊಂಡಿತು. ಈ ಸಂದರ್ಭ ಮಾತನಾಡಿದ ಅವರು, ಒಂದು ವೇಳೆ ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು ಜಯಗಳಿಸಿದ್ದರೆ, 23 ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಿರುವ ಎಲ್ಲಾ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದರು.
ಮೇ 15 ರಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಂತ್ಯಗೊಳ್ಳಲಿದ್ದು, ಬಿಜೆಪಿ ಅಧಿಕಾರಕ್ಕೆ ಬರಲಿದೆ. ಯಡಿಯೂರಪ್ಪ ಶೀಘ್ರದಲ್ಲಿಯೇ ಅಧಿಕಾರ ಹಿಡಿಯಲಿದ್ದಾರೆ ಎಂದು ಅಮಿತ್ ಶಾ ಹೇಳಿದರು. ಸಂಸದ ನಳೀನ್ ಕುಮಾರ್ ಕಟೀಲು, ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಕ್ಯಾಪ್ಟನ್ ಗಣೇಶ್ ಕಾರ್ನಿಕ್ ಮೊದಲಾದವರು ಉಪಸ್ಥಿತರಿದ್ದರು.
ನಂತರ ಮಂಗಳೂರಿನಲ್ಲಿ ರೋಡ್ ಶೋ ಮುಗಿಸಿದ ನಂತರ ಕುದ್ರೋಳಿಯ ಗೋಕರ್ಣನಾಥ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೇ ಬ್ರಹ್ಮರ್ಷಿ ನಾರಾಯಣ ಗುರು ಅವರ ಪ್ರತಿಮೆಗೂ ನಮಿಸಿದರು. ತದನಂತರ ಬೆಂಗಳೂರಿಗೆ ವಾಪಾಸ್ಸಾದರು.
Advertisement