ಈ ಬಗ್ಗೆ ಮಾಹಿತಿ ನೀಡಿದ ಸಿದ್ದರಾಮಯ್ಯ ಅವರು, 'ಮಾಜಿ ಸಚಿವ ರಮೇಶ ಜಾರಕಿಹೊಳಿ, ಮಹೇಶ ಕುಮಠಳ್ಳಿ, ಉಮೇಶ ಜಾಧವ್, ಬಿ.ನಾಗೇಂದ್ರ ಸಭೆಗೆ ಬಂದಿಲ್ಲ. ಕಂಪ್ಲಿ ಶಾಸಕ ಜೆ.ಎನ್. ಗಣೇಶ ಅವರೂ ಕೂಡ ಸಭೆಗೆ ಬಂದಿಲ್ಲ. ಆದರೆ ಅವರ ಜತೆ ಗಣೇಶ್ ಇಲ್ಲ. ನಾಲ್ವರು ಅತೃಪ್ತರು ಹಾಜರಾಗಲು ಸಾಧ್ಯವಾಗದಿರಲು ಕಾರಣ ನೀಡಿ ಪತ್ರ ಬರೆದಿದ್ದಾರೆ. ಫೆ.15ರವರೆಗೆ ಬರಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಅವರಿಗೆ ಈಗಾಗಲೇ ಸಾಕಷ್ಟು ಅವಕಾಶ ನೀಡಲಾಗಿದೆ. ಎಲ್ಲ ಶಾಸಕರಿಗೂ ಸದನದಲ್ಲಿ ಪಾಲ್ಗೊಳ್ಳುವಂತೆ ವ್ಹಿಪ್ ಜಾರಿ ಮಾಡಲಾಗಿತ್ತು. ಅಧಿವೇಶನ ಮುಗಿಯುವರೆಗೂ ಬರುವುದಿಲ್ಲ ಎಂದು ನಾಲ್ವರು ಪತ್ರದಲ್ಲಿ ತಿಳಿಸಿದ್ದಾರೆ. ನಾಲ್ವರು ಅತೃಪ್ತರ ವಿರುದ್ದ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಕ್ರಮ ಜರುಗಿಸುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡುತ್ತೇವೆ. ಇದು ಶಾಸಕಾಂಗ ಪಕ್ಷದ ಸಭೆಯಲ್ಲಿ ಅವಿರೋಧವಾಗಿ ಕೈಗೊಂಡ ನಿರ್ಣಯ. ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ನಾಲ್ವರು ಶಾಸಕರನ್ನು ಅನರ್ಹಗೊಳಿಸುವಂತೆ ಸಂಜೆಯೊಳಗೆ ಸಭಾಧ್ಯಕ್ಷರಿಗೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.