ರಾಜಕೀಯ
ಉಪ ಚುನಾವಣೆ: ಕುಂದಗೋಳ, ಚಿಂಚೋಳಿಯಲ್ಲೂ ಮತದಾನ ಆರಂಭ!
ಅತ್ತ ದೇಶದ 8 ರಾಜ್ಯಗಳಲ್ಲಿ ಅಂತಿಮ ಹಂತದ ಮತದಾನ ನಡೆಯುತ್ತಿರುವಂತೆಯೇ ಇತ್ತ ಕರ್ನಾಟಕದ ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ..
ಬೆಂಗಳೂರು: ಅತ್ತ ದೇಶದ 8 ರಾಜ್ಯಗಳಲ್ಲಿ ಅಂತಿಮ ಹಂತದ ಮತದಾನ ನಡೆಯುತ್ತಿರುವಂತೆಯೇ ಇತ್ತ ಕರ್ನಾಟಕದ ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನ ಆರಂಭಗೊಂಡಿದೆ.
ದಿನಕ್ಕೊಂದು ರಾಜಕೀಯ ಹೈಡ್ರಾಮಾಗಳಿಗೆ ಸಾಕ್ಷಿಯಾಗುತ್ತಿರುವ ಕರ್ನಾಟಕ ಮೈತ್ರಿ ರಾಜಕಾರಣದ ಭವಿಷ್ಯಕ್ಕೆ ದಿಕ್ಸೂಚಿ ಎಂದೇ ವಿಶ್ಲೇಷಿಸಲಾಗುತ್ತಿರುವ ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭೆ ಕ್ಷೇತ್ರಗಳಿಗೂ ಮತದಾನ ಆರಂಭಗೊಂಡಿದೆ. ಈ ಚುನಾವಣೆ ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಸರ್ಕಾರಕ್ಕೆ ಪ್ರತಿಷ್ಟೆಯ ಪ್ರಶ್ನೆಯಾಗಿದ್ದರೆ, ಬಿಜೆಪಿಗೆ ಅಸ್ಥಿತ್ವದ ಪ್ರಶ್ನೆಯಾಗಿ ಮಾರ್ಪಟ್ಟಿದೆ.
ಈಗಾಗಲೇ ಈ ಎರಡೂ ಕ್ಷೇತ್ರಗಳ ಬಹಿರಂಗ ಪ್ರಚಾರಕ್ಕೆ ಶುಕ್ರವಾರ ತೆರೆಬಿದ್ದಿದ್ದು, ರಾಜಕೀಯ ಮುಖಂಡರು ಕ್ಷೇತ್ರ ತೊರೆದಿದ್ದಾರೆ. ಕುಂದಗೋಳ, ಚಿಂಚೋಳಿಯಲ್ಲಿ ಒಟ್ಟು 25 ಅಭ್ಯರ್ಥಿಗಳ ಭವಿಷ್ಯ ಭಾನುವಾರ ನಿರ್ಧಾರವಾಗಲಿದ್ದು, ಕುಂದಗೋಳ ಕ್ಷೇತ್ರದಲ್ಲಿ ಒಟ್ಟು 1,89,437 ಮತದಾರರಿದ್ದರೆ, ಚಿಂಚೋಳಿಯಲ್ಲಿ 1,93,871 ಮತದಾರರಿದ್ದಾರೆ.
ದೋಸ್ತಿ ಸರ್ಕಾರ ವರ್ಸಸ್ ಬಿಜೆಪಿ
ಇನ್ನು ಸಿಎಸ್ ಶಿವಳ್ಳಿ ಸಾವಿನಿಂದ ತೆರವಾಗಿದ್ದ ಕುಂದಗೋಳ ಹಾಗೂ ಉಮೇಶ್ ಜಾಧವ್ ರಾಜೀನಾಮೆಯಿಂದ ತೆರವಾಗಿದ್ದ ಚಿಂಚೋಳಿ ಕ್ಷೇತ್ರಗಳು ಕಾಂಗ್ರೆಸ್ ಹಾಗೂ ಬಿಜೆಪಿಗೆ ಸೀಟು ಹೆಚ್ಚಳದ ದೃಷ್ಟಿಯಿಂದ ಅತಿ ಮುಖ್ಯ ಚುನಾವಣೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ಘಟಾನುಘಟಿ ನಾಯಕರು ಕ್ಷೇತ್ರಗಳಲ್ಲಿ ಮೊಕ್ಕಂ ಹೂಡಿ ಒಂದು ತಿಂಗಳ ಕಾಲ ಚುನಾವಣಾ ಪ್ರಚಾರ ನಡೆಸಿದರು. ಕುಂದಗೋಳ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿನ ಹೊಣೆ ಹೊತ್ತ ಡಿಕೆ ಶಿವಕುಮಾರ್ ಚುನಾವಣಾ ಪ್ರಚಾರ ಆರಂಭವಾದಾಗಿನಿಂದ ಸ್ಥಳದಲ್ಲಿ ಮೊಕ್ಕಂ ಹೂಡಿ ಕುಸುಮಾ ಶಿವಳ್ಳಿ ಪರ ಪ್ರಚಾರ ನಡೆಸಿದ್ದರು. ಇನ್ನು ಸಿದ್ದರಾಮಯ್ಯ , ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಕೂಡ ಎರಡು ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ನಡೆಸಿದರು.
ಕಾಂಗ್ರೆಸ್ ನಾಯಕರಿಗೆ ಕಡಿಮೆ ಇಲ್ಲದಂತೆ ಬಿಜೆಪಿ ನಾಯಕರು ಕೂಡ ವೀರಶೈವ ಧರ್ಮವನ್ನು ಅಸ್ತ್ರವಾಗಿಸಿಕೊಂಡು ಎರಡು ಕ್ಷೇತ್ರದಲ್ಲಿ ಮತಯಾಚಿಸಿದರು. ಬಿಎಸ್ ಯಡಿಯೂರಪ್ಪ,ಕೆಎಸ್ ಈಶ್ವರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಜಾಧವ್ ಮಗ ಅವಿನಾಶ್ ಜಾಧವ್, ಚಿಕ್ಕನಗೌಡ್ರ ಪರ ಭರ್ಜರಿ ಪ್ರಚಾರ ನಡೆಸಿದ್ದರು.