ದಾವಣಗೆರೆ: ನಾನು ಕುರುಬ ಸಮುದಾಯದವನಲ್ಲ, ಜಾತಿ ಎತ್ತಿ ಕಟ್ಟಿದರೆ ವೋಟು ಬೀಳುತ್ತದೆ ಎಂಬ ಭ್ರಮೆ ನನಗಿಲ್ಲ ಎಂದು ಸಚಿವ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ದಾವಣೆಗೆರೆಯ ಹೈಸ್ಕೂಲ್ ಮೈದಾನದಲ್ಲಿ ಜರುಗುತ್ತಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಈಶ್ವರಪ್ಪ ಅವರು, 'ಜಾತಿಗಳು ಒಂದಾಗಬೇಕು ಎಂಬ ಚಿಂತನೆ ತಪ್ಪಲ್ಲ. ಆದರೆ ಒಂದು ಜಾತಿಯನ್ನು ಇನ್ನೊಂದು ಜಾತಿಯ ವಿರುದ್ಧ ಎತ್ತಿಕಟ್ಟುವವರು ಮನುಷ್ಯರೇ ಅಲ್ಲ. ಹಿಂದಿನ ಸರ್ಕಾರವು ಲಿಂಗಾಯತ ಮತ್ತು ವೀರಶೈವ ಎಂದು ಒಡೆಯಲು ನೋಡಿತು. ಈಗ ಅವರೆಲ್ಲ ನೆಗೆದುಬಿದ್ದು ಹೋದರು. ಜಾತಿ ಎತ್ತಿ ಕಟ್ಟಿದರೆ ವೋಟು ಬೀಳುತ್ತದೆ ಎಂಬ ಭ್ರಮೆ ಅವರಿಗಿತ್ತು. ಈಗ ತಪ್ಪು ಮಾಡಿರುವುದಾಗಿ ಹೇಳುತ್ತಿದ್ದಾರೆ. ಧರ್ಮ ಒಡೆಯುವವರನ್ನು ದೂರ ಇಡುವ ಕೆಲಸವಾಗಬೇಕು ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಇದೇ ವೇಳೆ ನಾನು ವೀರಶೈವನೂ ಅಲ್ಲ, ಲಿಂಗಾಯತನೂ ಅಲ್ಲ. ಕುರುಬ ಅಲ್ಲವೇ ಅಲ್ಲ ಎಂದು ಹೇಳಿದ ಈಶ್ವರಪ್ಪ, 'ಹಿಂದೆ ಸ್ವಾಮೀಜಿಗಳ ಪಾದ ಮುಟ್ಟಿ ಭಕ್ತಿಯಿಂದ ನಮಸ್ಕರಿಸುತ್ತಿದ್ದರು. ಈಗ ಯಾವ ಸ್ವಾಮೀಜಿ ಎಂದು ನೋಡುತ್ತಾರೆ. ಅವರ ಜಾತಿಯವರಾದರೆ ಕಾಲು ಮುಟ್ಟುವುದು, ಇಲ್ಲವೆಂದರೆ ಕಾಲು ಮುರಿಯುವುದು ಆಗಿದೆ ಎಂದು ಹೇಳಿದರು.
ಗುರುಗಳ ಪಾದತೊಳೆದು ನೀರು ಕುಡಿದರೆ ಆರೋಗ್ಯಕ್ಕೆ ಹಾನಿ ಎನ್ನುತ್ತಾರೆ. ರಾತ್ರಿ ಹೆಂಡ ಕುಡಿದರೆ ಆರೋಗ್ಯಕ್ಕೆ ಹಾನಿಯಾಗುವುದಿಲ್ವ. ಅದರ ಬಗ್ಗೆ ಮಾತನಾಡುವುದಿಲ್ಲ. ನಾವು ತೀರ್ಥ ಸೇವಿಸಿದರೆ ಮಾತನಾಡುತ್ತಾರೆ. ಹಿಂದೊಮ್ಮೆ ಜೇವರ್ಗಿಯಲ್ಲಿ ಅಡ್ಡಪಲ್ಲಕ್ಕಿ ಮಾಡಬೇಕಾ ಬೇಡ್ವ ಎಂದು ಕೆಲವರು ಚರ್ಚೆ ಮಾಡಿದರು. ಸರ್ಕಾರ ಅನುಮತಿ ಕೊಡಲಿಲ್ಲ. ಇನ್ನೊಂದು ಗಂಟೆಯಲ್ಲಿ ಅನುಮತಿ ನೀಡಿಲ್ಲ ಅಂದರೆ ನೀನು ಮುಖ್ಯಮಂತ್ರಿಯಾಗಿ ಉಳಿಯಲ್ಲ ಎಂದು ಶಾಪ ಕೊಡುವುದಾಗಿ ಸ್ವಾಮೀಜಿ ಹೇಳಿದ ಕೂಡಲೇ ಅನುಮತಿ ಕೊಟ್ಟರು. ಇದು ಸ್ವಾಮೀಜಿಯ ಶಕ್ತಿ ಎಂದು ಈಶ್ವರಪ್ಪ ಹೇಳಿದರು.
Advertisement