ಬೆಂಗಳೂರು: ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರದ್ದು ಬರೀ ರಾಜಕೀಯ ಲೆಕ್ಕಚಾರ ಮಾತ್ರ, ಲಾಭವಿಲ್ಲದೇ ಅವರು ಏನನ್ನೂ ಮಾಡುವುದಿಲ್ಲ, ರಾಜಕೀಯ ಲಾಭಕ್ಕಾಗಿಯೇ ಅವರು ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರ ಪ್ರತಿಯೊಂದು ಹೇಳಿಕೆಯ ಹಿಂದೆಯೂ ಲಾಭದ ಲೆಕ್ಕಾಚಾರ ಇರುತ್ತದೆ. ದೇವೇಗೌಡ ಕುಟುಂಬದಂತೆ ಸಿದ್ದರಾಮಯ್ಯ ಕೀಳುಮಟ್ಟದ ರಾಜಕಾರಣ ಮಾಡುವುದಿಲ್ಲ. ಅವರೊಬ್ಬ 'ಮೇರುಮಟ್ಟದ ರಾಜಕಾರಣಿ ' ಎಂದು ತಮ್ಮ ನಾಯಕರನ್ನು ಸಮರ್ಥಿಸಿಕೊಂಡರು. ಮೈತ್ರಿ ಸರ್ಕಾರ ಪತನಗೊಳ್ಳಲು ಕುಮಾರಸ್ವಾಮಿಯೇ ಕಾರಣ. ಅವರು ಮಾಡಿದ ತಪ್ಪು, ಎಸಗಿದ್ದ ಲೋಪಗಳಿಂದಲೇ ಸರ್ಕಾರ ಬಿದ್ದು ಹೋಯಿತು. ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ತಮಗೆ ಕುಮಾರಸ್ವಾಮಿ ಏನೇನು ಮಾಡಿದ್ದಾರೆ ಎಂಬ ಬಗ್ಗೆ ಚೆನ್ನಾಗಿ ಅರಿವಿದೆ ಎಂದು ತಿರುಗೇಟು ನೀಡಿದರು.
ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಯಾರೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಿಲ್ಲ. ಅವರಿಗೆ ಕಣ್ಣೀರು ಹಾಕಿಸಿದ್ದು ಯಾರು ಎಂಬುದು ತೋರಿಸಲಿ ಎಂದು ಜಮೀರ್ ಸವಾಲು ಹಾಕಿದರು. ಐಎಂಎ ವಂಚನೆ ಪ್ರಕರಣವನ್ನು ಎಸ್ಐಟಿಗೆ ನೀಡುವ ಮೂಲಕ ಕುಮಾರಸ್ವಾಮಿ ನಿಮ್ಮನ್ನು ಜೈಲಿಗೆ ಕಳುಹಿಸಲು ಯೋಜನೆ ರೂಪಿಸಿದ್ದರು ಎನ್ನುವ ವಿಚಾರ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಕಿಡಿಕಾರಿದ ಜಮೀರ್, ನನ್ನನ್ನು ಜೈಲಿಗೆ ಕಳುಹಿಸಲು ಕುಮಾರಸ್ವಾಮಿ ಯಾರು ? ಎಂದು ಪ್ರಶ್ನಿಸಿದರು.
ಐಎಂಎನಿಂದ ಬಡಜನರಿಗೆ ಅನ್ಯಾಯವಾಗಿದೆ. ವಂಚನೆ ಪ್ರಕರಣ ಬಗ್ಗೆ ತನಿಖೆಯಾಗಬೇಕೆಂದು ಮೈತ್ರಿ ಸರ್ಕಾರದಲ್ಲಿ ಒತ್ತಾಯ ತಂದಿದ್ದೆ. ಪ್ರಕರಣವನ್ನು ಸಿಬಿಐಗೆ ವಹಿಸಿರುವ ಸರ್ಕಾರದ ಕ್ರಮ ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
Advertisement