ಅತೃಪ್ತ ಶಾಸಕರಿಗೆ ರಿಲೀಫ್: ರಾಜಿನಾಮೆ ಬಗ್ಗೆ ನಿರ್ದಿಷ್ಟ ಸಮಯದಲ್ಲಿ ನಿರ್ಧರಿಸುವ ವಿವೇಚನೆ ಸ್ಪೀಕರ್ ಗೆ ಬಿಟ್ಟದ್ದು; ಸುಪ್ರೀಂ ಕೋರ್ಟ್
ಅತೃಪ್ತ ಶಾಸಕರ ರಾಜಿನಾಮೆ ಕುರಿತು ಇಂದು ಸುಪ್ರೀಂಕೋರ್ಟ್ ತನ್ನ ತೀರ್ಪು ಪ್ರಕಟಿಸಿದ್ದು, ನಿರ್ಧಿಷ್ಟ ಸಮಯದಲ್ಲಿ ರಾಜಿನಾಮೆ ಬಗ್ಗೆ ನಿರ್ಧಾರ ಮಾಡಬೇಕು ಎಂದು ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ನವದೆಹಲಿ: ಅತೃಪ್ತ ಶಾಸಕರ ರಾಜಿನಾಮೆ ಕುರಿತು ಇಂದು ಸುಪ್ರೀಂಕೋರ್ಟ್ ತನ್ನ ತೀರ್ಪು ಪ್ರಕಟಿಸಿದ್ದು, ನಿರ್ಧಿಷ್ಟ ಸಮಯದಲ್ಲಿ ರಾಜಿನಾಮೆ ಬಗ್ಗೆ ನಿರ್ಧಾರ ಮಾಡಬೇಕು ಎಂದು ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ನಿನ್ನೆ ಅತೃಪ್ತ ಶಾಸಕರ ಪರ ವಕೀಲರ ಪರ - ವಿರೋಧ ವಾಗಳನ್ನು ಆಲಿಸಿದ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಅವರನ್ನೊಳಗೊಂಡ ಪೀಠ ಈ ಆದೇಶ ಹೊರಡಿಸಿದೆ. ಈ ಪ್ರಕರಣದಲ್ಲಿ ತಾನು ಮಧ್ಯಸ್ಥಿಕೆ ವಹಿಸುವುದಿಲ್ಲವೆಂದು ಹೇಳಿರುವ ನ್ಯಾಯಾಲಯ ಸ್ಪೀಕರ್ ಹುದ್ದೆಯ ಘನತೆ ಎತ್ತಿ ಹಿಡಿದಿದೆ.
ಸುಪ್ರೀಂ ಕೋರ್ಟ್ ನ ಈ ತೀರ್ಪಿನಿಂದಾಗಿ ಅತೃಪ್ತ ಶಾಸಕರಿಗೆ ಬಿಗ್ ರಿಲೀಫ್ ನೀಡಿದೆ. ರಾಜಿನಾಮೆ ನೀಡಿರುವ 15 ಶಾಸಕರನ್ನು ವಿಧಾನಸಭೆಗೆ ಹಾಜರಾಗಬೇಕೆಂದು ಒತ್ತಾಯ ಮಾಡುವಂತಿಲ್ಲ ಎಂದು ಹೇಳಿದೆ, ಈ ಮೂಲಕ ಶಾಸಕರಿಗೆ ನೀಡಿದ ವಿಪ್ ಗೆ ಮಾನ್ಯತೆ ಇರುವುದಿಲ್ಲ.
ನಾಳೆ ಸಿಎಂ ಕುಮಾರಸ್ವಾಮಿ ಸದನದಲ್ಲಿ ವಿಶ್ವಾಸ ಮತ ಯಾಚನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಸದನಕ್ಕೆ ಬರುವಂತೆ ಒತ್ತಡ ಹಾಕುವಂತಿಲ್ಲ, ಎಲ್ಲರೂ ಸಂವಿಧಾನವನ್ನು ಕಾಪಾಡಬೇಕು ಎಂದು ಹೇಳಿರುವ ಸುಪ್ರೀಂಕೋರ್ಟ್, ಸದನಕ್ಕೆ ಹಾಜರಾಗುವುದು ಶಾಸಕರ ವಿವೇಚನೆಗೆ ಬಿಟ್ಟ ವಿಷಯ ಎಂದು ಹೇಳಿದೆ.