ಬೆಂಗಳೂರು: ಇದು ಅಂತ್ಯವಲ್ಲ, ಪ್ರಾರಂಭ. ಲಂಚ ಹೊಡೆದಿಲ್ಲ, ಯಾವುದೇ ಮೋಸ ಮಾಡಿಲ್ಲ ಎಂದು ಡಿಕೆ ಶಿವಕುಮಾರ್ ಬೆಂಗಳೂರಿಗೆ ಬರುತ್ತಿದ್ದಂತೆ ಎದುರಾಳಿಗಳ ವಿರುದ್ಧ ಘರ್ಜಿಸಿದ್ದಾರೆ.
ಸಾದಹಳ್ಳಿ ಗೇಟ್ ಬಳಿ ಬೃಹತ್ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಅವರು, ನನ್ನ 40 ವರ್ಷದ ರಾಜಕೀಯವನ್ನು ಮುಗಿಸಲು ಷಡ್ಯಂತ್ರ್ಯ ಮಾಡಿ ಜೈಲಿಗೆ ಹಾಕಲಾಗಿತ್ತು. ನಾನು ಯಾವುದೇ ರೀತಿಯಲ್ಲೂ ಮೋಸ ಮಾಡಿಲ್ಲ, ಇದು ಒಂದು ದಿನಕ್ಕೆ ಮುಗಿಯುವುದಿಲ್ಲ, ಆರಂಭ ಅಷ್ಟೇ ಎಂದರು.
ಡಿಕೆ ಶಿವಕುಮಾರ್ ಅಳುವ ಮಗನಲ್ಲ,ನೋವಿಂದ ಕಣ್ಣೀರು ಬಂದಿಲ್ಲ, ನಿಮ್ಮ ಅಭಿಮಾನ, ಪ್ರೀತಿಗೆ ಕಣ್ಣೀರು ಬಂದಿದೆ. ಅನ್ಯಾಯದ ವಿರುದ್ಧ ಹಗಲು ರಾತ್ರಿ ಹೋರಾಟ ಮಾಡಿದ್ದೀರಿ, ನಿಮ್ಮ ಋಣ ತೀರಿಸಲು ಅವಕಾಶ ಮಾಡಿಕೊಡಿ ಎಂದರು.
ನಾನು ಒಂದು ಕುಟುಂಬದ ಆಸ್ತಿ ಇಲ್ಲ, ನಿಮ್ಮಗಳ ಆಸ್ತಿ, ಒಟ್ಟಿಗೆ ಕೂಡಿ ಕೆಲಸ ಮಾಡೋಣ,ಸತ್ಯ, ಕಾಲ, ನ್ಯಾಯ ಮೂರು ಕೂಡಾ ಸೂಕ್ತ ವೇಳೆಯಲ್ಲಿ ಉತ್ತರ ನೀಡಲಿವೆ ಎಂದು ಅವರು ಹೇಳಿದರು.
ಕನ್ನಡಪರ ಸಂಘಟನೆಗಳು, ಶಾಸಕರು, ಸಮುದಾಯ ಸೇರಿದಂತೆ ಬಿಜೆಪಿಯ ಹಲವು ಗೆಳೆಯರು ಮಾಡಿರುವ ಸಹಾಯವನ್ನು ತೀರಿಸಲು ಅವಕಾಶ ಮಾಡಿಕೊಡುವಂತೆ ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಡಿಕೆ ಶಿವಕುಮಾರ್ ಹೇಳಿದರು.
Advertisement