ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನಿನ ಮೇರೆಗೆ ತಿಹಾರ್ ಜೈಲಿನಿಂದ ಬಿಡುಗಡೆಯಾಗಿ ನಿನ್ನೆಯಷ್ಟೇ ಬೆಂಗಳೂರಿಗೆ ಬಂದಿರುವ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಬೆಳಗ್ಗೆಯಿಂದಲೇ ಜನಸಾಗರವೇ ಹರಿದು ಬರುತ್ತಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಭೇಟಿ ನೀಡಿದ್ದು, ಆತ್ಮಸ್ಥೈರ್ಯ ತುಂಬಿದ್ದಾರೆ
ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಪಕ್ಷ ಭೇದ ಮರೆತು ಹಲವು ಶಾಸಕರು, ಮುಖಂಡರು ತಮ್ಮನ್ನು ಭೇಟಿಯಾಗಿ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ. ಅವರಿಗೆ ಆಭಾರಿಯಾಗಿರುವುದಾಗಿ ತಿಳಿಸಿದರು.
ತಮ್ಮ ತಾಯಿ ಹಾಗೂ ಪತ್ನಿಯ ಪ್ರಕರಣ ದೆಹಲಿಯ ಹೈಕೋರ್ಟ್ ನಲ್ಲಿದೆ. ವಕೀಲರನ್ನು ಹೇಳಿದ್ದನ್ನು ಕೇಳಿಸಿಕೊಂಡರೆ ಆಗುವುದಿಲ್ಲ, ಕಾನೂನು ತಜ್ಞರ ಸಲಹೆಯನ್ನು ಪಡೆಯಬೇಕಾಗಿದೆ. ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕಾಗಿದೆ
ಇಡಿ ವಿಚಾರಣೆ ಹಿನ್ನೆಲೆಯಲ್ಲಿ ಗೌರಿ ಗಣೇಶ ಹಬ್ಬದ ದಿನವೇ ತಂದೆಗೆ ಎಡೆ ಇಡಲು ಅವಕಾಶ ಮಾಡಿಕೊಟ್ಟಿಲ್ಲ. ನನ್ನ ಹಿರಿಯ ಮಗ ಹಿರಿಯರಿಗೆ ಎಡೆಕಾರ್ಯ ನಡೆಸಿದ್ದಾನೆ. ಆರೋಗ್ಯದ ಸಮಸ್ಯೆ ಇದ್ದು, ವೈದ್ಯರನ್ನು ಭೇಟಿಯಾಗಬೇಕಾಗಿದೆ. ನಾಳೆ ದೊಡ್ಡ ಆಲನಹಳ್ಳಿಗೆ ಭೇಟಿ ನೀಡುವುದಾಗಿ ಅವರು ಹೇಳಿದರು.
ಅನರ್ಹ ಶಾಸಕರ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ನಡೆಯುತ್ತಿದ್ದು,ಉಪ ಚುನಾವಣೆ ನಡೆಯುತ್ತದೆಯೋ ಇಲ್ಲವೋ ಎಂಬುದು ಗೊತ್ತಿಲ್ಲ. ಅಂದು ಪಕ್ಷದ ಅಧ್ಯಕ್ಷರ ಆದೇಶದಂತೆ ನಡೆಯುತ್ತಿದೆ. ಇಂದು ಕೂಡಾ ಅವರ ಆದೇಶದಂತೆಯೇ ನಡೆಯುತ್ತೇನೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
Advertisement