ಬೆಂಗಳೂರು: ಇದೇ ಡಿಸೆಂಬರ್ 15 ರಂದು ನಡೆದ ವಿಧಾನ ಪರಿಷತ್ ಗದ್ದಲ, ಕೋಲಾಹಲದ ವೇಳೆ ಅಂಸವಿಧಾನಿಕವಾಗಿ ನಡೆದುಕೊಂಡ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಸದಸ್ಯ ಪಿ.ಆರ್. ರಮೇಶ್ ಸಭಾಪತಿಗೆ ದೂರು ಸಲ್ಲಿಸಿದ್ದಾರೆ.
ಡಿಸೆಂಬರ್ 15 ರಂದು ಸಭಾಪತಿ ಸದನಕ್ಕೆ ಹಾಜರಾಗುವ ಮಾಹಿತಿ ಇದ್ದರೂ, ನಿಯಮ ಬಾಹಿರವಾಗಿ ಉಪ ಸಭಾಪತಿ ಧರ್ಮೇಗೌಡ ಸಭಾಪತಿ ಪೀಠದ ಮೇಲೆ ಬಂದು ಕುಳಿತುಕೊಂಡಿದ್ದು, ಅವರಿಗೆ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ್ ನಾರಾಯಣ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲ್ಲದೆ ಸಭಾಪತಿಗಳು ಸದನದ ಒಳಗೆ ಪ್ರವೇಶಿಸದಂತೆ ತಡೆಯಲು ಕಾನೂನು ಕೈಗೆತ್ತಿಕೊಂಡು, ಬಲಪ್ರಯೋಗ ಮಾಡಿ ಅಹಿತಕರವಾಗಿ ನಡೆದುಕೊಂಡ ಬಿಜೆಪಿ ಸದಸ್ಯರಾದ ವೈ.ಎ. ನಾರಾಯಣಸ್ವಾಮಿ, ಅರುಣ್ ಶಹಾಪುರ್ ಹಾಗೂ ಪ್ರಾಣೇಶ್ ಅವರನ್ನು ಸದನದಿಂದ ಉಚ್ಚಾಟಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಭಾಪತಿಗಳ ಪೀಠದ ಸುತ್ತಲೂ ಗುಂಪುಗೂಡಿ, ಹಿರಿಯ ಸದಸ್ಯರ ಮೇಲೆ ಬಲ ಪ್ರಯೋಗ ಮಾಡಿದ ಬಿಜೆಪಿ ಸದಸ್ಯರಾದ ಅಯನೂರು ಮಂಜುನಾಥ, ರವಿಕುಮಾರ್, ತೇಜಸ್ವಿನಿಗೌಡ, ಪುಟ್ಟಣ್ಣ, ಸುನೀಲ್ ವಲ್ಯಾಪುರೆ ಹಾಗೂ ಜೆಡಿಎಸ್ನ ಸದಸ್ಯರಾದ ಗೋವಿಂದರಾಜು, ರಮೇಶ್ ಗೌಡ, ಶ್ರೀಕಂಠೇಗೌಡ ಹಾಗೂ ಅಸಂಸದೀಯ ಚಟುವಟಿಕೆಗಳಲ್ಲಿ ತೊಡಗಿದ್ದ ಇತರ ಸದಸ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
Advertisement