ಕೊಪ್ಪಳ:ಮಾರ್ಚ್ 2 ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಮಾರ್ಚ್ 4 ಮತ್ತು 5 ರಂದು ಎಲ್ಲಾ ಶಾಸಕರಿಗೂ ಸಂವಿಧಾನದ ಬಗ್ಗೆ ಮಾತನಾಡಲು ಅವಕಾಶ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ವಿವರವಾದ ಚರ್ಚೆಗೆ ಅನುಕೂಲವಾಗುವಂತೆ, ಶಾಸಕರಿಗೆ ಸಂವಿಧಾನದ ಕನ್ನಡ ಪ್ರತಿಗಳನ್ನು ಒದಗಿಸಲಾಗುತ್ತಿದೆ ಎಂದು ಕುಕನೂರಿನಲ್ಲಿ ಯಡಿಯೂರಪ್ಪ ತಿಳಿಸಿದರು.
ಸಂವಿಧಾನ ಅಳವಡಿಸಿಕೊಂಡು 70 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆಯಲ್ಲಿ ವಿಶೇಷ ಅಧಿವೇಶನವೊಂದನ್ನು ನಡೆಸಲಾಗುತ್ತಿದೆ. ಎರಡು ದಿನಗಳ ಈ ಅಧಿವೇಶನದಲ್ಲಿ ಸಂವಿಧಾನದ ಬಗ್ಗೆ ಚರ್ಚೆ ನಡೆಯಲಿದೆ.
ಸಂವಿಧಾನದ ಬಗ್ಗೆ ಚರ್ಚೆ ವೇಳೆ ಬೆಳಕು ಚೆಲ್ಲಲಾಗುತ್ತದೆ. ಎಲ್ಲಾ ಶಾಸಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸ್ಪೀಕರ್ ವಿಶ್ವೇಶರ ಹೆಗಡೆ ಕಾಗೇರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ ಮುಂತಾದ ವಿಷಯಗಳು ಚರ್ಚೆಯಲ್ಲಿ ಕಂಡುಬರಬಹುದು ಎಂಬ ಆತಂಕಗಳಿವೆ.
ಮಾರ್ಚ್ 5 ರಂದು ರಾಜ್ಯ ಮುಂಗಡ ಪತ್ರ ಮಂಡನೆಗೆ ಸಿದ್ಧತಾ ಕಾರ್ಯ ನಡೆದಿದ್ದು, ಕೊಪ್ಪಳ ಸೇರಿದಂತೆ ಉತ್ತರ ಕರ್ನಾಚಕ ಭಾಗದ ರೈತರ ಸಮಸ್ಯೆಗಳಿಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
Advertisement