ಸಂಪುಟ ವಿಸ್ತರಣೆ, ನಾಯಕತ್ವ ಬದಲಾವಣೆ ಕೂಗಿನ ನಡುವೆಯೇ ಕುತೂಹಲ ಕೆರಳಿಸಿದ ಅಮಿತ್ ಶಾ ರಾಜ್ಯ ಪ್ರವಾಸ!

ಮುಖ್ಯಮಂತ್ರಿ ಬದಲಾವಣೆ ವಿಚಾರ ಇನ್ನೂ ರಾಜ್ಯ ರಾಜಕೀಯದಲ್ಲಿ ಚರ್ಚೆಯ ವಿಷಯವಾಗಿರುವುದರಿಂದ, ಅಮಿತ್ ಶಾ ಅವರ ಭೇಟಿಯ ವಿಚಾರ ರಾಜ್ಯ ಬಿಜೆಪಿ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ. 
ಅಮಿತ್ ಶಾ
ಅಮಿತ್ ಶಾ

ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ವಿಚಾರ ಇನ್ನೂ ರಾಜ್ಯ ರಾಜಕೀಯದಲ್ಲಿ ಚರ್ಚೆಯ ವಿಷಯವಾಗಿರುವುದರಿಂದ, ಅಮಿತ್ ಶಾ ಅವರ ಭೇಟಿಯ ವಿಚಾರ ರಾಜ್ಯ ಬಿಜೆಪಿ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ. 

ಕೇಂದ್ರ ಗೃಹಸಚಿವ ಅಮಿತ್ ಶಾ ಎರಡು ದಿನಗಳ ಭೇಟಿಗಾಗಿ ಜನವರಿ ಮೂರನೇ ವಾರದಲ್ಲಿ ಕರ್ನಾಟಕಕ್ಕೆ ಬರಲಿದ್ದಾರೆ. ಈ ವೇಳೆ, ಬೆಂಗಳೂರು, ಕಲಬುರಗಿ, ಶಿವಮೊಗ್ಗ ಮತ್ತು ದಾವಣಗೆರೆಯಲ್ಲಿ ಪಕ್ಷದ ಮುಖಂಡರ ಮತ್ತು ಕಾರ್ಯಕರ್ತರ ಜೊತೆ ಸಂವಾದ ನಡೆಸಲಿದ್ದಾರೆ. ಅಮಿತ್ ಶಾ ಅವರ ಭೇಟಿ  ಅಧಿಕೃತವಾಗಿ ಇನ್ನಷ್ಟೇ ಪ್ರಕಟಗೊಳ್ಳಬೇಕಿದ್ದರೂ, ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ವಿಚಾರ ಮತ್ತೆ ವೇಗ ಪಡೆದುಕೊಳ್ಳಲಾರಂಭಿಸಿದೆ. ಬರುವ ಮಕರ ಸಂಕ್ರಾಂತಿಯ ಸಮಯದಲ್ಲಿ ಅಮಿತ್ ಶಾ, ರಾಜ್ಯಕ್ಕೆ ಬರುವ ಸಾಧ್ಯತೆಯಿದೆ.

ಮುಖ್ಯಮಂತ್ರಿ ಬದಲಾವಣೆ ವಿಚಾರ ಇನ್ನೂ ರಾಜ್ಯ ರಾಜಕೀಯದಲ್ಲಿ ಚರ್ಚೆಯ ವಿಷಯವಾಗಿರುವುದರಿಂದ, ಅಮಿತ್ ಶಾ ಅವರ ಭೇಟಿಯ ವಿಚಾರ ರಾಜ್ಯ ಬಿಜೆಪಿ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಇನ್ನು, ಸಚಿವ ಸ್ಥಾನಕ್ಕಾಗಿ ಕಾಯುತ್ತಿರುವರಿಗೂ ಶಾ ಭೇಟಿ ಹೊಸ ಆಶಾಕಿರಣವಾಗುತ್ತಿದೆ. ಕರ್ನಾಟಕದಲ್ಲಿ  ನಾಯಕತ್ವ ಬದಲಾವಣೆಯ ವಿಚಾರ ಇದೀಗ ಮತ್ತೆ ಗರಿಗೆದರಿದಂತಾಗಿದೆ.

ಕೇಂದ್ರೀಯ ಮೀಸಲಾತಿ ಪೊಲೀಸ್ ಪಡೆ ತರಬೇತಿ ಕೇಂದ್ರಗಳನ್ನು ಉದ್ಘಾಟಿಸಲು ಅಮಿತ್ ಶಾ ಅವರು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮತ್ತು ಬಳ್ಳಾರಿ ಜಿಲ್ಲೆಯ ಹೊಸಪೇಟೆಗೆ ತೆರಳಲಿದ್ದಾರೆ. ಹೊಸಪೇಟೆಯಲ್ಲಿ ವಿಶ್ವ  ಪರಂಪರೆಯ ತಾಣವಾದ ಹಂಪಿಗೆ ಅಮಿತ್ ಶಾ ಭೇಟಿ ನೀಡುವ ಸಾಧ್ಯತೆ ಇದೆ. ಶಾ ಭೇಟಿ ಹಿನ್ನಲೆಯಲ್ಲಿ ಸ್ಥಳೀಯ ಆಡಳಿತವು ಶೀಘ್ರದಲ್ಲೇ ಭದ್ರತೆಯನ್ನು ಹೆಚ್ಚಿಸಲು ಮತ್ತು ಇತರ ವ್ಯವಸ್ಥೆಗಳನ್ನು ಮಾಡಲು ನೆಲ ಮಟ್ಟದ ಕೆಲಸವನ್ನು ಪ್ರಾರಂಭಿಸುವ ಸಾಧ್ಯತೆ ಇದೆ. ಬಳಿಕ ಅಮಿತ್ ಶಾ ವಿಜಯಪುರ ಜಿಲ್ಲೆಗೂ ಭೇಟಿ  ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇತ್ತ ಬಿಜೆಪಿ ರಾಜ್ಯದ ಉಪಾಧ್ಯಕ್ಷ ಬಿ.ವೈ.ವಿಜೇಂದ್ರ ಅವರು ದೆಹಲಿಗೆ ಗುರುವಾರ ಭೇಟಿ ನೀಡಿದ್ದು, ಅಲ್ಲಿ ಅವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿಯಾದರು. ಈ ವೇಳೆ ಉಭಯ ನಾಯಕರು ಸಂಪುಟ ವಿಸ್ತರಣೆಯ ಬಗ್ಗೆ ಚರ್ಚಿಸಿದ್ದಾರೆ ಎಂದು  ವರದಿಯಾಗಿದೆ. ಎ ಎಚ್ ವಿಶ್ವನಾಥ್, ಎಂ ಟಿ ಬಿ ನಾಗರಾಜ್, ಆರ್ ಶಂಕರ್ ಮತ್ತು ಮುನಿರತ್ನ ಸೇರಿದಂತೆ ಸಿ ಪಿ ಯೋಗೇಶ್ವರ ಮತ್ತು ಉಮೇಶ್ ಕತ್ತಿ ಅವರನ್ನು ಸಂಪುಟದಲ್ಲಿ ಸೇರಿಸುವ ಒತ್ತಡವಿದೆ. ನಾಯಕತ್ವ ಬದಲಾವಣೆ, ಸುಂಪುಟ ಸ್ಥಾನಕ್ಕಾಗಿ ಲಾಬಿ ಮತ್ತು ರಾಜ್ಯದ ಬಿಜೆಪಿ ನಾಯಕರ ನಡುವಿನ  ಭಿನ್ನಾಭಿಪ್ರಾಯಗಳ ಮಧ್ಯೆಯೇ ಅಮಿತ್ ಶಾ ಅವರ ಕರ್ನಾಟಕ ಭೇಟಿ ತೀವ್ರ ಕುತೂಹಲ ಕೆರಳಿಸಿದೆ. ಶಾ ಭೇಟಿ ವೇಳೆ ಬಿಜೆಪಿ ಪಕ್ಷದಲ್ಲಿನ ಅನಿಶ್ಚಿತತೆಗಳಿಗೆ ತೆರೆ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

ಮುಖ್ಯಮಂತ್ರಿ ಬಿ ಎಸ್ ಯಡಿಯುರಪ್ಪ ಅವರ ಸಂಪುಟದ ಹಿರಿಯ ಸಚಿವರೊಬ್ಬರು, ಪಕ್ಷದ ಹೈಕಮಾಂಡ್ ಸಂಪುಟ ವಿಸ್ತರಣೆಗೆ ಏಕೆ ಅನುಮತಿ ನೀಡುತ್ತಿಲ್ಲ ಎಂಬುದರ ಕುರಿತು ಸುಳಿವು ನೀಡಿದ್ದು, ಅಮಿತ್ ಶಾ ಅವರು ಬಿಎಸ್ ಯಡಿಯೂರಪ್ಪ ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದರು. ಅಲ್ಲದೆ ಅವರೊಂದಿಗೆ  ಹಲವಾರು ಸಂದರ್ಭಗಳಲ್ಲಿ ಫೋನ್‌ ನಲ್ಲಿ ಮಾತನಾಡಿದ್ದರು, ಆದರೆ ಏನೂ ಪ್ರಯೋಜನವಾಗಿರಲಿಲ್ಲ. ಆದರೆ ಪ್ರಸ್ತುತ ಷಾ ಅವರ ಭೇಟಿ ನಮಗೆ ಕೆಲವು ಉತ್ತರಗಳನ್ನು ನೀಡುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದ್ದಾರೆ.

ಜನವರಿ 2ರಂದು ಕೋರ್ ಕಮಿಟಿ ಸಭೆ
ಏತನ್ಮಧ್ಯೆ, ಸಂಕ್ರಾಂತಿಯ ನಂತರ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ರವಿ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು. ಜನವರಿ 2 ಮತ್ತು 3 ರಂದು ಶಿವಮೊಗ್ಗದಲ್ಲಿ ಬಿಜೆಪಿ ಕೋರ್ ಸಮಿತಿ ಮತ್ತು ಕಾರ್ಯಕಾರಿ ಸಭೆಗಳನ್ನು ನಡೆಸಲಾಗುತ್ತಿದೆ, ಅಲ್ಲಿ ಮುಂಬರುವ ಬಸವಕಲ್ಯಾಣ ಮತ್ತು  ಮಸ್ಕಿ, ಬೆಳಗಾವಿ ಲೋಕಸಭಾ ಉಪಚುನಾವಣೆಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಆ ಸಮಯಕ್ಕೆ ಗ್ರಾಮ ಪಂಚಾಯತಿ ಚುನಾವಣಾ ಫಲಿತಾಂಶ ಹೊರಬರುವ ಸಾಧ್ಯತೆ ಇದೆ. 2021 ರ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯಲಿರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ  ಚುನಾವಣೆಗಳ ಜೊತೆಗೆ ಪಕ್ಷವು ಈ ವಿಷಯಗಳ ಬಗ್ಗೆಯೂ ಚರ್ಚಿಸಲಿದೆ ಎನ್ನಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com