ಹೊನ್ನಾವರ: ದೆಹಲಿ ಚುನಾವಣಾ ಫಲಿತಾಂಶ ಹಿಡಿದು ಬಿಜೆಪಿ ವಿರುದ್ಧ ಟೀಕೆ ಮಾಡುತ್ತಿರುವ ವಿರೋಧ ಪಕ್ಷಗಳ ನಾಯಕರಿದೆ ಉಪ ಮುಖ್ಯಮಂತ್ರಿ ಡಾ.ಸಿಎನ್ ಅಶ್ವತ್ಥ್ ನಾರಾಯಣ್ ಅವರು ತಿರುಗೇಟು ನೀಡಿದ್ದಾರೆ.
ಹೊನ್ನಾವರದಲ್ಲಿ ಒಕ್ಕಲಿಗ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿರುವ ಅವರು, ದೆಹಲಿ ಚುನಾವಣಾ ಫಲಿತಾಂಶ ಪ್ರಧಾನಮಂತ್ರಿ ನರೇಂದ್ರ ಮೋದಿ ಜನಪ್ರಿಯತೆಯನ್ನು ಕಳೆದುಕೊಳ್ಳುವ ಪ್ರತಿಬಿಂಬಿವಲ್ಲ. ಚುನಾವಣೆ ನಡೆದಿರುವುದು ರಾಜ್ಯದ ವಿಧಾನಸಭಾ ಮಟ್ಟದಲ್ಲಿ. ಸ್ಥಳೀಯ ವಿಚಾರಗಳನ್ನು ಹಿಡಿದು ಸ್ಥಳೀಯ ನಾಯಕರು ಸ್ಪರ್ಧಿಸಿದ್ದಾರೆ. ದೆಹಲಿ ಚುನಾವಣೆ ಸ್ಥಳೀಯ ವಿಚಾರವಾಗಿದ್ದು, ಇದನ್ನು ರಾಷ್ಟ್ರೀಯ ವಿಚಾರಕ್ಕೆ ಹೇಗೆ ತಳಕು ಹಾಕಲಾಗುತ್ತದೆ? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆಯುವ ಸ್ಥಳೀಯ ಚುನಾವಣೆಗೆ ರಾಷ್ಟ್ರೀಯ ವಿಚಾರಗಳನ್ನು ನಾವು ತೆಗೆದುಕೊಳ್ಳಬಹುದೇ? ಚುನಾವಣಾ ಪ್ರಚಾರದ ವೇಳೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಪ್ರಧಾನಿ ಮೋದಿ ವಿರುದ್ಧ ಒಂದು ಸಣ್ಣ ಮಾತನ್ನು ಆಡಿಲ್ಲ. ಈಗಲೂ ಶೇ.75-80ರಷ್ಟು ಮಂದಿ ಪ್ರಧಾನಿ ಮೋದಿಗೆ ಬೆಂಬಲ ನೀಡುತ್ತಿದ್ದಾರೆಂದು ಹೇಳಿದ್ದಾರೆ.
ಇದೇ ವೇಳೆ ಯಡಿಯೂರಪ್ಪ ಸಂಪುಟಕ್ಕೆ ಸೇರ್ಪಡೆಗೊಂಡಿರುವ ನೂತನ ಸಚಿವರಲ್ಲಿ ಅಸಮಾಧಾನ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲ ಸಚಿವರು ಬೇಸರದಲ್ಲಿದ್ದಾರೆ. ಆದರೆ, ಮುಖ್ಯಮಂತ್ರಿಗಳು ಈ ಅಸಮಾಧಾನವನ್ನು ಸರಿಪಡಿಸಲಿದ್ದಾರೆಂದು ತಿಳಿಸಿದ್ದಾರೆ.
ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಟೀಕೆಗಳನ್ನು ಮುಂದುವರೆಸಿದ್ದು, ಇದನ್ನೇ ತನ್ನ ವ್ಯವಹಾರ ಮಾಡಿಕೊಂಡು ಬಿಟ್ಟಿದೆ. ಮೈತ್ರಿ ಸರ್ಕಾರದಲ್ಲಿ ಈ ಹಿಂದೆ ಯಾವುೇದ ಅಭಿವೃದ್ಧಿಗಳಾಗಿರಲಿಲ್ಲ ಎಂದು ಇದೇ ವೇಳೆ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.
ಅಧಿಕಾರಕ್ಕೆ ಬಂದ ಕೆಲವೇ ತಿಂಗಳಿನಲ್ಲಿ ನಾವು ರಾಜ್ಯವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ದಿದ್ದೇವೆ. ಇದನ್ನು ಹೀಗೆಯೇ ಮುಂದುವರೆಸುತ್ತೇವೆ. ನಾವು ಅಧಿಕಾರ ಪೂರ್ಣಗೊಳಿಸುವುದರ ಬಗ್ಗೆ ವಿರೋಧ ಪಕ್ಷಗಳ ನಾಯಕರು ಸಂಶಯ ಪಡುವುದೇನು ಬೇಡ. ಮೂರು ವರ್ಷ, ಮೂರು ತಿಂಗಳು ನಾವು ನಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿಯೇ ತೀರುತ್ತೇವೆಂದು ಹೇಳಿದ್ದಾರೆ.
Advertisement