ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುತ್ತಿದ್ದಂತೆ ಇತ್ತ ರಾಜ್ಯ ಬಿಜೆಪಿ ವಲಯದಲ್ಲಿ ರಾಜಕೀಯ ಚಟುವಟಿಕೆಗಳು ಹೆಚ್ಚು ಪ್ರಖರಗೊಂಡಿವೆ.
ಸಂಪುಟ ಪುನಾರಚನೆಯೋ ಸಂಪುಟ ವಿಸ್ತರಣೆಯೋ ಇನ್ನೂ ಪಕ್ಕಾ ಆಗದಿದ್ದರೂ ಯಡಿಯೂರಪ್ಪ ಸಂಪುಟ ಸೇರಲು ಹಲವರು ಲಾಬಿ ನಡೆಸಿದ್ದರೆ, ಇನ್ನು ಕೆಲವರು ಎಂದಿನಂತೆ ತಮ್ಮ ಪಟ್ಟನ್ನು ಇನ್ನಷ್ಟು ಬಿಗಿಗೊಳಿಸಿದ್ದಾರೆ. ಸಚಿವ ಸ್ಥಾನಕ್ಕೇರಲು ಬಿಜೆಪಿಯಲ್ಲಿ ಜಾತಿವಾರು ಲೆಕ್ಕಾಚಾರ ಶುರುವಾಗಿದೆ.
ಜಾತಿ, ಪ್ರಾದೇಶಿಕ ಪ್ರಾತಿನಿಧ್ಯದ ಆಧಾರದ ಮೇಲೆ ಒತ್ತಡ ಹೇರುವ ಪ್ರಕ್ರಿಯೆ ಆರಂಭವಾಗಿದೆ. ದೆಹಲಿಯಲ್ಲಿ ಸಂಪುಟ ವಿಸ್ತರಣೆ ಕಸರತ್ತು ಜೋರಾಗಿದೆ. ಮೇಲ್ಮನೆ ಸದಸ್ಯ ಹೆಚ್.ವಿಶ್ವನಾಥ್ ಗೆ ಸಂಪುಟ ಸೇರಲು ಜಾತಿ ಅಡ್ಡಿಯಾಗುತ್ತಿದೆ.
ಕುರುಬ ಸಮುದಾಯಕ್ಕೆ ಸೇರಿದ ವಿಶ್ವನಾಥ್ ಒಂದೆಡೆಯಾದರೆ ಇದೇ ಸಮುದಾಯದ ಆರ್.ಶಂಕರ್ ಎಂ.ಟಿ.ಬಿ. ನಾಗರಾಜ್ ಮತ್ತೊಂದೆಡೆ ತನ್ನ ಕಸರತ್ತು ಮುಂದುವರೆಸಿದ್ದಾರೆ. ಈ ಮೂವರು ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದವರು. ಹೀಗಾಗಿ ಕುರುಬ ಸಮುದಾಯದ ಈ ಮೂವರಲ್ಲಿ ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬ ಗೊಂದಲ ಬಿಜೆಪಿಯಲ್ಲಿದೆ.
ಅದೇ ರೀತಿ ಬಲಗೈ ಸಮುದಾಯದ ನಂಜನಗೂಡು ಕ್ಷೇತ್ರದ ಹರ್ಷವರ್ಧನ, ಎಂ.ಪಿ. ಕುಮಾರ ಸ್ವಾಮಿ, ನೆಹರೂ ಓಲೇಕಾರ್ ನಡುವೆಯೂ ಪೈಪೋಟಿ ಏರ್ಪಟ್ಟಿದೆ. ಇನ್ನೊಂದು ಕಡೆ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ನಿರ್ಣಾಯಕ ಆಗಿರುವ ಸಮುದಾಯಕ್ಕೆ ಮಂತ್ರಿಸ್ಥಾನ ಕೊಟ್ಟಿಲ್ಲ ಎಂಬ ಕೂಗು ಕೇಳಿಬಂದಿದೆ. ಬಿಜೆಪಿ ಹಿರಿಯ ನಾಯಕ ಶ್ರೀನಿವಾಸ ಪ್ರಸಾದ್ ತಮ್ಮ ಅಳಿಯ ಹರ್ಷವರ್ಧನ್ ಪರವಾಗಿ ಲಾಬಿ ನಡೆಸುತ್ತಿದ್ದಾರೆ.
ಭೋವಿ ಸಮುದಾಯಕ್ಕೆ ಪ್ರಾತಿನಿಧ್ಯ ಸಿಕ್ಕಿಲ್ಲ ಎನ್ನುವ ಅಸಮಾಧಾನ ಈ ಸಮುದಾಯದ ಶಾಸಕರಲ್ಲಿದೆ. ಭೋವಿ ಜನಾಂಗದ ಚಂದ್ರಪ್ಪ ಅವರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ಕೊಟ್ಟಿದ್ದು, ಅರವಿಂದ ಲಿಂಬಾವಳಿ, ಗೂಳಿ ಹಟ್ಟಿ ಶೇಖರ್ ಅವರಿಂದ ಮಂತ್ರಿಗಿರಿಗೆ ಬೇಡಿಕೆ ಹೆಚ್ಚಿದೆ.
ಇನ್ನು ಪಂಚಮ ಸಾಲಿ ಸಮುದಾಯದಿಂದಲೂ ಸಚಿವ ಸ್ಥಾನಕ್ಕೆ ಶಾಸಕರ ಬೇಡಿಕೆ ಹೆಚ್ಚಿದೆ. ಎಂಟು ಮಂದಿ ಪಂಚಮಸಾಲಿಗರಿದ್ದು, ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್, ಎಂ.ಪಿ.ರೇಣುಕಾಚಾರ್ಯ ಸೇರಿ ಹಲವರಿಂದ ಪ್ರಯತ್ನ ಮುಂದುವರೆದಿದೆ.
Advertisement