ಕಾಂಗ್ರೆಸ್ ನಾಯಕರ ವಿರುದ್ಧ ಅವಾಚ್ಯ ಶಬ್ದ ಬಳಕೆ: ಕ್ಷಮೆ ಕೇಳಿದ ಕೆ.ಎಸ್. ಈಶ್ವರಪ್ಪ

ಕಾಂಗ್ರೆಸ್ ನಾಯಕರ ವಿರುದ್ಧ ಅವಾಚ್ಯ ಶಬ್ದ ಬಳಕೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್  ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಮಾತಿಗೆ ಕ್ಷಮೆ ಕೇಳಿದ್ದಾರೆ.
ಕೆಎಸ್ ಈಶ್ವರಪ್ಪ
ಕೆಎಸ್ ಈಶ್ವರಪ್ಪ

ಬೆಂಗಳೂರು: ಕಾಂಗ್ರೆಸ್ ನಾಯಕರ ವಿರುದ್ಧ ಅವಾಚ್ಯ ಶಬ್ದ ಬಳಕೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್  ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಮಾತಿಗೆ ಕ್ಷಮೆ ಕೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಪದಲ್ಲಿ ಬಾಯಿಯಲ್ಲಿ ಬಂದ ಪದಕ್ಕೆ ಕ್ಷಮೆ ಕೇಳುತ್ತೇನೆ. ಅದನ್ನು ಮುಂದುವರೆಸುವುದು ಬೇಡ, ಆಡಿದ ಮಾತನ್ನು ಹಿಂಪಡೆಯುವುದಾಗಿ ಹೇಳಿದರು.

ಈಶ್ವರಪ್ಪ ಜೋಕರ್ ಎಂದು ಹೆಸರು ಬದಲಿಸಿಕೊಳ್ಳಬೇಕು ಎಂಬ ಕಾಂಗ್ರೆಸ್ ಹೇಳಿಕೆ ವಿಚಾರದ ಪ್ರಶ್ನೆಗೆ ಮತ್ತೆ ಅವ್ಯಾಚ್ಯ ಶಬ್ದ ಬಳಸಿದ ಈಶ್ವರಪ್ಪ,  ಕಾಂಗ್ರೆಸ್ ನವರು 'ಕುಡುಕ ಮಕ್ಕಳು ಎಂದು ಪ್ರತಿಕ್ರಿಯಿಸಿದ್ದರು. ನಂತರ ಆ ಮಾತನ್ನು ಹಿಂದಕ್ಕೆ ಪಡೆಯುತ್ತೇನೆ. ಇದನ್ನು ವಿವಾದ ಮಾಡಬೇಡಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ವಿರುದ್ಧ ಕೆ‌.ಎಸ್ ಈಶ್ವರಪ್ಪ ಅವಾಚ್ಯ ಶಬ್ದ ಬಳಕೆ ಬಗ್ಗೆ ಮೈಸೂರಲ್ಲಿ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಈಶ್ವರಪ್ಪನಿಗೆ ಸಂಸ್ಕಾರ, ಸಂಸ್ಕೃತಿಯೇ ಗೊತ್ತಿಲ್ಲ. ಸಂಸ್ಕಾರ ಇರುವವರು ಅಂತಹ ಪದವನ್ನು ಬಯಸುವುದಿಲ್ಲ. ಈಶ್ವರಪ್ಪ ಬೆಳೆದು ಬಂದಿರುವ ಹಾದಿಯೇ ಹಾಗಿದೆ. ಅವ್ರಿಂದ ಬದಲಾವಣೆಗಳನ್ನು ನಿರೀಕ್ಷೆ ಮಾಡಲೇಬಾರದು‌ ಎಂದು ಟೀಕಿಸಿದರು.

ಆಡಳಿತದಲ್ಲಿರುವವರು ಟೀಕೆಗಳನ್ನ ಆರೋಗ್ಯ ಪೂರ್ಣವಾಗಿ ಸ್ವೀಕರಿಸಬೇಕು. ರಾಜಕಾರಣದಲ್ಲಿ ಟೀಕೆ ಬರುವುದು ಸಹಜ. ಅದಕ್ಕೆ ಈ ರೀತಿ ಪ್ರತಿಕ್ರಿಯೆ ನಿಡೋದು ಸರಿಯಲ್ಲ. ಈಶ್ವರಪ್ಪ ಮೊದಲಿನಿಂದಲೂ ಹೀಗೆಯೇ ಮಾತಾಡುತ್ತಿದ್ದಾರೆ. ಅವರಿಗೆ ಆರೋಗ್ಯಕರವಾದ ಸಂಸ್ಕೃತಿಯೇ ಇಲ್ಲ, ಬಿಜೆಪಿಯವರ ಸಂಸ್ಕೃತಿಯೇ ಇಂತದ್ದು. ಈಶ್ವರಪ್ಪರಿಗೆ ಬಿಜೆಪಿ ಬುದ್ದಿ ಹೇಳುವ ಕೆಲಸ ಮಾಡುತ್ತಿಲ್ಲ ಎಂದು ಕುಟುಕಿದರು.

ಈಶ್ವರಪ್ಪ ತಮ್ಮ ಹೆಸರನ್ನು “ಮೇರಾ ನಾಮ್ ಜೋಕರ್” ಎಂದು ಹೆಸರು ಬದಲಾಯಿಸಿಕೊಳ್ಳಲಿ ಎಂದು ಕಾಂಗ್ರೆಸ್​ ನಾಯಕ ಬಿಕೆ ಹರಿಪ್ರಸಾದ್ ವ್ಯಂಗ್ಯವಾಡಿದರು. ಈಶ್ವರಪ್ಪ ಮಾತನಾಡಿದ್ದು ದ್ವೇಷ ಭಾಷಣ. ಈಶ್ವರಪ್ಪ ತಪ್ಪಲ್ಲ ಅದು, ಅವರು ಕಲಿತ ನಾಗಪುರ ಯುನಿವರ್ಸಿಟಿ ಹೇಳಿಕೊಟ್ಟ ಪಾಠ. ಪ್ರಚೋದನಕಾರಿ ಭಾಷಣದ ವಿರುದ್ದ ತಕ್ಷಣ ಪೊಲೀಸರು ಎಫ್ಐಆರ್ ದಾಖಲಿಸಬೇಕು. ಕರ್ನಾಟಕ ಪೊಲೀಸ್​​ ನಿಷ್ಕ್ರಿಯ ಆಗಿದ್ದಾರೆ, ಸುಮುಟೋ ಕೇಸ್ ದಾಖಲಿಸಬೇಕು ಎಂದರು.

ಈಶ್ವರಪ್ಪ ಅವಾಚ್ಯ ಪದ ಬಳಕೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಕೂಡ ಖಂಡಿಸಿದರು. ಅವರ ನಾಲಿಗೆ ಅವರ ಆಚಾರ ತೋರಿಸುತ್ತದೆ. ಬಿಜೆಪಿ ನಾಯಕರ ತಂದೆ-ತಾಯಂದಿರು ಇಂಥ ಸಂಸ್ಕೃತಿ ಕಲಿಸಿದ್ದಾರೆ. ಇಂಥ ಭಾಷೆ ಬಳಸುವವರನ್ನು ಪಕ್ಷದಿಂದ ಕಿತ್ತುಹಾಕಬೇಕು. ಈ ತರಹ ಕೆಟ್ಟ ಕೆಟ್ಟ ಭಾಷೆ, ಕೆಟ್ಟ ಕೆಟ್ಡ ಪದ ಬೇರೆಯವರಿಗೂ ಗೊತ್ತಿರತ್ತೆ. ಅದೇ ಪದವನ್ನು ಅವರ ಮೇಲೆ ಬಳಸಿದರೆ ಹೇಗಿರತ್ತೆ? ಬಿಜೆಪಿಗೆ ನಾಚಿಕೆಗೇಡಿನ ಸಂಗತಿ, ಬಿಜೆಪಿಗೆ ಒಂದು ಕಳಂಕ ಎಂದು ಕಿಡಿಕಾಡಿದರು.

ಎರಡು ದಿನಗಳ ಹಿಂದೆ ಶಿವಮೊಗ್ಗದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದಾಗ ಈಶ್ವರಪ್ಪ, ಆಗ ಎಲ್ಲ ಸಂದರ್ಭದಲ್ಲಿಯೂ ಸಮಾಧಾನವಾಗಿರಿ ಎಂದು ಹೇಳುತ್ತಿದ್ದೆವು. ಆದರೆ ಇಂದು ಹಾಗಲ್ಲ ಅವರು ಅವರ ಧಾಟಿಯಲ್ಲೇ ಪ್ರತಿಕ್ರಿಯಿಸಬೇಕು. ಫೇಸ್ ವಿತ್ ದಿ ಸೇಮ್ ಸ್ಟಿಕ್. ಯಾವುದರಲ್ಲಿ ಹೊಡೆಯುತ್ತಾರೆಯೋ ಅದರಲ್ಲೇ ಹೊಡೆದು ಒಂದಕ್ಕೆರಡು ತೆಗೆದು ಬಿಡಿ ಎಂದು ಹೇಳಿದ್ದರು. ಈಶ್ವರಪ್ಪರ ಈ ವಿವಾದಾತ್ಮಕ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿ, ಕಾಂಗ್ರೆಸ್ ವಲಯದಿಂದ ತೀವ್ರ ವಿರೋಧ ಕೇಳಿಬಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com