ನಾನು ಸಂದೇಶ ಕೊಡೋಕೆ ಹೋಗ್ತೀನಿ, ತಗೋಳೋಕ್ಕೆ ಹೋಗೋಲ್ಲ: ಸಚಿವ ಆನಂದ್ ಸಿಂಗ್

ದೆಹಲಿ ಭೇಟಿ ಬಳಿಕ ಏನಾಯಿತು ಎಂಬುದನ್ನು ತಿಳಿಯುವ ಸಲುವಾಗಿ ಮುಖ್ಯಮಂತ್ರಿಗಳ ಹಿಂದೆ ಹಿಂದೆ ಓಡಾಡುವ ವ್ಯಕ್ತಿ ನಾನಲ್ಲ. ಇದು ನನ್ನ ವ್ಯಕ್ತಿತ್ವವಲ್ಲ ಎಂದು ಸಚಿವ ಆನಂದ್ ಸಿಂಗ್ ಅವರು ಶುಕ್ರವಾರ ಹೇಳಿದ್ದಾರೆ. 
ಆನಂದ್ ಸಿಂಗ್
ಆನಂದ್ ಸಿಂಗ್
Updated on

ಬೆಂಗಳೂರು: ದೆಹಲಿ ಭೇಟಿ ಬಳಿಕ ಏನಾಯಿತು ಎಂಬುದನ್ನು ತಿಳಿಯುವ ಸಲುವಾಗಿ ಮುಖ್ಯಮಂತ್ರಿಗಳ ಹಿಂದೆ ಹಿಂದೆ ಓಡಾಡುವ ವ್ಯಕ್ತಿ ನಾನಲ್ಲ. ಇದು ನನ್ನ ವ್ಯಕ್ತಿತ್ವವಲ್ಲ ಎಂದು ಸಚಿವ ಆನಂದ್ ಸಿಂಗ್ ಅವರು ಶುಕ್ರವಾರ ಹೇಳಿದ್ದಾರೆ. 

ದೆಹಲಿಗೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಗುರುವಾರ ನಗರಕ್ಕೆ ವಾಪಸ್ಸಾಗಿದ್ದರು. 

ಖಾತೆ ವಿಚಾರಕ್ಕೆ ಮುನಿಸಿಕೊಂಡಿದ್ದ ಸಚಿವ ಆನಂದ್ ಸಿಂಗ್​​ ಇತ್ತೀಚೆಗೆ ದೆಹಲಿಗೆ ತೆರಳಿ ಪ್ರಬಲ ಖಾತೆಯನ್ನು ಪಡೆಯಲು ಲಾಭಿ ನಡೆಸಿದ್ದರು. ಆದರೆ, ಇದು ಸಾಧ್ಯವಾಗದಿದ್ದಾಗ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಮಾತುಗಳು ರಾಜ್ಯ ರಾಜಕಾರಣದಲ್ಲಿ ಕೇಳಿ ಬರುತ್ತಿದ್ದವು. ಆದರೆ ಈ ಮುನಿಸು ಸದ್ಯಕ್ಕೆ ಶಮನವಾಗಿದೆ ಎನ್ನಲಾಗಿದ್ದು, ಆನಂದ್ ಸಿಂಗ್ ಕೊನೆಗೂ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾಗಿ​ ಅಧಿಕಾರ ಸ್ವೀಕರಿಸಿದ್ದಾರೆ. 

ಈ ನಡುವೆ ಈ ಕುರಿತು ಬೊಮ್ಮಾಯಿಯವರು ದೆಹಲಿ ಭೇಟಿ ವೇಳೆ ವರಿಷ್ಠರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿತ್ತು. 

ಈ ಹಿನ್ನೆಲೆಯಲ್ಲಿ ನಿನ್ನೆ ಪ್ರತಿಕ್ರಿಯೆ ನೀಡಿರುವ ಆನಂದ್ ಸಿಂಗ್ ಅವರು, ನನಗೆ ಕೊಟ್ಡಿರುವ ಖಾತೆಗಳು ಅತ್ಯುತ್ತಮ ಖಾತೆ. ಕೆಲವು ವಿಚಾರಗಳನ್ನ‌ ಬಹಿರಂಗವಾಗಿ ಹೇಳೊಕೆ ಆಗಲ್ಲ. ನನಗೆ ಅಸಮಾಧಾನ ಅನ್ನೋದನ್ನ ಎಲ್ಲಿಯಾದರೂ ಹೇಳಿದಿನಾ..? ಕೆಲವೊಂದಿಷ್ಟು ಮನವಿ ಮಾಡಿದ್ದೀನಿ. ಅದನ್ನ ಬಹಿರಂಗವಾಗಿ ಹೇಳೋಕೆ ಆಗಲ್ಲ. ಮನವಿಯನ್ನ ಬಗೆಹರಿಸೋದು ಅವರಿಗೆ ಬಿಟ್ಟಿದ್ದು. ಕೊಟ್ಟಿರುವ ಖಾತೆ ಉತ್ತಮವಾಗಿದೆ. ಖಾತೆ ಬದಲಾವಣೆಗೆ ಈಗ ಸೂಕ್ತ ಸಮಯ ಎಂದು ಪಕ್ಷದ ವರಿಷ್ಠರು ತಿಳಿಸಿದ್ದಾರೆ.‌ ಅವರ ಸಲಹೆಗೆ ತಲೆ ಬಾಗುತ್ತೇನೆ. ನಾನು ನಂಬಿಕೆ, ವಿಶ್ವಾಸದ ಮೇಲೆ ನಡೆಯುವವನು. ಆತ್ಮವಿಶ್ವಾಸದ ಮೇಲೆ ನಡೆಯುವವನು. ಮಾತು ಕೊಟ್ಟ ಮೇಲೆ ಅದೇ ರೀತಿ ನಡೆದುಕೊಳ್ಳುವವನು. ಹಾಗಾಗಿ ಭಾವನಾತ್ಮಕವಾಗಿ ಹಾಗೆ ನಡೆದುಕೊಂಡೆ. ನನಗೆ ಇದೇ ಬೇಕು ಅದೇ ಬೇಕು ಅನ್ನುವವನಲ್ಲ ಎಂದು ಹೇಳಿದ್ದಾರೆ. 

ಬಳಿಕ ಇಲಾಖೆಯ ವಿಚಾರಗಳ ಕುರಿತು ಮಾತನಾಡಿದ ಅವರು, ಈ ಹಿಂದೆ ಇಲಾಖೆ ಜವಾಬ್ದಾರಿ ವಹಿಸಿಕೊಂಡಿರಲಿಲ್ಲ, ನೀವು ಹೆಚ್ಚು ಇದರ ಬಗ್ಗೆ ಬೆಳಕು ಚೆಲ್ಲಿದ್ದೀರಿ. ಬುಧವಾರ ನಾನು ಪರಿಸರ ಇಲಾಖೆಯ ಸಭೆ ನಡೆಸಿದ್ದೇನೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಗ್ರಾಮೀಣ ಭಾಗಗಳಿಗೆ ಹೋಗಲು ಹೆದರುತ್ತಿದ್ದರು. ದೂರು ಬಂದಾಗ ಕ್ರಮ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದರು. ಇದೀಗ ಅವರಿಗೆ ಎಲ್ಲವನ್ನೂ ವಿವರಿಸಿದ್ದೇವೆ ಎಂದು ತಿಳಿಸಿದ್ದಾರೆ.

ಕ್ರಮ ಹೇಗೆ ತೆಗೆದುಕೊಳ್ಳಬೇಕೆಂಬ ಬಗ್ಗೆ ಚರ್ಚೆಯಾಗಿದೆ. ಅರಣ್ಯ ಇಲಾಖೆ ಕಾನೂನು ಬಹಳ ಕಠಿಣವಾಗಿದೆ. ಇದರ ಒಳಗೆ ಹೋಗಲು ಕಷ್ಟವಿದೆ. ಅಲ್ಲಿ ಕಾರ್ಖಾನೆಗಳ ಬಗ್ಗೆ ಗಮನಹರಿಸಲು ಸಾಧ್ಯವಿರಲಿಲ್ಲ. ಆದರೆ ಈಗ ಅಂತಹ ಸಮಸ್ಯೆಯಿಲ್ಲ. ಕಾರ್ಖಾನೆಗಳಿಗೆ ಹೋಗಿ ತಪ್ಪು ಸರಿಪಡಿಸುತ್ತೇವೆ. ಅಂತವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವ ಬಗ್ಗೆ ನಿರ್ಧರಿಸಿದ್ದೇವೆ. ಕಾರ್ಖಾನೆಗಳಿಂದ ನದಿಗೆ ರಾಸಾಯನಿಕ ಸೇರಿಸ್ತಾರೆ, ಇದರಿಂದ ಜನ ಜಾನುವಾರುಗಳಿಗೆ ತೊಂದರೆಯಾಗುತ್ತದೆ. ಇದನ್ನು ತಪ್ಪಿಸುವ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ತೇವೆ. ಕೆರೆಗಳ ನೈರ್ಮಲ್ಯ ಸುಧಾರಣೆಗೆ ಕ್ರಮ ಜರುಗಿಸುತ್ತೇವೆ. ಈ ಬಗ್ಗೆ ನಿನ್ನೆ ಅಧಿಕಾರಿಗಳ ಸಭೆ ನಡೆಸಿದ್ದೇನೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com