ಮೈಸೂರು: ಕಾವೇರಿ ವಿವಾದವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಂದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು, ಕರ್ನಾಟಕದ ಜನರ ಹಿತದೃಷ್ಟಿಯಿಂದ ಮೇಕೆದಾಟು ಸಮಸ್ಯೆಯನ್ನು ಸಹ ಪರಿಹರಿಸಲಾಗುವುದು ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಸಂಸದ, ಈ ಹಿಂದೆ ರಾಜ್ಯವು ತಮಿಳುನಾಡಿಗೆ 195 ಟಿಎಂಸಿ ನೀರನ್ನು ಬಿಡಬೇಕಾಗಿತ್ತು, ಆದರೆ ಮೋದಿ ಸರ್ಕಾರ ಅದನ್ನು 171 ಟಿಎಂಸಿಗೆ ಇಳಿಸಲು ನ್ಯಾಯಾಲಯಕ್ಕೆ ಮನವರಿಕೆ ಮಾಡಿತು, ಇದು ನಮಗೆ ನಮ್ಮ ಪಾಲು ಪಡೆಯಲು ಸಹಾಯ ಮಾಡಿತು ಎಂದರು.
ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೇಕೆದಾಟು ಯೋಜನೆಗೆ ಹಿನ್ನಡೆಯಾಗಿತ್ತು. ಆದರೆ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ನಾವು ಮೇಕೆದಾಟು ಯೋಜನೆ ಬೆಂಬಲಿಸಿದ್ದೇವೆ ಮತ್ತು ಪ್ರಧಾನಿಯನ್ನು ಭೇಟಿ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಯೋಜಿಸಿರುವ ಪಾದಯಾತ್ರೆ "ಮತ್ತೊಂದು ಗಿಮಿಕ್" ಎಂದ ಪ್ರತಾಪ್ ಸಿಂಹ, ತಮ್ಮ ಪಕ್ಷವು ಯೋಜನೆಯನ್ನು ಮುಂದುವರಿಸಲು ಬದ್ಧವಾಗಿರುವಾಗ ಚಳುವಳಿ ಅಥವಾ ಪಾದಯಾತ್ರೆಯ ಅಗತ್ಯವೇನಿದೆ? ಎಂದು ಪ್ರಶ್ನಿಸಿದರು. ಅಲ್ಲದೆ ಪ್ರತಿಪಕ್ಷಗಳು ವಿಧಾನಸಭೆಯಲ್ಲಿ ಈ ವಿಷಯದ ಚರ್ಚೆಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
Advertisement