ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ

ಕೋವಿಡ್ ಬೆಡ್ ಬ್ಲಾಕಿಂಗ್ ಹಗರಣ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಶಾಸಕ ಸತೀಶ್ ರೆಡ್ಡಿ ಬಂಧನಕ್ಕೆ ಕಾಂಗ್ರೆಸ್ ಒತ್ತಾಯ

ಆಡಳಿತಾರೂಢ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರತಿಪಕ್ಷ ಕಾಂಗ್ರೆಸ್, ನಗರದಲ್ಲಿನ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಬೆಡ್ ಬ್ಲಾಕಿಂಗ್ ಹಗರಣದ ಹಿಂದಿರುವ ಆರೋಪದ ಮೇರೆಗೆ ಸಂಸದ ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದೆ.
Published on

ಬೆಂಗಳೂರು: ಆಡಳಿತಾರೂಢ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರತಿಪಕ್ಷ ಕಾಂಗ್ರೆಸ್, ನಗರದಲ್ಲಿನ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಬೆಡ್ ಬ್ಲಾಕಿಂಗ್ ಹಗರಣದ ಹಿಂದಿರುವ ಆರೋಪದ ಮೇರೆಗೆ ಸಂಸದ ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದೆ.

ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ, ಬೊಮ್ಮನಹಳ್ಳಿ ಶಾಸಕ ಎಂ. ಸತೀಶ್ ರೆಡ್ಡಿ ಮತ್ತು ಬಸವನಗುಡಿ
ಶಾಸಕ ರವಿ ಸುಬ್ರಹ್ಮಣ್ಯಂ ಮಂಗಳವಾರ ಬೆಂಗಳೂರಿನಲ್ಲಿ ಬೆಡ್ ಬ್ಲಾಕಿಂಗ್ ಹಗರಣವನ್ನು ಬೆಳಕಿಗೆ ತಂದಿದ್ದರು ಅಲ್ಲದೇ, ಬಿಬಿಎಂಪಿ
ಕೋವಿಡ್ ವಾರ್ ರೂಂನಲ್ಲಿ ನಿಯೋಜಿಸಲ್ಪಟ್ಟ ಕೆಲ ಮುಸ್ಲಿಂರು ಈ ಹಗರಣದಲ್ಲಿ ತೊಡಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.

ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ  ಒಂದೇ ಕೋಮಿನ 17 ಮಂದಿಯ ಹೆಸರನ್ನು ಲೈವ್ ನಲ್ಲಿ ತೇಜಸ್ವಿ ಸೂರ್ಯ
ಓದಿದರೆ, ಇವರನ್ನಾ ಬಿಬಿಎಂಪಿಗೆ ನೇಮಕ ಮಾಡಿದ್ದೀರಾ ಅಥವಾ ಮದರಸಕ್ಕೆ ನೇಮಕ ಮಾಡಿದ್ದೀರಾ ಎಂದು ರವಿಸುಬ್ರಹ್ಮಣ್ಯ
ಅಧಿಕಾರಿಗಳ ವಿರುದ್ಧ ಗುಡುಗಿದ್ದರು. ಅವರ ಪಕ್ಕದಲ್ಲಿಯೇ ಸತೀಶ್ ರೆಡ್ಡಿ ಕೂಡಾ ಕೂಗಾಡುವ ದೃಶ್ಯ ಮಾಧ್ಯಮಗಳು ಹಾಗೂ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಶಾಸಕ ಸತೀಶ್ ರೆಡ್ಡಿ ಅವರೇ ಈ ಹಗರಣದ ಹಿಂದಿರುವ ಬಗ್ಗೆ ಕೆಲ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ
ಕಾಂಗ್ರೆಸ್, ಸತ್ಯ ಈಗ ಹೊರಗಡೆ ಬಂದಿದೆ. ಬಿಜೆಪಿ ನಾಯಕರು ಈ ಹಗರಣದ ಹಿಂದಿರುವುದಾಗಿ ಟ್ವೀಟ್ ಮಾಡಿದೆ. ಬೆಂಬಲಿಗರೊಂದಿಗೆ ಬೆಡ್ ಬ್ಲಾಕಿಂಗ್ ಹಗರಣ ನಡೆಸುತ್ತಿರುವ ಸತೀಶ್ ರೆಡ್ಡಿ ಅವರನ್ನು ಬಂಧಿಸಬೇಕು. ಅವರೊಂದಿಗೆ
ತೇಜಸ್ವಿ ಸೂರ್ಯ ಅವರನ್ನು ಬಂಧಿಸಬೇಕು. ಅಲ್ಲದೇ ಸಮಗ್ರ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ. 

ಈ ಮಧ್ಯೆ ತೇಜಸ್ವಿ ಸೂರ್ಯ ವಿರುದ್ಧ ಮುಗಿ ಬಿದ್ದಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಬಿಎಲ್ ಸಂತೋಷ್ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದ ಸೆಕ್ಯೂಲರಿಸಂ ಅಪಾಯಕಾರಿಯಲ್ಲಿದೆ. ರಾಜ್ಯ ಕಾಂಗ್ರೆಸ್
ನಾಯಕರ ಚಿಂತನೆ ಹಾಗೂ ಕ್ರಿಯೆಯಲ್ಲಿ ದಿವಾಳಿತ ವಿದೆ ಎಂದು ಅವರು ಹೇಳಿದ್ದಾರೆ.

ಇದರ ನಡುವೆ ವಾರ್ ರೊಂನಲ್ಲಿ ನಮ್ಮೊಂದಿಗೆ ಇತರ 214 ಮಂದಿಯನ್ನು ಏಜೆನ್ಸಿಯೊಂದು ನೇಮಕ ಮಾಡಿತ್ತು ಎಂದು
ಆರೋಪಕ್ಕೊಳಗಾದವರು ಹೇಳಿದ್ದಾರೆ.  ಜಾತಿ, ಧರ್ಮ ಎಂಬುದನ್ನು ಪರಿಗಣಿಸದೆ ನೇಮಕ ಮಾಡಿರುವುದಾಗಿ ಏಜೆನ್ಸಿಯ
ಕಾರ್ಯನಿರ್ವಾಹಕರೊಬ್ಬರು ತಿಳಿಸಿದ್ದಾರೆ. 

ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಹಾಗೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ, ಖಾಸಗಿ ಆಸ್ಪತ್ರೆಗಳು ಶೇ.80 ರಷ್ಟು ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡಬೇಕು ಎಂದು ಸರ್ಕಾರ ಆದೇಶಿಸಿದೆ. ಆದಾಗ್ಯೂ, ಲಂಚ ನೀಡಿದ್ದರೂ, ಬೆಡ್ ಸಿಗುತ್ತಿಲ್ಲ ಎಂದು  ಅನೇಕ ಜನರು ಆರೋಪಿಸುತ್ತಿದ್ದಾರೆ. 

ಬೆಡ್ ಹಗರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಹಾಗೂ ಕಾಳಸಂತೆಯಲ್ಲಿ ರೆಮ್ ಡಿಸಿವಿರ್ ಮಾರಾಟಕ್ಕಾಗಿ
90 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com