ಮೈಸೂರು: ಒಂದು ವೇಳೆ ವರ್ಗಾವಣೆ ಮಾಡುವುದೇ ತಾಕತ್ತಾದರೆ ಅದು ನನಗೆ ಬೇಡಿ. ನನ್ನ ತಾಕತ್ತು ಏನು ಎನ್ನುವುದನ್ನು ಸಂಸದನಾಗಿ ನನ್ನ ಕೆಲಸದಲ್ಲಿ ತೋರಿಸಿದ್ದೇನೆ ಎಂದು ಪ್ರತಾಪ್ ಸಿಂಹ ಶಾಸಕ ಜಿ.ಟಿ. ದೇವೇಗೌಡರಿಗೆ ತಿರುಗೇಟು ನೀಡಿದ್ದಾರೆ.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿಚಾರವಾಗಿ ಶಾಸಕ ಜಿ.ಡಿ ದೇವೇಗೌಡ ಹಾಕಿದ್ದ ಸವಾಲಿಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ರೋಹಿಣಿ ಸಿಂಧೂರಿ ವಿರುದ್ಧ ಪ್ರತಾಪ್ಸಿಂಹ ಇತ್ತೀಚೆಗೆ ವಾಗ್ದಾಳಿ ನಡೆಸಿದ್ದರು. ಇದರಿಂದ ಗರಂ ಆಗಿದ್ದ ಶಾಸಕ ಜಿ.ಟಿ ದೇವೇಗೌಡ ನಿನಗೆ ತಾಕತ್ತಿದ್ದರೆ ಡಿಸಿಯನ್ನ ವರ್ಗಾವಣೆ ಮಾಡಿಸು ಎಂದು ಪ್ರತಾಪ್ ಸಿಂಹಗೆ ಸವಾಲು ಹಾಕಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹ, ಅಧಿಕಾರಿಗಳನ್ನ ಟ್ರಾನ್ಸಫರ್ ಮಾಡೋದೇ ತಾಕತ್ತಾದರೆ, ಅಂತಹ ತಾಕತ್ತು ನನಗೆ ಬೇಡ. ಒಬ್ಬ ಸಂಸದನಾಗಿ ನಾನು ನನ್ನ ಕೆಲಸದಲ್ಲಿ ತಾಕತ್ತು ತೋರಿಸಿದ್ದೆನೆ ಎಂದು ಜಿ.ಟಿ.ದೇವೇಗೌಡ ಅವರಿಗೆ ಟಾಂಗ್ ಕೊಟ್ಟರು.
ಮೈಸೂರಿಗೆ ನಾನು ಹೊರಗಿನವನು. ಆದರೂ ಮೊದಲ ಚುನಾವಣೆಯಲ್ಲಿ ಮೈಸೂರು- ಕೊಡಗಿನ ಜನ ಮೂವತ್ತು ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದರು. ಒಳ್ಳೆಯ ಕೆಲಸ ಮಾಡಿದೆ. ಅದಕ್ಕಾಗಿ ಎರಡನೇ ಚುನಾವಣೆಯಲ್ಲಿ 1.40 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿದರು. ಇದಕ್ಕಿಂತಲೂ ನಾನು ಯಾವ ತಾಕತ್ತು ತೋರಿಸಬೇಕು? ಎಂದರು.
ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುವುದು ರಾಜಕಾರಣಿಗಳ ಸಣ್ಣ ಕೆಲಸ ಎಂದ ಪ್ರತಾಪ್ ಸಿಂಹ, ಅಂತಹ ಕೆಲಸವನ್ನು ನಾನು ಮಾಡುವುದಿಲ್ಲ. ಸರಕಾರ ನೇಮಿಸಿದ ಅಧಿಕಾರಿಗಳ ಜೊತೆ ಕೆಲಸ ಮಾಡುತ್ತೇನೆ. ಸಾ.ರಾ ಮಹೇಶ್ ಅವರನ್ನು ಹೊಗಳಿದ್ದು ಜಿ.ಟಿ.ದೇವೇಗೌಡರಿಗೆ ಇಷ್ಟವಾಗಿಲ್ಲ. ಇದಕ್ಕಾಗಿ ನನ್ನ ವಿರುದ್ಧ ಕಿಡಿಕಾರಿದ್ದಾರೆ. ಜಿಟಿಡಿ ನನಗೆ ತಂದೆ ಇದ್ದಂತೆ. ಅವರು ಹರೀಶ್ ಗೌಡರನ್ನು ಹೇಗೆ ನೋಡಿಕೊಂಡಿದ್ದಾರೋ ಹಾಗೆಯೇ ನನ್ನನ್ನು ನೋಡಿಕೊಂಡಿದ್ದಾರೆ. ರಾಜಕೀಯದಲ್ಲಿ ನನ್ನನ್ನು ಟೀಕಿಸುವ ಹಕ್ಕು ಅವರಿಗೆ ಇದೆ. ಅದನ್ನು ಪ್ರೀತಿಯಿಂದಲೇ ಸ್ವೀಕರಿಸಿಸುತ್ತೇನೆ ಎಂದು ಹೇಳಿದರು.
Advertisement