2023 ಚುನಾವಣೆ ನನ್ನ ಕೊನೆ ಹೋರಾಟ: ಹೆಚ್.ಡಿ. ಕುಮಾರಸ್ವಾಮಿ

ಮುಂದಿನ 2023ರ ಚುನಾವಣೆ ನನ್ನ ಕೊನೆ ಹೋರಾಟ ಎಂದು ತೀರ್ಮಾನ ಮಾಡಿದ್ದೇನೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಮಂಗಳವಾರ ತಿಳಿಸಿದ್ದಾರೆ.
ಚಾಮುಂಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿರುವ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ.
ಚಾಮುಂಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿರುವ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ.
Updated on

ಮೈಸೂರು: ಮುಂದಿನ 2023ರ ಚುನಾವಣೆ ಕೊನೆ ಹೋರಾಟ ಎಂದು ತೀರ್ಮಾನ ಮಾಡಿದ್ದೇನೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಮಂಗಳವಾರ ತಿಳಿಸಿದ್ದಾರೆ. 

ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾಯಕನಾಗಿ ಬೆಳೆಸಿದ ಪಕ್ಷಕ್ಕೆ ಸಿದ್ದರಾಮಯ್ಯ ಅವರು ಯಾವುದೇ ಕೃತಜ್ಞತೆಯನ್ನು ಹೊಂದಿಲ್ಲ. ನಾನು ಅಥವಾ ದೇವೇಗೌಡರು ಸಿದ್ದರಾಮಯ್ಯಗೆ ಎಂದಿಗೂ ದ್ರೋಹ ಮಾಡಲಿಲ್ಲ, ಆದರೆ ಅವರು ನಮ್ಮನ್ನು ರಾಜಕೀಯವಾಗಿ ಮುಗಿಸಲು ಬಯಸಿದ್ದರು. 2023ರ ಚುನಾವಣೆ ನನ್ನ ಕೊನೆಯ ಹೋರಾಟವಾಗಿದೆ. ಕಾರಣ ನಾನು ಅಧಿಕಾರಕ್ಕೆ ಬರಬೇಕು. ಮುಖ್ಯಮಂತ್ರಿ ಆಗಬೇಕೆಂದಲ್ಲ, 2 ಬಾರಿ ಬಹುಮತ ಇಲ್ಲದ ಸರ್ಕಾರದಲ್ಲಿ ದೇವರ ಆಶೀರ್ವಾದದೊಂದಿಗೆ ಮುಖ್ಯಮಂತ್ರಿ ಆಗಿದ್ದೇನೆ. ಒಂದು ಸ್ವತಂತ್ರವಾದ ಸರ್ಕಾರವನ್ನು 5 ವರ್ಷ ನಡೆಸಲು ನಿಮ್ಮ ಆಶೀರ್ವಾದ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 

ಜನರ ಸೇವೆ ಮಾಡಲು ಮತ್ತು ಪಂಚರತ್ನ ಸೂತ್ರವನ್ನು ಅನುಷ್ಠಾನಗೊಳಿಸಲು (ಒಂದು ಕುಟುಂಬದಲ್ಲಿ ಉದ್ಯೋಗ, ವಸತಿ, ಉಚಿತ ಶಿಕ್ಷಣ ಮತ್ತು ಆರೋಗ್ಯ ಮತ್ತು ರೈತರ ಹಿತಾಸಕ್ತಿ ಕಾಪಾಡುವುದು) ಅವಕಾಶ ಕೊಡಿ. ನಾನು ಜನರೊಂದಿಗೆ ಸಂಪರ್ಕ ಸಾಧಿಸಲು ಪ್ರತಿ ಹಳ್ಳಿಗೆ ಹೋಗುತ್ತೇನೆ. ಇದಕ್ಕಾಗಿ ಜೆಡಿಎಸ್‌ಗೆ ಸಂಪೂರ್ಣ ಬಹುಮತ ನೀಡುವಂತೆ ಜನರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ. 

ಇದೂವರೆಗೂ ಬಿಜೆಪಿ, ಕಾಂಗ್ರೆಸ್ ಆಡಳಿತವನ್ನುನೋಡಿದ್ದೀರಿ. ನನ್ನ ದುರದೃಷ್ಟ ಮುಖ್ಯಮಂತ್ರಿಯಾದಾಗ ನನ್ನ ಹಿಂಸೆಯೇ ನನಗೆ ಆಗಿತ್ತು. ಎಲ್ಲಾ ವಿಚಾರಗಳನ್ನು ತಾಯಿ ಚಾಮುಂಡೇಶ್ವರಿಗೆ ಬಿಡುತ್ತೇನೆ. ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ದೊಡ್ಡ ಗೌಡರಾಗಲಿ, ನಾನಾಗಲಿ ಈ ನಾಡಿನ ಜನತೆಗೆ ಅಪಚಾರ ಮಾಡಿಲ್ಲ. ಯಾರೇ ಕಷ್ಟ ಹೇಳಿಕೊಂಡು ಬಂದರೂ ಕೈಯಲ್ಲಿ ಆದ ಮಟ್ಟಿಗೆ ಸಹಾಯ ಮಾಡಿದ್ದೇವೆಂದು ಹೇಳಿದರು. 

ಎಲ್ಲಿಯವರೆಗೆ ಈ ಪಕ್ಷವನ್ನು ಆಶೀರ್ವದಿಸುತ್ತೀರಿ ಅಲ್ಲಿವರೆಗೆ ಇವರ್ಯಾರು ಈ ಪಕ್ಷವನ್ನು ಹಾಳು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. 

ಸಿಂದಗಿ ಉಪಚುನಾವಣೆ ಕುರಿತು ಮಾತನಾಡಿರುವ ಅವರು, ಸಿಂದಗಿಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ. ಕಳೆದ 15 ವರ್ಷದಿಂದ ಅಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ನೇರ ಹಣಾಹಣಿ ನಡೆದಿತ್ತು. ಈ ಬಾರಿ ಕಾಂಗ್ರೆಸ್‌ನವರು ನಮ್ಮ ಪಕ್ಷದಿಂದ ಹೈಜಾಕ್‌ ಮಾಡಿಕೊಂಡು ಹೋಗಿ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ನಾವು ಸುಸಂಸ್ಕೃತ ಹೆಣ್ಣು ಮಗಳನ್ನು ಅಭ್ಯರ್ಥಿ ಮಾಡಿದ್ದೇವೆ. ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ನಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತೇವೆ ಎಂದಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com