ಬೆಂಗಳೂರು: ಶನಿವಾರ ಉಪ ಚುನಾವಣೆ ನಡೆಯಲಿರುವ ಮೂರು ಕ್ಷೇತ್ರಗಳಲ್ಲಿಯೂ ಬಿಜೆಪಿ ಮತಗಳ ಖರೀದಿಗಾಗಿ ಹಣ ಚೆಲ್ಲಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.
ಈ ಸಂಬಂಧ ವಿಡಿಯೋಗಳನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ರಾಜಾರೋಷವಾಗಿ ಇಷ್ಟೆಲ್ಲಾ ಅಕ್ರಮಗಳು ನಡೆದರೂ ಚುನಾವಣಾ ಆಯೋಗ ಕಣ್ಣು ಮುಚ್ಚಿ ಕುಳಿತಿರುವುದನ್ನು ನೋಡಿದ ಜನತೆಗೆ ಅಕ್ರಮದಲ್ಲಿ ಆಯೋಗವೂ ಶಾಮಿಲಾಗಿದೆಯೇ ಎಂಬ ಅನುಮಾನ ಮೂಡುವುದು ಸಹಜ ಎಂದಿದೆ.
ಹಣ ಹಂಚುವ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಬಿಜೆಪಿ ಕಾರ್ಯಕರ್ತನ ಪರವಾಗಿ ಬಿಜೆಪಿ ಅಭ್ಯರ್ಥಿ ಶರಣು ಸಲಗಾರ್ ಬಿಡಿಸಿಕೊಂಡು ಹೋಗಲು ಬರುತ್ತಾರೆ. ಹಣ ಹಂಚಿಕೆಯಲ್ಲಿ ಸ್ವತಃ ಅಭ್ಯರ್ಥಿಯ ಕೈವಾಡವಿರುವುದು ಸ್ಪಷ್ಟವಾಗಿದೆ. ರಾಜ್ಯ ಮುಖ್ಯ ಚುನಾವಣಾ ಆಯುಕ್ತರು ಕೂಡಲೇ ಬಿಜೆಪಿ ಅಭ್ಯರ್ಥಿಯ ಉಮೇದುವಾರಿಕೆಯನ್ನು ರದ್ದುಗೊಳಿಸಿ ಎಂದು ಒತ್ತಾಯಿಸಿದೆ.
ಸಾಧನೆ ಹೇಳಿ ಮತ ಕೇಳಲಾಗದ ಬಿಜೆಪಿ ಪಕ್ಷ ಹಣ ಹಂಚಿಕೆಯ ಅಕ್ರಮಕ್ಕೆ ಇಳಿದಿದೆ.ವಿಜಯೇಂದ್ರ ಸರ್ವೀಸ್ ಟ್ಯಾಕ್ಸ್ ನಲ್ಲಿ ಲೂಟಿ ಹೊಡೆದ ಹಣ ಮತ ಖರೀದಿಸಲು ಬಳಸುವುದನ್ನೇ ಸಾಧನೆ ಎಂದು ತಿಳಿದಿದೆ. ಬಿವೈ ವಿಜಯೇಂದ್ರ ಅವರೇ ಇದೇ ಅಕ್ರಮಗಳಿಗೆ ತಾವು ಕಾಂಗ್ರೆಸ್ ಹೆದರಿದೆ ಅಂದಿದ್ದು? ನಿಮ್ಮ ಹಣದ ಆಟ ನಾಡಿನ ಜನತೆಯ ಮುಂದೆ ನಡೆಯದು ಎಂದು ಹೇಳಿದೆ.
Advertisement