ಬೆಂಗಳೂರು: ಬಿಎಸ್ ಯಡಿಯೂರಪ್ಪ ರಾಜಿನಾಮೆಯಿಂದಾಗಿ ತೆರವಾಗಿದ್ದ ಮುಖ್ಯಮಂತ್ರಿ ಸ್ಥಾನಕ್ಕೆ ಮಾಜಿ ಸಿಎಂ ಎಸ್ ಆರ್ ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ ಅವರು ಆಯ್ಕೆಯಾಗಿದ್ದು, ಆ ಮೂಲಕ ದೇಶದಲ್ಲಿ ಕರ್ನಾಟಕ ಸೇರಿ 5 ರಾಜ್ಯದಲ್ಲಿ ಮಾಜಿ ಸಿಎಂಗಳ ಮಕ್ಕಳೇ ಮುಖ್ಯಮಂತ್ರಿಯಾದಂತಾಗಿದೆ.
ಹೌದು.. ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಇದೀಗ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಹಿರಿಯ ನಾಯಕ, ಬಸವರಾಜ ಬೊಮ್ಮಾಯಿ ಕರ್ನಾಟಕದ 11ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದು, ಬೊಮ್ಮಾಯಿ ಅವರು ಮಾಜಿ ಸಿಎಂ ಎಸ್ ಆರ್ ಬೊಮ್ಮಾಯಿ ಪುತ್ರ. ಈ ಮೂಲಕ ಕರ್ನಾಟಕದಲ್ಲಿ ತಂದೆ ಬಳಿಕ ಸಿಎಂ ಸ್ಥಾನ ಅಲಂಕರಿಸಿದ 2ನೇ ಜೋಡಿಯಾಗಿದ್ದು, ಅಲ್ಲದೆ ಭಾರತದ 5 ರಾಜ್ಯಗಳಲ್ಲಿ ಸಿಎಂ ಪುತ್ರರದ್ದೇ ಆಡಳಿತವಾದಂತಾಗಿದೆ.
ಎಚ್ ಡಿ ಕುಮಾರಸ್ವಾಮಿ-ಎಚ್ ಡಿ ದೇವೇಗೌಡ
ತಂದೆ ಬಳಿಕ ಮಗ ಮುಖ್ಯಮಂತ್ರಿಯಾದ ಕರ್ನಾಟಕದ 2ನೇ ಜೋಡಿ!
ಆಗಸ್ಟ್ 1988 ರಿಂದ ಏಪ್ರಿಲ್ 1989ರ ವರೆಗೆ ಎಸ್ ಆರ್ ಬೊಮ್ಮಾಯಿ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಇದೀಗ ಅವರ ಪುತ್ರ ಬಸವರಾಜ ಬೊಮ್ಮಾಯಿ ಅವರಿಗೆ ಕರ್ನಾಟಕದ ಅಧಿಕಾರದ ಚುಕ್ಕಾಣಿ ನೀಡಲಾಗಿದೆ. ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗುವ ಮೂಲಕ ಭಾರತದ 5 ರಾಜ್ಯಗಳಲ್ಲಿ ಸಿಎಂ ಪುತ್ರರೇ ಸಿಎಂ ಆಗಿರುವುದು ವಿಶೇಷವಾಗಿದೆ.
ಎಂಕೆ ಸ್ಟಾಲಿನ್-ಕರುಣಾನಿಧಿ
ತಮಿಳುನಾಡು
ತಮಿಳುನಾಡಿನಲ್ಲಿ ಸದ್ಯ ಎಂಕೆ ಸ್ಟಾಲಿನ್ ಮುಖ್ಯಮಂತ್ರಿಯಾಗಿದ್ದಾರೆ. ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಎಂಕೆ ಸ್ಟಾಲಿನ್ ತಮಿಳುನಾಡು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಸ್ಟಾಲಿನ್ ತಮಿಳುನಾಡಿನ ಅತ್ಯಂತ ಜನಪ್ರಿಯ, ಪ್ರಭಾವಿ ಮುಖ್ಯಮಂತ್ರಿ, ದಿವಗಂತ ಎಂ ಕರುಣಾನಿಧಿ ಪುತ್ರ. ಕರುಣಾನಿಧಿ 5 ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ.
ವೈಎಸ್ ರಾಜಶೇಖರ್ ರೆಡ್ಡಿ-ವೈಎಸ್ ಜಗನ್ ಮೋಹನ್ ರೆಡ್ಡಿ
ಆಂಧ್ರ ಪ್ರದೇಶ
ಆಂಧ್ರ ಪ್ರದೇಶದಲ್ಲಿ ಸದ್ಯ ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿದ್ದು, ಮೇ 30, 2019ರಲ್ಲಿ ಜಗನ್ ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಜಗನ್ ಮೋಹನ್ ರೆಡ್ಡಿ ಆಂಧ್ರ ಪ್ರದೇಶ ಕಂಡ ಅತ್ಯಂತ ಯಶಸ್ವಿ ಮುಖ್ಯಮಂತ್ರಿ ಬಿಎಸ್ ರಾಜಶೇಖರ್ ರೆಡ್ಡಿ ಅವರ ಪುತ್ರ. ರಾಜಶೇಖರ್ ರೆಡ್ಡಿ 2004ರಿಂದ 2009ರ ವರೆಗೆ ಎರಡು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ.
ಬಿಜು ಪಟ್ನಾಯಕ್-ನವೀನ್ ಪಟ್ನಾಯಕ್
ಒಡಿಶಾ
ಒಡಿಶಾದಲ್ಲಿ ನವೀನ್ ಪಟ್ನಾಯಕ್ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದು, ನವೀನ್ ಪಟ್ನಾಯಕ್ 5ನೇ ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆ. ಇನ್ನು ನವೀನ್ ಪಟ್ನಾಯಕ್ ತಂದೆ ಬಿಜು ಪಟ್ನಾಯಕ್ 1961-1963 ಹಾಗೂ 1990-95ರಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು.
ಶಿಬು ಸೊರೇನ್-ಹೇಮಂತ್ ಸೊರೇನ್
ಜಾರ್ಖಂಡ್
ಜಾರ್ಖಂಡ್ ರಾಜ್ಯದ ಮುಖ್ಯಮಂತ್ರಿ ಹೇಮಂತ್ ಸೊರೇನ್ 2ನೇ ಬಾರಿಗೆ ಸಿಎಂ ಆಗಿ ಆಡಳಿತ ನಡೆಸುತ್ತಿದ್ದು, 2ನೇ ಅವಧಿ 2019ರಲ್ಲಿ ಆರಂಭಗೊಂಡಿದೆ. ಹೇಮಂತ್ ಸೊರೇನ್ ತಂದೆ ಶಿಬು ಸೊರೆನ್ 2 ಬಾರಿ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು.
ಅಷ್ಟೇ ಅಲ್ಲ ಅಪ್ಪ-ಮಕ್ಕಳು ಸಿಎಂ ಆಗಿರುವುದು ಉದಾಹರಣೆಗಳು ಇನ್ನೂ ಸಾಕಷ್ಟಿವೆ. ಕರ್ನಾಟಕದಲ್ಲಿ ಹೆಚ್ ಡಿ ದೇವೇಗೌಡ ಹಾಗೂ ಹೆಚ್ ಡಿ ಕುಮಾರಸ್ವಾಮಿ, ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ಹಾಗೂ ಅಖಿಲೇಶ್ ಯಾದವ್, ಜಮ್ಮು ಕಾಶ್ಮೀರದಲ್ಲಿ ಫಾರುಖ್ ಅಬ್ದುುಲ್ಲಾ ಹಾಗೂ ಓಮರ್ ಅಬ್ದುಲ್ಲಾ, ಮುಫ್ತಿ ಮೊಹಮ್ಮದ್ ಸಯ್ಯಿದ್ ಹಾಗೂ ಪುತ್ರಿ ಮೆಹಬೂಬಾ ಮುಫ್ತಿ ಸಿಎಂ ಆಗಿ ಆಡಳಿತ ನಡೆಸಿದ್ದರು.
Advertisement