ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಎಲ್ಲಾ 224 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ. ನವೆಂಬರ್ 1ರಂದು 126 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಮೈಸೂರಿನ ಖಾಸಗಿ ಹೋಟೆಲ್ನಲ್ಲಿ 2 ದಿನಗಳ ಕಾಲ ನಡೆಯುತ್ತಿರುವ ಜೆಡಿಎಸ್ ಸಮಾಲೋಚನಾ ಕಾರ್ಯಾಗಾರಕ್ಕೆ ಚಾಲನೆ ನೀಡಿ, ಪಂಚರತ್ನ ರಥಯಾತ್ರೆಯ ಸಿಡಿ ಬಿಡುಗಡೆ ಮಾಡಿದರು.
ಉಚಿತ ಶಿಕ್ಷಣ, ಉಚಿತ ಆರೋಗ್ಯ, ಪ್ರತಿ ಕುಟುಂಬಕ್ಕೆ ಉದ್ಯೋಗ, ವಸತಿ ಸೌಲಭ್ಯವನ್ನು ಒದಗಿಸಿಕೊಡುವುದು ಪಂಚರತ್ನ ಯೋಜನೆಯ ಉದ್ದೇಶಗಳಾಗಿವೆ' ಎಂದರು. ಇತ್ತೀಚಿನ ದಿನಗಳಲ್ಲಿ ಮಳೆ ಅನಾಹುತಗಳು, ಬೆಲೆಕುಸಿತದಿಂದ ಕಂಗಾಲಾಗಿರುವ ರೈತರ ಬದುಕಿಗೆ ನೆರವಾಗುವುದು ನಮ್ಮ ಪ್ರಮುಖ ಉದ್ದೇಶವಾಗಿದೆ.
ಜೊತೆಗೆ ಪ್ರತಿಕುಟುಂಬಕ್ಕೆ ಉದ್ಯೋಗ ಯೋಜನೆಯಲ್ಲಿ ಸರಕಾರಿ ಕೆಲಸವೇ ಎಂದು ಏನಿಲ್ಲ, ಸ್ವಂತ ಉದ್ಯೋಗ ಮಾಡಲು ಸರಕಾರದಿಂದಲೇ ಯುವಕರಿಗೆ ಆರ್ಥಿಕ ಬಲ ತುಂಬಲಿದ್ದೇವೆ. ಕೊನೆಯದಾಗಿ ಪ್ರತಿಕುಟುಂಬಕ್ಕೆ ವಸತಿ ಸೌಲಭ್ಯವನ್ನು ಒದಗಿಸಿಕೊಡುವುದು ನಮ್ಮ ಪಂಚರತ್ನ ಯೋಜನೆಯ ಕಾರ್ಯಕ್ರಮಗಳಾಗಿವೆ ಎಂದು ವಿವರಿಸಿದರು.
ನಾವು 224 ಕ್ಷೇತ್ರದಲ್ಲಿಯೂ ಸ್ಪರ್ಧೆ ಮಾಡುತ್ತೇವೆ. ಬೇರೆ ಪಕ್ಷಕ್ಕೆ ನಮ್ಮ ಪಕ್ಷದಿಂದ ಹೋಗುವವರು ಯಾರು ಇಲ್ಲ . ಬೇರೆ ಪಕ್ಷದಿಂದ ಬರುವವರ ಬಗ್ಗೆ ನಾನು ಮಾತನಾಡಲ್ಲ ಎಂದರು. ಜೆಡಿಎಸ್ ಗೆ ಚುನಾವಣಾ ಅಭ್ಯರ್ಥಿಗಳಿಲ್ಲ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಅವ್ರು, ಕಾಂಗ್ರೆಸ್, ಬಿಜೆಪಿಯವರು ಯಾಕೆ ಜೆಡಿಎಸ್ ಮನೆ ಬಾಗಿಲು ತಟ್ಟುತ್ತಿದ್ದಾರೆ'' ಎಂದು ಟಾಂಗ್ ನೀಡಿದ್ದಾರೆ.
ಜೆಡಿಎಸ್ ಈ ಬಾರಿ ಎಲ್ಲಾ 224 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡುತ್ತದೆ. ಈಗಾಗಲೇ ಜೆಡಿಎಸ್ನ 126 ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದೇವೆ. ಖಂಡಿತ ಈ ಬಾರಿ 123 ಸ್ಥಾನಗಳ ಗುರಿ ಮುಟ್ಟುವ ವಿಶ್ವಾಸವಿದ್ದು, ಯಾರ ಜೊತೆಯಲ್ಲೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿಎಂ ಬೊಮ್ಮಾಯಿ ಅವರು ಸಿದ್ದರಾಮಯ್ಯ ಕಾಲದ ಹಗರಣಗಳ ಬಗ್ಗೆ ಎಐಸಿಸಿ ನಾಯಕ ರಾಹುಲ್ ಗಾಂಧಿಗೆ ದಾಖಲೆಗಳನ್ನು ಕಳುಹಿಸಿದ್ದೇನೆ ಎಂದಿದ್ದಾರೆ. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, 'ಬಸವರಾಜ ಬೊಮ್ಮಾಯಿ ಅವರು ರಾಹುಲ್ ಗಾಂಧಿಗೆ ದಾಖಲೆ ಕಳುಹಿಸುವುದನ್ನು ಬಿಟ್ಟು, ಧಮ್ಮಿದ್ದರೆ ತಮ್ಮ ಸರ್ಕಾರದಿಂದಲೇ ತನಿಖೆ ಮಾಡಿಸಲಿ' ಎಂದು ಸವಾಲು ಹಾಕಿದರು.
ಇದೇ ವೇಳೆ, ಭಾರತ ಐಕ್ಯತಾ ಯಾತ್ರೆ ಕುರಿತು ವ್ಯಂಗ್ಯವಾಡಿದ ಅವರು, ರಾಹುಲ್ ಹಮ್ಮಿಕೊಂಡಿರುವುದು ಭಾರತ್ ಜೋಡೋ ಅಲ್ಲ, ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ಜೋಡೋ ಮಾಡುವ ಯಾತ್ರೆ. ಇದು ಕೃತಕ ಯಾತ್ರೆ. ಈ ಯಾತ್ರೆ ಕರ್ನಾಟಕ ಪ್ರವೇಶಿಸಿದಾಗ ಗುಂಡ್ಲುಪೇಟೆಯಲ್ಲಿ ಇಬ್ಬರ ಕೈಗೂ ಕೋಲು ಕೊಟ್ಟು ರಾಹುಲ್ಗಾಂಧಿಯೇ ಇಬ್ಬರ ಕೈಹಿಡಿದು ನಗಾರಿ ಬಾರಿಸಿದರು ಎಂದು ಗೇಲಿ ಮಾಡಿದರು.
ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿಯಲ್ಲಿ ಕಮಿಷನ್ ಸಂಬಂಧ ಸಂಸದೆ ಸುಮಲತಾ ಮತ್ತು ಜೆಡಿಎಸ್ ನಾಯಕರ ವಾಕ್ಸಮರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಸುಮಲತಾ ಯಾರು ನನಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
Advertisement