ಬೆಳಗಾವಿ ಚಳಿಗಾಲ ಅಧಿವೇಶನ: ದ್ವೇಷ ಅಪರಾಧ, ನೈತಿಕ ಪೊಲೀಸ್ ಗಿರಿ ಕುರಿತು ದನಿ ಎತ್ತಲು ಕಾಂಗ್ರೆಸ್ ಮುಂದು!

ದಕ್ಷಿಣ ಕನ್ನಡದಲ್ಲಿ ಇತ್ತೀಚೆಗೆ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಹಾಗೂ ದ್ವೇಷದ ಅಪರಾಧಗಳು ಹೆಚ್ಚಾಗುತ್ತಿದ್ದು, ಈ  ವಿಷಯಗಳನ್ನು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಪ್ರಸ್ತಾಪಿಸುವ ಸಾಧ್ಯತೆಯಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಇತ್ತೀಚೆಗೆ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಹಾಗೂ ದ್ವೇಷದ ಅಪರಾಧಗಳು ಹೆಚ್ಚಾಗುತ್ತಿದ್ದು, ಈ  ವಿಷಯಗಳನ್ನು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಪ್ರಸ್ತಾಪಿಸುವ ಸಾಧ್ಯತೆಯಿದೆ.

ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಯುಟಿ ಖಾದರ್ ಅವರು ಈ ಬಗ್ಗೆ ಮಾತನಾಡಿ, ಆದ್ಯತೆಯ ಮೇರೆಗೆ ಚರ್ಚಿಸಲು ವಿಧಾನಸಭಾ ಸ್ಪೀಕರ್‌ರಿಂದ ಸಮಯ ಕೇಳುವುದಾಗಿ ಹೇಳಿದ್ದಾರೆ.

ಆರೋಪಿಗಳ ವಿರುದ್ಧ ದಾಖಲಾಗಿರುವ ಐಪಿಸಿ ಸೆಕ್ಷನ್‌ಗಳು ದುಷ್ಕರ್ಮಿಗಳನ್ನು ಅಷ್ಟೇನೂ ತಡೆದಿಲ್ಲವಾದ್ದರಿಂದ, ನೈತಿಕ ಪೊಲೀಸ್‌ಗಿರಿ ಘಟನೆಗಳನ್ನು ಎದುರಿಸಲು ಪ್ರತ್ಯೇಕ ಕಾನೂನಿಗೆ ಒತ್ತಾಯಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

“ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ದ್ವೇಷದ ಅಪರಾಧಗಳು ಮತ್ತು ನೈತಿಕ ಪೊಲೀಸ್ ಗಿರಿ ಪ್ರಕರಣಗಳಲ್ಲಿ ತೊಡಗಿರುವವರ ವಿರುದ್ಧ 307 (ಕೊಲೆ ಯತ್ನ) ಸೇರಿದಂತೆ ವಿವಿಧ ಜಾಮೀನು ರಹಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತಿತ್ತು. ಇದು ಅಂತಹ ಅಪರಾಧಗಳಲ್ಲಿ ಪಾಲ್ಗೊಳ್ಳಲು ಬಯಸುವ ಜನರನ್ನು ಭಯಪಡಿಸಿತ್ತು. ಇದರಿಂದ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿತ್ತು. ಇದೀಗ, ದುಷ್ಕರ್ಮಿಗಳು ಬಂಧನವಾದ ದಿನವೇ ಜಾಮೀನಿನ ಮೇಲೆ ಹೊರಬರುತ್ತಿದ್ದಾರೆ' ಎಂದು ಹೇಳಿದರು.

ಇತ್ತೀಚೆಗಷ್ಟೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ವಿವಾದಾತ್ಮಕ “ಕ್ರಿಯೆ ಪ್ರತಿಕ್ರಿಯೆ” ಹೇಳಿಕೆಗೆ ಕಳವಳ ವ್ಯಕ್ತಪಡಿಸಿದ್ದರು.

ಕಳೆದ ತಿಂಗಳಲ್ಲಿ, ನೈತಿಕ ಪೋಲೀಸ ಗಿರಿ ಮತ್ತು ದ್ವೇಷದ ಅಪರಾಧಗಳ ಕನಿಷ್ಠ 12 ಘಟನೆಗಳು ಬೆಳಕಿಗೆ ಬಂದಿವೆ. ಈ ಅರ್ಧದಷ್ಟು ಘಟನೆಗಳಲ್ಲಿ, ಸಂತ್ರಸ್ತರು ದೂರುಗಳನ್ನು ಸಲ್ಲಿಸಲು ನಿರಾಕರಿಸಿದ್ದರಿಂದ ಅಪರಾಧಿಗಳು ಸ್ವತಂತ್ರರಾಗಿ ಓಡಾಡಿಕೊಂಡಿದ್ದಾರೆ.

ಇಂತಹ ಪ್ರಕರಣಗಳಲ್ಲಿ ಸಂತ್ರಸ್ತರ ಬಗ್ಗೆ ಪೊಲೀಸರ ವರ್ತನೆ ಸೂಕ್ತವಾಗಿರದ ಹಿನ್ನೆಲೆಯಲ್ಲಿ ಅಂತಹವರು ದೂರು ದಾಖಲಿಸಲು ಮುಂದಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ನವೆಂಬರ್ ಕೊನೆಯ ವಾರದಲ್ಲಿ, ಮುಸ್ಲಿಂ ವಿದ್ಯಾರ್ಥಿಯೊಬ್ಬ ತನ್ನ ಹಿಂದೂ ಸಹಪಾಠಿಯೊಂದಿಗೆ ಬಸ್‌ನಲ್ಲಿ ಪ್ರಯಾಣಿಸಿದ್ದಕ್ಕಾಗಿ ಥಳಿಸಲ್ಪಟ್ಟಿದ್ದನು. ಘಟನೆಯ ಚಿತ್ರಗಳು ವ್ಯಾಪಕವಾಗಿ ವೈರಲ್ ಆಗಿದ್ದವು, ಮತ್ತೊಂದು ಪ್ರಕರಣದಲ್ಲಿ ಸಂತ್ರಸ್ತನನ್ನೇ ಪೋಲೀಸರು ಆತನ ಕಾಲರ್‌ ಹಿಡಿದುಕೊಂಡು ಎಳೆದುಕೊಂಡು ಹೋಗಿದ್ದ ಘಟನೆ ನಡೆದಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಭಜರಂಗದಳದ ನಾಯಕರೊಬ್ಬರು ಘಟನೆಯನ್ನು "ಕೇವಲ ಮಾದರಿ"ಯಷ್ಟೇ ಎಂದು ಕರೆದು, 'ಲವ್ ಜಿಹಾದ್'ನಲ್ಲಿ ಪಾಲ್ಗೊಳ್ಳುವ ಜನರನ್ನು ತೊಡೆದುಹಾಕುವುದಾಗಿ ಬೆದರಿಕೆ ಹಾಕಿದ್ದರು. ಇಂತಹ ಪೋಸ್ಟ್ ಗಳು ಕಂಡು ಬಂದಿದ್ದರೂ ಕೂಡ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ರಾಜಕೀಯ ಒತ್ತಡದಿಂದ ದಕ್ಷಿಣ ಕನ್ನಡ ಪೊಲೀಸರ ಕೈ ಕಟ್ಟಿ ಹಾಕಲಾಗಿದೆ ಎಂದು ಖಾದರ್ ಹೇಳಿದ್ದಾರೆ.

ಕೆಲವೊಮ್ಮೆ, ಪೊಲೀಸರು ಘಟನೆಯ ದಿನಗಳ ನಂತರ, ನಿರಂತರ ಮಾಧ್ಯಮ ಪ್ರಸಾರದ ನಂತರ ಪ್ರಕರಣಗಳನ್ನು ದಾಖಲಿಸಿಕೊಳ್ಳುತ್ತಾರೆ. ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮುಸ್ಲಿಮರು ಬಲಿಪಶುಗಳಾಗಿರುವ ಇಂತಹ ಘಟನೆಗಳ ಹೆಚ್ಚಳವನ್ನು "ಸಂಯೋಜಿತ ಅಪರಾಧ" ಎಂದು ಖಾದರ್ ಕರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com