'ಚಿಕ್ಕವನಿದ್ದಾಗ ಗೋಲಿ ಆಡಬೇಕಾದ್ರೆನೇ ಸೋತಿಲ್ಲ, ಈಗ ಸೋಲ್ತೀನಾ? ಪಕ್ಷಕ್ಕೂ-ರೆಡ್ಡಿಗೂ ಸಂಬಂಧವಿಲ್ಲ ಎಂದಿದ್ದ ಶಾ ಮನೆಗೆ ಕರೆದು ಮಾತಾಡಿದ್ರು'
ಬೆಂಗಳೂರು: ನಾನು ಚಿಕ್ಕ ಮಗುವಾಗಿದ್ದಾಗಲೇ ಗೋಲಿ ಆಟದಲ್ಲಿ ಸೋಲನ್ನ ಒಪ್ಪಿಕೊಳ್ಳಲು ತಯಾರಿರಲಿಲ್ಲ, ಇನ್ನೂ ಈಗ ಸೋಲ್ತೀನಾ? ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಪ್ರಶ್ನಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತಮ್ಮ ಹೊಸ ಪಕ್ಷದ ಘೋಷಣೆ ಮಾಡುವ ವೇಳೆ ಮಾತನಾಡಿದ ಜನಾರ್ದನ ರೆಡ್ಡಿ ಚಿಕ್ಕವನಿದ್ದಾಗ ಗೋಲಿ ಆಡಬೇಕಾದ್ರೆನೇ ಸೋತಿಲ್ಲ, ಈಗ ಸೋಲ್ತೀನಾ ಎಂದಿದ್ದಾರೆ.
ಗಾಲಿ ಜನಾರ್ದನ ರೆಡ್ಡಿ ಅಧಿಕೃತವಾಗಿ ಬಿಜೆಪಿ ತೊರೆದಿದ್ದು, ಹೊಸ ಪಕ್ಷವನ್ನ ಘೋಷಣೆ ಮಾಡಿದ್ದಾರೆ. ಬಿಜೆಪಿಗೆ ಸೆಡ್ಡು ಹೊಡೆದು ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ವನ್ನ ಘೋಷಣೆ ಮಾಡಿದ್ದಾರೆ. ಈ ಮೂಲಕ ಎರಡನೇ ಬಾರಿಗೆ ರಾಜಕೀಯ ರಂಗವನ್ನ ಗಣಿಧಣಿ ಪ್ರವೇಶ ಮಾಡಿದ್ದಾರೆ. ಬೆಂಗಳೂರಲ್ಲಿ ನಡೆದ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು.. ಕಲ್ಯಾಣ ಕರ್ನಾಟಕದಿಂದ ಜನಾರ್ದನ ರೆಡ್ಡಿ ಆಟ ಶುರುವಾಗಲಿದೆ. ಸಣ್ಣ ವಯಸ್ಸಿನಲ್ಲಿ ಗೋಲಿ ಆಡುವಾಗಲೇ ನಾನು ಸೋತಿಲ್ಲ. ಇನ್ನು ಈಗ ಸೋಲ್ತೀನಾ? ಕರ್ನಾಟಕ ಅಭಿವೃದ್ಧಿಯೊಂದೇ ನನ್ನ ಗುರಿ ಎಂದು ಪ್ರಶ್ನೆ ಮಾಡಿದ್ದಾರೆ.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಹೆಸರಲ್ಲಿ ಕರ್ನಾಟಕದ ಜನರ ಮುಂದೆ ಹೋಗುತ್ತ ಇದ್ದೇನೆ. ಇದಕ್ಕೆ ಕರ್ನಾಟಕ ಜನರ ಆಶೀರ್ವಾದ ಸಿಕ್ಕೇ ಸಿಗುತ್ತದೆ. ಮುಂದೊಂದು ದಿನ ಈ ರಾಜ್ಯ ಕಲ್ಯಾಣವಾಗಲಿದೆ. ಈ ರಾಜ್ಯ ಪ್ರಗತಿ ಕಾಣೋದ್ರಲ್ಲಿ ಯಾವುದೇ ಸಂಶಯ ಇಲ್ಲ ಎಂದರು.
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಅಲ್ಲಿನ ಗಣಿ ಮಾಲೀಕರನ್ನು ಕರೆದು ನಾನು ‘ಅರಣ್ಯ ಅಭಿವೃದ್ದಿ ತೆರಿಗೆ’ ಬಗ್ಗೆ ಮಾತನಾಡಿದ್ದೆ. ಕಬ್ಬಿಣದ ಅದಿರಿಗೆ ಒಳ್ಳೆಯ ಬೆಲೆ ಇದೆ. ತೆರಿಗೆ ಕಟ್ಟೋಣ ಎಂದು ಹೇಳಿದಾಗ ಅವರು ಒಪ್ಪಲಿಲ್ಲ. ನನ್ನ ನಿರ್ಧಾರ ಸರಿ ಇದೆ ಎಂದು ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಶೇ.6ರಷ್ಟು ತೆರಿಗೆ ಕಟ್ಟುವಂತೆ ಆದೇಶ ಕೂಡಾ ಹೊರಡಿಸಿದ್ದರು. ನನ್ನ ರಾಜಕೀಯ ವಿರೋಧಿಗಳು ಆಗಲೇ ನನಗೆ ‘ಬಳ್ಳಾರಿ ರಿಪಬ್ಲಿಕ್’ ಎಂದು ಹೆಸರು ಕೊಟ್ಟರು” ಎಂದು ಮತ್ತೊಂದು ಗುಟ್ಟು ಹೇಳಿದರು.
ಕರ್ನಾಟಕ ಚುನಾವಣೆ ಕುರಿತು ಒಂದು ಸಂದರ್ಶನದಲ್ಲಿ, ಜನಾರ್ದನ ರೆಡ್ಡಿಗೂ ನಿಮಗೂ ಏನು ಸಂಬಂಧ? ಎಂದು ಪತ್ರಕರ್ತರು ಪ್ರಶ್ನಿಸಿದರು. ಪಕ್ಷಕ್ಕೂ ರೆಡ್ಡಿ ಅವರಿಗೂ ಯಾವುದೇ ಸಂಬಂಧ ಇಲ್ಲ ಎಂದು ಅಮಿತ್ ಶಾ ಹೇಳಿದ್ದರು. ಇದನ್ನು ನಾನು ಮನೆಯಲ್ಲೇ ಕುಳಿತು ಟಿವಿಯಲ್ಲಿ ವೀಕ್ಷಿಸಿದ್ದೆ. ಎರಡು ದಿನದ ನಂತರ ನವದೆಹಲಿಯಿಂದ ಶ್ರೀರಾಮುಲು ಫೋನ್ ಮಾಡಿದರು. ನವದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಲು ಆಗಮಿಸಿ ಎಂದರು.
ಅಮಿತ್ ಶಾ ಮನೆಗೆ ಕರೆಸಿಕೊಂಡು ಮಾತನಾಡಿದರು. ಕರ್ನಾಟಕದಲ್ಲಿ ಪಕ್ಷಕ್ಕೆ ಧಕ್ಕೆ ಆಗುತ್ತದೆ ಎಂಬ ಕಾರಣಕ್ಕೆ ಆ ರೀತಿ ಹೇಳಿಬಿಟ್ಟೆ. ಹಾಗೆ ಹೇಳಬಾರದಿತ್ತು ಎಂದು ಶ್ರೀರಾಮುಲು ಅವರು, ಯಡಿಯೂರಪ್ಪ ಅವರು ಹೇಳಿದ್ದಾರೆ. ಈಗ ನಿಮ್ಮನ್ನು ಪಕ್ಷಕ್ಕೆ ಸೇರಿಸಿಕೊಂಡರೆ, ಜನಾರ್ದನ ರೆಡ್ಡಿ ಮೇಲೆ ಬಿಜೆಪಿ ಅವಲಂಬಿತವಾಗಿದೆ ಎಂಬ ಮಾತುಗಳು ಕೇಳಿಬರುತ್ತವೆ. ಆದ್ಧರಿಂದ, ನೀವು ಪಕ್ಷದ ಮೇಲೆ ಅಭಿಮಾನ ಇಟ್ಟು ಪ್ರಚಾರದಲ್ಲಿ ಭಾಗವಹಿಸಿ. ಮೊಣಕಾಲ್ಮೂರಿನಲ್ಲಿ ಶ್ರೀರಾಮುಲು ಅವರನ್ನು ಗೆಲ್ಲಿಸಿಕೊಡಿ ಎಂದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ