ಸುಮಲತಾ ಆಪ್ತ ಇಂಡುವಾಳ ಸಚ್ಚಿದಾನಂದ ಬಿಜೆಪಿಗೆ ಸೇರ್ಪಡೆ; ಮಂಡ್ಯದ 7 ಕ್ಷೇತ್ರಗಳಲ್ಲಿ ಗೆಲುವು ಖಚಿತ: ನಾರಾಯಣಗೌಡ
ಸಂಸದೆ ಸುಮಲತಾ ಅವರ ಆಪ್ತ , ಕೆಪಿಸಿಸಿ ಮಾಜಿ ಸದಸ್ಯ ಎಸ್. ಸಚ್ಚಿದಾನಂದ ಮತ್ತಿತರ ಕಾಂಗ್ರೆಸ್ ಮುಖಂಡರು ಇಂದು ಬಿಜೆಪಿಗೆ ಸೇರ್ಪಡೆಯಾದರು.
Published: 28th November 2022 03:13 PM | Last Updated: 28th November 2022 04:55 PM | A+A A-

ಸುಮಲತಾ ಆಪ್ತ ಸಚ್ಚಿದಾನಂದ ಬಿಜೆಪಿ ಸೇರ್ಪಡೆ ಕಾರ್ಯಕ್ರಮದ ಚಿತ್ರ
ಬೆಂಗಳೂರು: ಸಂಸದೆ ಸುಮಲತಾ ಅವರ ಆಪ್ತ , ಕೆಪಿಸಿಸಿ ಮಾಜಿ ಸದಸ್ಯ ಎಸ್. ಸಚ್ಚಿದಾನಂದ ಮತ್ತಿತರ ಕಾಂಗ್ರೆಸ್ ಮುಖಂಡರು ಇಂದು ಬಿಜೆಪಿಗೆ ಸೇರ್ಪಡೆಯಾದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರಾದ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಡಾ. ಕೆ. ಸಿ. ನಾರಾಯಣಗೌಡ, ವಿಧಾನಪರಿಷತ್ ಸದಸ್ಯ ಯೋಗೇಶ್ವರ್ ಅವರ ಸಮ್ಮುಖದಲ್ಲಿ 2013ರ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಲ್. ಲಿಂಗರಾಜು ಮತ್ತಿತರರೊಂದಿಗೆ ಇಂಡುವಾಳ ಸಚ್ಚಿದಾನಂದ ಬಿಜೆಪಿಗೆ ಸೇರ್ಪಡೆಯಾದರು. ಇದರೊಂದಿಗೆ ಮಂಡ್ಯದಲ್ಲಿ ಕಮಲ ಅರಳಿಸಲು ಬಿಜೆಪಿ ನಾಯಕರು ಫ್ಲಾನ್ ಮಾಡಿದ್ದು, ಸುಮಲತಾರ ಮುಂದಿನ ಹೆಜ್ಜೆ ತೀವ್ರ ಕುತೂಹಲ ಕೆರಳಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡೆ ಖಾತೆ ಸಚಿವ ಕೆ.ಸಿ. ನಾರಾಯಣಗೌಡ, ಕಾಂಗ್ರೆಸ್ಸಿನ ಹಲವಾರು ಮುಖಂಡರು ಪಕ್ಷ ಸೇರಿದ್ದರಿಂದ ಬಿಜೆಪಿ ಇನ್ನಷ್ಟು ಬಲಗೊಂಡಿದೆ. ಇತರ ಪಕ್ಷಗಳ ಭದ್ರಕೋಟೆಯನ್ನು ಒಡೆಯುವ ದೊಡ್ಡ ಶಕ್ತಿ ಇದೀಗ ಬಿಜೆಪಿಗೆ ಬಂದಿದೆ. ಕನಿಷ್ಠ 7 ಶಾಸಕರ ಸ್ಥಾನವನ್ನು ನಾವು ಮಂಡ್ಯದಲ್ಲಿ ಗೆಲ್ಲುವುದು ಖಚಿತ. ಜೆಡಿಎಸ್- ಕಾಂಗ್ರೆಸ್ ಪಕ್ಷಕ್ಕೆ ನಾವು ಭಯಪಡಬೇಕಿಲ್ಲ ಎಂದು ತಿಳಿಸಿದರು. ಗೂಂಡಾಗಳಿಗೆ ತಕ್ಕ ಪಾಠವನ್ನು ನಮ್ಮ ಪಕ್ಷ ಕಲಿಸಿದೆ ಎಂದರು.
ಇದನ್ನೂ ಓದಿ: ವಿಧಾನಸಭಾ ಚುನಾವಣೆ: ಸಮಾವೇಶಗಳತ್ತ ಜನರ ನಿರಾಸಕ್ತಿ, ಚಿಂತೆಯಲ್ಲಿ ಬಿಜೆಪಿ!
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಮಾತನಾಡಿ, ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್- ಜೆಡಿಎಸ್ ಎದುರಿಸಲು ಬಿಜೆಪಿ ಸಮರ್ಥ ಅಭ್ಯರ್ಥಿಗಳನ್ನು ಹೊಂದಿದೆ. ಪಕ್ಷಕ್ಕೆ ಹಠ- ಛಲ ಇರಬೇಕು. ಪಕ್ಷವು ಮೋದಿಜಿ- ಬೊಮ್ಮಾಯಿ ಮತ್ತು ಇತರ ಸಮರ್ಥ ನಾಯಕರ ನೇತೃತ್ವದಲ್ಲಿ ರಾಜ್ಯದಲ್ಲಿ 150ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸದಿಂದ ತಿಳಿಸಿದರು.
ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ, ಕಾಂಗ್ರೆಸ್- ಜೆಡಿಎಸ್ ಕುಟುಂಬ ಪಕ್ಷಗಳಾದರೆ, ಬಿಜೆಪಿ ಜನಪರ ಪಕ್ಷ ಎಂದರು.
ಸಚ್ಚಿದಾನಂದ ಮಾತನಾಡಿ, ಮಂಡ್ಯವು ಹಿಂದೆ ಅಭಿವೃದ್ಧಿಗೆ ಹೆಸರುವಾಸಿಯಾಗಿತ್ತು. ಆದರೆ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಆ ಜಿಲ್ಲೆ ಕುಸಿತ ಕಂಡಿತು. ಆ ಜಿಲ್ಲೆಯಲ್ಲಿ ಜನರಿಂದ ಅವಕಾಶ ಪಡೆದ ಪ್ರತಿನಿಧಿಗಳು ಸಮರ್ಪಕವಾಗಿ ಕೆಲಸ ಮಾಡಲಿಲ್ಲ ಎಂದು ಆಕ್ಷೇಪಿಸಿದರು.
ಸ್ವಾರ್ಥ ರಾಜಕಾರಣ ಸಲ್ಲದು. ಜನಪರ ಕೆಲಸ ಮಾಡುವವರು ನಾಯಕ. ಜನದ್ರೋಹಿಗಳಿಗೆ ಪಾಠ ಕೊಡುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು. ಗುಲಾಮಗಿರಿ ಸಹಿಸದೆ ಹಲವು ನಾಯಕರು ಈಗಾಗಲೇ ಜೆಡಿಎಸ್ ತೊರೆದಿದ್ದಾರೆ. ಮಂಡ್ಯದ ಸಮೃದ್ಧಿಯನ್ನು ಹೆಚ್ಚಿಸಲು ನಿಜ ಸ್ವಾತಂತ್ರ್ಯ ರೂಪಿಸಲು ಬಿಜೆಪಿ ಸೂಕ್ತವಾದ ಪಕ್ಷ ಎಂದು ತಿಳಿಸಿದರು.