ಬೆಂಗಳೂರು: ಎಐಸಿಸಿ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ತವರು ರಾಜ್ಯವಾದ ಕರ್ನಾಟಕದಲ್ಲಿ ರಾಹುಲ್ ಗಾಂಧಿ ಸಾರಥ್ಯದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಿಂದ ದೂರ ಉಳಿದಿದ್ದಾರೆ. ಪಕ್ಷವು ಉನ್ನತ ಹುದ್ದೆಗೆ ನಿಷ್ ಪಕ್ಷಪಾತವಾಗಿ ಚುನಾವಣೆ ನಡೆಸಲು ಒತ್ತು ನೀಡಿರುವುದೇ ಇದಕ್ಕೆ ಕಾರಣ ಎಂದು ಮೂಲಗಳು ಸೋಮವಾರ ತಿಳಿಸಿವೆ.
ಈ ಚುನಾವಣೆಯಲ್ಲಿ ಗಾಂಧಿ ಕುಟುಂಬ ಯಾರ ಪರವಾಗಿಯೂ ಇಲ್ಲ ತಟಸ್ಥ ನಿಲುವು ಹೊಂದಿರುವುದಾಗಿ ಶಶಿ ತರೂರು ಹೇಳಿದ್ದರೂ, ಚುನಾವಣೆಯಲ್ಲಿ ಖರ್ಗೆ ಅವರು ಅಧಿಕೃತ ಅಭ್ಯರ್ಥಿ ಮತ್ತು ಅವರಿಗೆ ಕಾಂಗ್ರೆಸ್ ನಾಯಕರ ಆಶೀರ್ವಾದವಿದೆ ಎಂದು ವಿವಿಧ ವಲಯಗಳಿಂದ ಟೀಕೆಗಳಿವೆ.
ಅಕ್ಟೋಬರ್ 17 ರಂದು ನಡೆಯಲಿರುವ ಎಐಸಿಸಿ ಅಧ್ಯಕ್ಷೀಯ ಚುನಾವಣೆಗಾಗಿ ಮಲ್ಲಿಕಾರ್ಜುನ ಖರ್ಗೆ ಈಗಾಗಲೇ ನಾಮಪತ್ರ ಸಲ್ಲಿಸಿದ್ದು, ಯಾತ್ರೆಯಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದರೆ ಅವರಿಗೆ ಉನ್ನತ ನಾಯಕರ ಆಶೀರ್ವಾದವಿದೆ ಎಂಬ ಸಂದೇಶ ಹೋಗುವುದರಿಂದ ಖರ್ಗೆ ಯಾತ್ರೆಯಲ್ಲಿ ಭಾಗವಹಿಸುತ್ತಿಲ್ಲ ಎಂದು ಮೂಲಗಳು ಹೇಳಿವೆ.
ಸೋನಿಯಾ ಗಾಂಧಿ ಅಕ್ಟೋಬರ್ 6 ರಂದು ಮಂಡ್ಯದಲ್ಲಿ ಭಾರತ್ ಜೋಡೋ ಯಾತ್ರೆ ನಡೆಸಿದ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಕೂಡಾ ಇದ್ದರು. ಆದರೆ, ಅವರು ಹೆಜ್ಜೆ ಹಾಕಲಿಲ್ಲ. ಬಳ್ಳಾರಿಯಲ್ಲಿ ಅಕ್ಟೋಬರ್ 15 ರಂದು ನಡೆಯಲಿರುವ ಕಾಂಗ್ರೆಸ್ ಸಮಾವೇಶದಲ್ಲೂ ಖರ್ಗೆ ಪಾಲ್ಗೊಳ್ಳುವ ಸಾಧ್ಯತೆಯಿಲ್ಲ ಎಂದು ಮೂಲಗಳು ತಿಳಿಸಿವೆ.
ಖರ್ಗೆ ಅಥವಾ ತರೂರ್ ಯಾರೇ ನೂತನ ಕಾಂಗ್ರೆಸ್ ಅಧ್ಯಕ್ಷರಾದವರು ಅಕ್ಟೋಬರ್ 20 ರಂದು ನಡೆಯಲಿರುವ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಕ್ಟೋಬರ್ 19 ರಂದು ಎಐಸಿಸಿ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಹೊರಬೀಳಲಿದೆ.
Advertisement