ಕಲಬುರಗಿ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹಿಂದುಳಿದ ಸಮಾವೇಶ; 'ಅಹಿಂದ ಚಾಂಪಿಯನ್' ಸಿದ್ದರಾಮಯ್ಯಗೆ ಟಕ್ಕರ್
ಕೇಸರಿ ಪಕ್ಷವು ಅಹಿಂದ ಚ್ಯಾಂಪಿಯನ್ ಎಂದು ಕರೆಯಲ್ಪಡುವ ಸಿದ್ದರಾಮಯ್ಯ ಅವರಿಗೆ ಚೆಕ್ಮೇಟ್ ನೀಡಲು ಸಮಾವೇಶ ಆಯೋಜಿಸಿದೆ ಎಂದು ಹೇಳಲಾಗುತ್ತಿದೆ.
Published: 29th October 2022 11:47 AM | Last Updated: 29th October 2022 01:11 PM | A+A A-

ಸಿದ್ದರಾಮಯ್ಯ
ಕಲಬುರಗಿ: ರಾಜ್ಯ ವಿಧಾನಸಭೆಗೆ ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಪ್ರತಿಯೊಂದು ರಾಜಕೀಯ ಪಕ್ಷಗಳು ಜಾತಿಗಳ ಓಲೈಕೆಗೆ ಮುಂದಾಗಿವೆ. ಇದೀಗ ಬಿಜೆಪಿ ನಾಯಕರು, ಓಬಿಸಿ ಸಮಾಜದ ಮೇಲೆ ಕಣ್ಣು ಹಾಕಿದ್ದು, ಓಬಿಸಿ ಓಟ್ ಬ್ಯಾಂಕ್ ಪಡೆಯಲು ಕಸರತ್ತು ಆರಂಭಿಸಿದ್ದಾರೆ.
ಅಕ್ಟೋಬರ್ 30 ರ ಭಾನುವಾರ ಕಲಬುರಗಿ ಹೊರವಲಯದಲ್ಲಿ ಬಿಜೆಪಿ ಆಯೋಜಿಸಿರುವ ಹಿಂದುಳಿದ ವರ್ಗಗಳ ರಾಜ್ಯಮಟ್ಟದ ಸಮಾವೇಶಕ್ಕೆ ವೇದಿಕೆ ಸಜ್ಜಾಗಿದೆ, ಈ ಹಿಂದೆ ಬೆಂಗಳೂರಿನಲ್ಲಿ ಬಿಜೆಪಿ ಒಬಿಸಿ ಸಮಾವೇಶ ಆಯೋಜಿಸಿದ್ದರೂ, ಕಲಬುರಗಿ ಸಮಾವೇಶ ರಾಜ್ಯ ರಾಜಧಾನಿಯಿಂದ ಹೊರಗಿರುವ ಮೊದಲ ಸಮಾವೇಶವಾಗಲಿದೆ.
mಸಮಾವೇಶಕ್ಕೆ ಐದು ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆಯಿದೆ ಎಂದು ಸೇಡಂ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಬಿಜೆಪಿ ರಾಜ್ಯ ವಕ್ತಾರ ರಾಜಕುಮಾರ ಪಾಟೀಲ್ ತೇಲ್ಕೂರ್ ಹೇಳಿದ್ದಾರೆ.
ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆಯಲ್ಲಿ ಬಿಜೆಪಿ ತನ್ನ ಸಾಮರ್ಥ್ಯ ಪ್ರದರ್ಶಿಸಲು ಸಮಾವೇಶ ಆಯೋಜಿಸಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಕೇಸರಿ ಪಕ್ಷವು ಅಹಿಂದ ಚ್ಯಾಂಪಿಯನ್ ಎಂದು ಕರೆಯಲ್ಪಡುವ ಸಿದ್ದರಾಮಯ್ಯ ಅವರಿಗೆ ಚೆಕ್ಮೇಟ್ ನೀಡಲು ಸಮಾವೇಶ ಆಯೋಜಿಸಿದೆ ಎಂದು ಹೇಳಲಾಗುತ್ತಿದೆ.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಬೃಹತ್ ಸಮಾವೇಶದ ಪೂರ್ವಭಾವಿಯಾಗಿ ಕಳೆದ 15 ದಿನಗಳಲ್ಲಿ ಎರಡು ಬಾರಿ ಕಲಬುರಗಿಗೆ ಭೇಟಿ ನೀಡಿದ್ದಾರೆ. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರು ಅಕ್ಟೋಬರ್ 26 ರಂದು ಸ್ಥಳಕ್ಕೆ ಭೇಟಿ ನೀಡಿ, ಪಕ್ಷದ ಕಾರ್ಯಕರ್ತರಿಗೆ ಅನಾನುಕೂಲವಾಗದಂತೆ ನಿಗಾ ವಹಿಸಲು ಸೂಚಿಸಿದ್ದಾರೆ.
ಇದನ್ನೂ ಓದಿ: ಎಷ್ಟು ಮಂದಿ ಅಹಿಂದ ಮತದಾರರು ತಮ್ಮೊಂದಿಗಿದ್ದಾರೆ ಎಂದು ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಳ್ಳಲಿ: ಸಿಎಂ ಬೊಮ್ಮಾಯಿ
ರಾಜ್ಯದ ಎಲ್ಲ ಜಿಲ್ಲೆ, ತಾಲೂಕುಗಳಿಗೆ ಪಕ್ಷದ ಮುಖಂಡರು ಭೇಟಿ ನೀಡಿ ಒಬಿಸಿ ವರ್ಗದವರು ಸಮಾವೇಶದಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ ಎಂದು ತೇಲ್ಕೂರ್ ತಿಳಿಸಿದರು. 4,000 ಬಸ್ಗಳು ಮತ್ತು 2,000 ವಾಹನಗಳಲ್ಲಿ ಕಲಬುರಗಿ ತಲುಪುವ ನಿರೀಕ್ಷೆಯಿದೆ.
100 ಎಕರೆಯಲ್ಲಿ ಪೆಂಡಾಲ್ ಹಾಕಲಾಗಿದ್ದು, ಸುಮಾರು 3,000 ಸ್ವಯಂಸೇವಕರ ತಂಡವು ಸಮಾವೇಶವನ್ನು ಭಾಗವಹಿಸುತ್ತಿದ್ದಾರೆ. 5 ಲಕ್ಷ ಜನರಿಗೆ ಅನ್ನಸಂತರ್ಪಣೆ ನಡೆಯಲಿದ್ದು,1 ಲಕ್ಷಕ್ಕೂ ಹೆಚ್ಚು ಪಕ್ಷದ ಧ್ವಜಗಳು ನಗರವನ್ನು ಅಲಂಕರಿಸಲಿವೆ ತೆಲ್ಕೂರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಎಸ್ಸಿ/ಎಸ್ಟಿ ಸಮಾವೇಶ, ಬೆಂಗಳೂರಿನಲ್ಲಿ ಮಹಿಳಾ ಸಮಾವೇಶ, ಶಿವಮೊಗ್ಗದಲ್ಲಿ ಯುವ ಸಮಾವೇಶ, ಅಲ್ಪಸಂಖ್ಯಾತರ ಮತ್ತು ರೈತರ ಸಮಾವೇಶ ಸೇರಿದಂತೆ ಎಂಟು ರಾಜ್ಯ ಮಟ್ಟದ ಸಭೆಗಳನ್ನು ನಡೆಸಲು ಕೇಸರಿ ಪಕ್ಷ ಯೋಜಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಾಜಿ ಸಚಿವ ಕೆಎಸ್ ಈಶ್ವರಪ್ಪ, ದಕ್ಷಿಣ ಕನ್ನಡ ಸಂಸದರೂ ಆಗಿರುವ ರಾಜ್ಯ ಬಿಜೆಪಿ ಮುಖ್ಯಸ್ಥ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಭಾಗವಹಿಸಲಿದ್ದಾರೆ.