ಹಾಸನ ಹೊರತುಪಡಿಸಿ ಉಳಿದ ಕ್ಷೇತ್ರದ ಅಭ್ಯರ್ಥಿಗಳ 2ನೇ ಪಟ್ಟಿ ಇಂದು ಸಂಜೆ ಬಿಡುಗಡೆ, ಏಪ್ರಿಲ್ 19ಕ್ಕೆ ನಾಮಪತ್ರ ಸಲ್ಲಿಕೆ: ಎಚ್.ಡಿ.ಕುಮಾರಸ್ವಾಮಿ

ಹಾಸನ ಹೊರತುಪಡಿಸಿ ಉಳಿದ ಕ್ಷೇತ್ರ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಸೋಮವಾರ ಸಂಜೆ ಬಿಡುಗಡೆ ಮಾಡಲಾಗುತ್ತಿದ್ದು, ಏಪ್ರಿಲ್ 19ಕ್ಕೆ ನಾಮಪತ್ರ ಸಲ್ಲಿಸುತ್ತೇನೆಂದು ಜೆಡಿಎಸ್ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಹೇಳಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ
ಹೆಚ್.ಡಿ.ಕುಮಾರಸ್ವಾಮಿ

ರಾಮನಗರ: ಹಾಸನ ಹೊರತುಪಡಿಸಿ ಉಳಿದ ಕ್ಷೇತ್ರ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಸೋಮವಾರ ಸಂಜೆ ಬಿಡುಗಡೆ ಮಾಡಲಾಗುತ್ತಿದ್ದು, ಏಪ್ರಿಲ್ 19ಕ್ಕೆ ನಾಮಪತ್ರ ಸಲ್ಲಿಸುತ್ತೇನೆಂದು ಜೆಡಿಎಸ್ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಹೇಳಿದ್ದಾರೆ.

ಚನ್ನಪಟ್ಟಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ವಿಚಾರದಲ್ಲಿ ನನ್ನ ನಿಲುವು ಬದಲಾಗುವುದಿಲ್ಲ. ಹಾಸನದಲ್ಲಿ ಜನಾಭಿಪ್ರಾಯ ಹಾಗೂ ಕಾರ್ಯಕರ್ತರ ಅಭಿಪ್ರಾಯವನ್ನು ಪರಿಗಣಿಸಲಾಗುತ್ತದೆ. ಹಾಸನ ಕ್ಷೇತ್ರದ ಟಿಕೆಟ್ ಅನ್ನು ದೇವೇಗೌಡರು ಫೈನಲ್ ಮಾಡಲಿದ್ದಾರೆ. ಹೀಗಾಗಿ, ಹಾಸನ ಹೊರತುಪಡಿಸಿ ಉಳಿದ ಕ್ಷೇತ್ರದ ಅಭ್ಯರ್ಥಿಗಳ 2ನೇ ಪಟ್ಟಿ ಇಂದು ಸಂಜೆ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಏಪ್ರಿಲ್ 19ರಂದು ನಾನು ಚನ್ನಪಟ್ಟಣದಲ್ಲಿ ನಾಮಪತ್ರ ಸಲ್ಲಿಸುತ್ತೇನೆ. ಹಾಗೇ ಏಪ್ರಿಲ್ 20 ಹಾಗೂ 21ಎರಡು ದಿನಗಳ ಕಾಲ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ. ಏ.17ರಂದು ಪುತ್ರ ನಿಖಿಲ್ ರಾಮನಗರದಲ್ಲಿ ನಾಮಪತ್ರ ಸಲ್ಲಿಸುತ್ತಾನೆಂದು ತಿಳಿಸಿದರು.

ಚನ್ನಪಟ್ಟಣ ಕ್ಷೇತ್ರದ ಜನತೆ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಮನೆ ಮಗನ ರೀತಿಯಲ್ಲಿ ನನಗೆ ಆಶೀರ್ವಾದ ಮಾಡುತ್ತಾರೆ. ರಾಮನಗರ ಜಿಲ್ಲೆಯ 3 ವಿಧಾನಸಭಾ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ. ನಿಮ್ಮ ಮನೆ ಮಗನನ್ನ ಬಿಟ್ಟು ಬೇರೆ ಯಾರೂ ಮುಖ್ಯಮಂತ್ರಿ ಆಗುವುದಕ್ಕೆ ಆಗಲ್ಲ. ಈಗಾಗಲೇ ರಾಜ್ಯದಲ್ಲಿ ಪಂಚರತ್ನ ರತಯಾತ್ರೆ ಯಶಸ್ವಿಯಾಗಿದ್ದು, ಎಲ್ಲಾ ಭಾಗದಲ್ಲೂ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದೆ.

ಸ್ಥಳೀಯವಾಗಿ ಕೆಲ ಭಿನ್ನಾಭಿಪ್ರಾಯ ಇರಬಹುದು. ಅದನ್ನ ಕೂತು ಮಾತನಾಡಿ ಸರಿಪಡಿಸಿಕೊಳ್ಳಬಹುದು. ನನಗೆ ಸಂಪೂರ್ಣ ವಿಶ್ವಾಸ ಇದೆ. ಈ ಬಾರಿಯೂ ಗೆಲ್ಲುತ್ತೇವೆ. ಆದರೆ, ಕೆಲವರು ಆತಂಕ ವ್ಯಕ್ತಪಡಿಸಿದರು. ನಿಮ್ಮ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಎಂದರು. ಆದರೆ, ಅವರಿಗೆ ನಾನು ಒಂದೇ ಮಾತು ಹೇಳಿದ್ದೇನೆ. ಈ ಬಾರಿ ನಾನು ಒಂದೇ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧೆ ಮಾಡುತ್ತೇನೆಂದು. ಚನ್ನಪಟ್ಟಣದಲ್ಲಿ ನಮ್ಮ ಶಕ್ತಿ ದೊಡ್ಡಮಟ್ಟದಲ್ಲಿದೆ. ಚನ್ನಪಟ್ಟಣಕ್ಕೆ ಮತ್ತೆ ಮುಖ್ಯಮಂತ್ರಿ ಆಗುವ ಅವಕಾಶ ಇದೆ ಎಂದರು.

ಮೈತ್ರಿ ಸರ್ಕಾರದಲ್ಲಿ ದೊಡ್ಡ ದೊಡ್ಡ ಸವಾಲುಗಳಿದ್ದವು. ರೈತರ ಸಾಲ ಮನ್ನಾ ಮಾಡಿದ್ದೆ. ಕಾಂಗ್ರೆಸ್ ಒತ್ತಡದ ನಡುವೆಯೂ ಉತ್ತಮ ಆಡಳಿತ ಕೊಟ್ಟಿದ್ದೆ, ಆಗ ಚನ್ನಪಟ್ಟಣದ ಕಡೆ ಗಮನಕೊಡುತ್ತಿಲ್ಲ ಎಂಬ ಅಪಪ್ರಚಾರ ಮಾಡಿದರು. ಕ್ರಿಕೆಟ್ ಬೆಟ್ಟಿಂಗ್ ದಂಧೆ ಮಾಡುವವರು ಸರ್ಕಾರ ಉರುಳುಸಿದರು ಎಂದು ಪರೋಕ್ಷವಾಗಿ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿಪಿ ಯೋಗೇಶ್ವರ್​ ವಿರುದ್ಧ ಕಿಡಿಕಾರಿದರು.

ಈಗ ಫ್ರೀ ಪೋಲ್ ಸರ್ವೆಗಳು ನಡೆಯುತ್ತಿವೆ. ದುಡ್ಡು ಕೊಟ್ಟರೆ ಜೆಡಿಎಸ್ ಗೆ 200 ಸೀಟ್ ಬರುತ್ತೆ ಎಂದೂ ಕೂಡ ಹೇಳುತ್ತವೆ. ಹಾಗಾಗಿ ಈ ಫ್ರೀ ಪೋಲ್ ಸರ್ವೆಗಳ ಬಗ್ಗೆ ನಾನು ತಲೆಕಡೆಸಿಕೊಳ್ಳಲ್ಲ. ಕ್ಷೇತ್ರಕ್ಕೆ ಹೆಚ್ವು ಅನುದಾನ ತಂದಿದ್ದೇನೆ ಎಂದು ಕೆಲವರು ಓಡಾಡುತ್ತಿದ್ದಾರೆ. ಆದರೆ, ಅವರು ನನ್ನ ಹೆಸರು ಹೇಳಿಕೊಂಡೇ ಅನುದಾನ ತರಬೇಕು, ಇಲ್ಲಿ ಕುಮಾರಸ್ವಾಮಿ ಸೋಲಿಸುತ್ತೇನ ಎಂದು ದುಡ್ಡು ತರುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಈ ವ್ಯಕ್ತಿಗಳು ಎಲ್ಲಿದ್ದರು? ಚುನಾವಣೆ ಸಂದರ್ಭದಲ್ಲಿ ಮಾತ್ರ ಇವರು ಬರುವುದು. ನನಗೆ ಇನ್ನೊಂದು ವರ್ಷ ಅಧಿಕಾರ ಇದ್ದಿದ್ದರೆ ಎಲ್ಲಾ ಸಮಸ್ಯೆ ಬಗೆಹರಿಸುತ್ತಿದ್ದೆ. ನನ್ನ ಅಧಿಕಾರ ತೆಗೆದವರು ಇವರೇ. ಈಗ ಕೆಲಸ ಮಾಡಿಲ್ಲ ಎಂದು ಹೇಳುತ್ತಿರುವುದು ಇವರೇ ಎಂದು ಹೆಸರು ಹೇಳದೇ ಯೋಗೇಶ್ವರ್​ ವಿರುದ್ಧ ವಾಗ್ದಾಳಿ ನಡೆಸಿದರು.

2018ರ ರೀತಿಯಲ್ಲಿ ಈ ಚುನಾವಣೆ ನಡೆಸಿಕೊಡಿ. ನೀವೇ ಮುಂದೆ ನಿಂತು ಚುನಾವಣೆ ನಡೆಸಿ. ನನ್ನನ್ನ ನೀವು ರಕ್ಷಣೆ ಮಾಡಿದರೆ, ರಾಜ್ಯದ ಬಡವರನ್ನ ನಾನು ರಕ್ಷಣೆ ಮಾಡುತ್ತೇನೆ. ಈ ಬಾರಿ ನನಗೆ ಶಕ್ತಿ ನೀಡಿ ಎಂದು ಜನತೆ ಬಳಿ ಮನವಿ ಮಾಡಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com