ಸಂಶೋಧನೆ ಇಲ್ಲದೆಯೇ ಸರ್ಕಾರ ಗ್ಯಾರಂಟಿ ಯೋಜನೆಗಳ ಘೋಷಣೆ ಮಾಡಿದೆ: ಬಿಜೆಪಿ ರಾಷ್ಟ್ರೀಯ ವಕ್ತಾರೆ ಶಾಜಿಯಾ ಇಲ್ಮಿ

ಪರಿಶೀಲನೆಗಳಿಲ್ಲದೆಯೇ ಸರ್ಕಾರ ಗ್ಯಾರಂಟಿ ಯೋಜನೆಗಳ ಘೋಷಣೆ ಮಾಡಿದ್ದು, ಇದೀಗ ಆರ್ಥಿಕ ಕೊರತೆಯಿಂದ ಅವುಗಳ ಜಾರಿಗೆ ತರಲು ಹೆಣಗಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರೆ ಶಾಜಿಯಾ ಇಲ್ಮಿ ಅವರು ಕಾಂಗ್ರೆಸ್ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿದರು.
ಬಿಜೆಪಿ ರಾಷ್ಟ್ರೀಯ ವಕ್ತಾರ: ಶಾಜಿಯಾ ಇಲ್ಮಿ
ಬಿಜೆಪಿ ರಾಷ್ಟ್ರೀಯ ವಕ್ತಾರ: ಶಾಜಿಯಾ ಇಲ್ಮಿ

ಮಂಗಳೂರು: ಪರಿಶೀಲನೆಗಳಿಲ್ಲದೆಯೇ ಸರ್ಕಾರ ಗ್ಯಾರಂಟಿ ಯೋಜನೆಗಳ ಘೋಷಣೆ ಮಾಡಿದ್ದು, ಇದೀಗ ಆರ್ಥಿಕ ಕೊರತೆಯಿಂದ ಅವುಗಳ ಜಾರಿಗೆ ತರಲು ಹೆಣಗಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರೆ ಶಾಜಿಯಾ ಇಲ್ಮಿ ಅವರು ಕಾಂಗ್ರೆಸ್ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ₹ 2000 ನೀಡುವ ಭರವಸೆ ನೀಡಿ ಕಾಂಗ್ರೆಸ್‌ ಕರ್ನಾಟಕದಲ್ಲಿ ಗೆದ್ದಿತ್ತು. ಈ ಕಾರ್ಯಕ್ರಮವು ರಾಜ್ಯದಲ್ಲಿ ವಿತ್ತೀಯ ಕೊರತೆಗೆ ಕಾಣವಾಗಲಿದೆ. ಇದರ ಜಾರಿಯಿಂದ ವಿತ್ತೀಯ ಹೊಣೆಗಾರಿಕೆ ಕಾಯ್ದೆ ಉಲ್ಲಂಘನೆ ಆಗುವ ಅಪಾಯವಿದೆ ಎಂದು ಹಣಕಾಸು ಇಲಾಖೆ ಕಳವಳ ವ್ಯಕ್ತಪಡಿಸಿದೆ. ಭರವಸೆ ನೀಡುವುದು ಸುಲಭ. ಈಡೇರಿಸುವುದು ಕಷ್ಟ. ಭಾರಿ ಭರವಸೆಗಳ ಆಟಕ್ಕೆ ಇದರಿಂದ ಹಿನ್ನಡೆ ಆಗಲಿದೆ’ ಎಂದು ಹೇಳಿದರು.

ಆದಾಯ ತೆರಿಗೆ, ಜಿಎಸ್‌ಟಿ, ವೃತ್ತಿ ತೆರಿಗೆ ಪಾವತಿದಾರರನ್ನು, 5 ಎಕರೆಗಿಂತ ಜಾಸ್ತಿ ಒಣ ಭೂಮಿ ಹೊಂದಿರುವವರನ್ನು, ಅಂಗನವಾಡಿ ಕಾರ್ಯಕರ್ತೆಯರನ್ನು, ಆಶಾ ಕಾರ್ಯಕರ್ತೆಯರನ್ನು, ಆರ್ಥಿಕ ಭದ್ರತೆ ಯೋಜನೆಗಳ ಫಲಾನುಭವಿಗಳನ್ನು ಹಾಗೂ ಸರ್ಕಾರಿ ಉದ್ಯೋಗಿಗಳನ್ನು ಈ ಕಾರ್ಯಕ್ರಮದಿಂದ ಹೊರಗಿಟ್ಟರೆ ₹4,800 ಕೋಟಿಗಳಷ್ಟು ಹೊರೆ ಕಡಿಮೆ ಆಗಲಿದೆ ಎಂದು ಹಣಕಾಸು ಇಲಾಖೆ ಸಲಹೆ ನೀಡಿದೆ. ಪತಿ ಆದಾಯ ತೆರಿಗೆ ಕಟ್ಟುತ್ತಿದ್ದರೆ ಪತ್ನಿಗೆ ಈ ಸವಲತ್ತು ನೀಡಬಾರದು ಎಂದು ಹೇಳಿದೆ. ಆಗ ಫಲಾನುಭವಿಗಳ ಸಂಖ್ಯೆ ಕುಸಿಯುತ್ತಲೇ ಸಾಗಲಿದೆ. ತಮಗೂ ಈ ಯೋಜನೆಯಿಂದ ಪ್ರಯೋಜನವಾಗುತ್ತದೆ ಎಂದು ನಂಬಿದ್ದ ಮಹಿಳೆಯರು ನಿರಾಸೆಗೊಳಗಾಗಿದ್ದಾರೆ. ಎಲ್ಲರನ್ನೂ ಹೊರಗಿಟ್ಟರೆ ಮತ್ತೆ ಉಳಿಯುವುದು ಯಾರು’ ಎಂದು ಪ್ರಶ್ನಿಸಿದರು.

ಇದು ಒಂದು ಗ್ಯಾರಂಟಿಯ ವಿಚಾರ ಮಾತ್ರ. ಉಳಿದ ನಾಲ್ಕು ಗ್ಯಾರಂಟಿ ಜಾರಿಯಾಗುವಾಗ ರಾಜ್ಯದ ಸ್ಥಿತಿ ಹೇಗಿರಬಹುದು. ರಾಜ್ಯದ ಅಭಿವೃದ್ಧಿ ಯಾವ ದಿಸೆಯಲ್ಲಿ ಸಾಗಲಿದೆ. ರಸ್ತೆ, ಹೆದ್ದಾರಿ ಮೊದಲಾದ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಸೇವೆಗಳ ಪಾಡೇನು. ಇವುಗಳಿಗೆ ಸರ್ಕಾರ ನ್ಯಾಯ ಒದಗಿಸಲಾಗುತ್ತದೆಯೇ ಎಂಬುದಕ್ಕೆ ಕಾಂಗ್ರೆಸ್‌ ಉತ್ತರಿಸಬೇಕು’ ಎಂದು ಒತ್ತಾಯಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಪ್ರಸ್ತುತ ಕೇಂದ್ರ ಸರ್ಕಾರವು ಜನರಿಗೆ ಉತ್ತಮ ರಸ್ತೆ ಮೂಲಸೌಕರ್ಯ, ಆರೋಗ್ಯ ಸೌಲಭ್ಯಗಳು ಇತ್ಯಾದಿಗಳನ್ನು ಪಡೆಯಲು ಹಲವಾರು ಯೋಜನೆಗಳನ್ನು ತಂದಿದೆ. ಆದರೆ. ಇಲ್ಲಿನ ಕರ್ನಾಟಕ ಸರ್ಕಾರವು ಈ ‘ರೇವಡಿ ಸಂಸ್ಕೃತಿ’ಯೊಂದಿಗೆ ಆರೋಗ್ಯ, ಶಿಕ್ಷಣ ಅಥವಾ ಮೂಲಸೌಕರ್ಯ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳಲ್ಲಿ ರಾಜಿ ಮಾಡಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.

ಇದೇ ವೇಳೆ ಚುನಾವಣೆ ವೇಳೆ ಬಿಜೆಪಿ ನೀಡಿದ್ದ ಉಚಿತ ಭರವಸೆಗಳ ಕುರಿತು ಕೇಳಲಾದ ಪ್ರಶ್ನೆಗೆ, ಈ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com