ಕಾಂಗ್ರೆಸ್ ಮುಖಂಡ ಶ್ರೀಕಾಂತ್ ಘೋಟ್ನೇಕರ್ ಜೆಡಿಎಸ್ ಸೇರ್ಪಡೆ: ಗುರುವಿಗೆ ತಿರುಗೇಟು ನೀಡಲು ಮುಂದಾದ ಶಿಷ್ಯ; ಆರ್.ವಿ ದೇಶಪಾಂಡೆ ವಿರುದ್ಧ ಸ್ಪರ್ಧೆ!

ಹಳಿಯಾಳದ ಮಾಜಿ ಕಾಂಗ್ರೆಸ್ ಮುಖಂಡ ಶ್ರೀಕಾಂತ್ ಘೋಟ್ನೇಕರ್ ಜೆಡಿಎಸ್ ಸೇರಿದ್ದು, ಆರ್ ವಿ ದೇಶಪಾಂಡೆ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
ಆರ್. ವಿ ದೇಶಪಾಂಡೆ
ಆರ್. ವಿ ದೇಶಪಾಂಡೆ

ಕಾರವಾರ: ಹಳಿಯಾಳದ ಮಾಜಿ ಕಾಂಗ್ರೆಸ್ ಮುಖಂಡ ಶ್ರೀಕಾಂತ್ ಘೋಟ್ನೇಕರ್ ಜೆಡಿಎಸ್ ಸೇರಿದ್ದು, ಆರ್ ವಿ ದೇಶಪಾಂಡೆ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಘೋಟ್ನೇಕರ ಅವರು ಕಾಂಗ್ರೆಸ್ ಜೊತೆಗಿನ 40 ವರ್ಷಗಳ ಒಡನಾಟವನ್ನು ಇತ್ತೀಚೆಗಷ್ಟೇ ಕೊನೆಗೊಳಿಸಿದ್ದು, ಪಕ್ಷದ ಮುಖಂಡರಾದ ಹೆಚ್ ಡಿ ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ, ಎಂಎಲ್ ಸಿ ತಿಪ್ಪೇಸ್ವಾಮಿ ಸಮ್ಮುಖದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಕಾಂಗ್ರೆಸ್ ತೊರೆಯಲು ನಿರ್ಧರಿಸಿದ ಮೇಲೆ ಎಲ್ಲರನ್ನು ಸಂಪರ್ಕಿಸಿದ್ದೆ, ಆದರೆ ಯಾವುದೇ ಆಯ್ಕೆಯಿರಲಿಲ್ಲ ಹೀಗಾಗಿ ನನಗೆ ಬೇರೆ ದಾರಿಯಿಲ್ಲದೇ ನಾನು ಜೆಡಿಎಸ್ ಸೇರಲು ನಿರ್ಧರಿಸಿದೆ ಎಂದು ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ಘೋಟ್ನೇಕರ ಅವರನ್ನು ಪಕ್ಷಕ್ಕೆ ಕರೆತರಲು ಕಾರಣಕರ್ತರಾದ ಜೆಡಿಎಸ್ ವಕ್ತಾರ ಹಾಗೂ ದಾಂಡೇಲಿ ಮೂಲದ ರೋಷನ್ ಬಾವಾಜಿ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವ ಮುನ್ನವೇ ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿದ್ದರು. ಪಕ್ಷಕ್ಕೆ ಸೇರುವುದರಿಂದ ಉಂಟಾಗುವ ಲಾಭ ನಷ್ಟದ ಬಗ್ಗೆ ಕುಮಾರಸ್ವಾಮಿ ಪಕ್ಷದ ಅಧ್ಯಕ್ಷ ಸಿ ಎಂ ಇಬ್ರಾಹಿಂ ಜೊತೆ ಚರ್ಚಿಸಿ ಗ್ರೀನ್ ಸಿಗ್ನಲ್ ನೀಡಿದ್ದರು. ಆಗ ಪಕ್ಷದ ಪರವಾಗಿ ಅವರಿಗೆ ಔಪಚಾರಿಕ ಆಹ್ವಾನ ನೀಡಿದ್ದೆ ಎಂದಿದ್ದಾರೆ.

ಘೋಟ್ನೇಕರ ಅವರು ತಮ್ಮ ಅನುಯಾಯಿಗಳ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. ದಿನೇಶ್ ಹಳ್ದುಕರ್ ಮತ್ತಿತರರು ಸೇರಿದಂತೆ ಹಳಿಯಾಳದ 183 ಮಂದಿ ಅನುಯಾಯಿಗಳ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. ಕಳೆದ 40 ವರ್ಷಗಳಿಂದ ಕಾಂಗ್ರೆಸ್‌ನ ಹಿರಿಯ ನಾಯಕ ದೇಶಪಾಂಡೆ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಲು ಸಹಾಯ ಮಾಡಿದ್ದ ಘೋಟ್ನೇಕರ್ ಅವರು ಒಮ್ಮೆಯಾದರೂ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು.

ಪಕ್ಷದಿಂದ ಎಂಎಲ್ಸಿ ಆಗಿದ್ದ ಅವರು 2022 ರ ಚುನಾವಣೆಯಲ್ಲಿ ಮೇಲ್ಮನೆಗೆ ಸ್ಪರ್ಧಿಸಲು ನಿರಾಕರಿಸಿದರು, ನಂತರ ಬಿಜೆಪಿ ಅಭ್ಯರ್ಥಿ ಗಣಪತಿ ಉಳವೇಕರ್ ಗೆದ್ದರು. ಆದರೆ, ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಅವರ ಆಸೆಯನ್ನು ಪಕ್ಷದ ವರಿಷ್ಠರಾದ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರು ತಿರಸ್ಕರಿಸಿದ್ದಾರೆ.

ಪಕ್ಷದಿಂದ ಸ್ಪರ್ಧಿಸಲು ನಿರಾಕರಿಸಿದರೇ ಅವರು ಬಿಜೆಪಿಗೆ ಸೇರುತ್ತಾರೆ ಎಂದು ವ್ಯಾಪಕವಾಗಿ ಊಹಿಸಲಾಗಿತ್ತು. ಆದರೆ, ಕಳೆದ 10 ವರ್ಷಗಳಿಂದ  ಸುನೀಲ್ ಹೆಗಡೆ  ಬಿಜೆಪಿ ಟಿಕೆಟ್ ಗಾಗಿ ಕಾದು ಕುಳಿತಿದ್ದಾರೆ. 2008ರಲ್ಲಿ ಜೆಡಿಎಸ್‌ ಟಿಕೆಟ್‌ನಲ್ಲಿ ಗೆದ್ದಿದ್ದ ಹೆಗಡೆ ಬಿಜೆಪಿ ಸೇರಿ 2013 ಮತ್ತು 2018ರ ಚುನಾವಣೆಯಲ್ಲಿ ದೇಶಪಾಂಡೆ ವಿರುದ್ಧ ತೀವ್ರ ಪೈಪೋಟಿ ನಡೆಸಿ ಸೋತಿದ್ದರು. ಘೋಟ್ನೇಕರ ಜೆಡಿಎಸ್ ಸೇರ್ಪಡೆಯಿಂದ ಹಳಿಯಾಳದಲ್ಲಿ ಸ್ಪರ್ಧೆ ಕುತೂಹಲ ಮೂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com