ಬೆಂಗಳೂರು: ಪುತ್ತೂರಿನ ಹಿಂದೂ ಪರ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನು ಶನಿವಾರ ಭೇಟಿ ಮಾಡಿದ್ದು, ಇಬ್ಬರ ಈ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲವನ್ನು ಸೃಷ್ಟಿಸಿದೆ.
ಇತ್ತೀಚೆಗೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆದು ಪುತ್ತೂರು ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಅಭ್ಯರ್ಥಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದರು.
ಇದೀಗ ಅರುಣ್ ಕುಮಾರ್ ಅವರನ್ನು ದೆಹಲಿಗೆ ಕರೆಸಿಕೊಂಡು ಬಿಎಲ್ ಸಂತೋಷ್ ರಹಸ್ಯ ಸಭೆ ನಡೆಸಿದ್ದಾರೆಂದು ತಿಳಿದುಬಂದಿದೆ. 2024ರ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ರಾಜ್ಯ ಬಿಜೆಪಿ, ಚುನಾವಣೆ ವೇಳೆ ಅರುಣ್ ಅವರಿಗೆ ಆಫರ್ ನೀಡಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಸಂತೋಷ್ ಅವರ ಆಹ್ವಾನದ ಮೇರೆಗೆ ಪುತ್ತಿಲ ಮತ್ತು ಅವರ ನಾಲ್ವರು ಆಪ್ತರು ಸಂತೋಷ್ ಅವರನ್ನು ಭೇಟಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾತುಕತೆ ವೇಳೆ ಅರುಣ್ ಕುಮಾರ್ ಪುತ್ತಿಲ ಅವರ ಮಾತುಗಳ ಆಲಿಸಲು ಸಮಯ ನೀಡಿದ ಸಂತೋಷ್ ಅವರು, ಎಲ್ಲಾ ಸಮಸ್ಯೆಗಳ ಬಗೆಹರಿಸುವ ಭರವಸೆ ನೀಡಿದ್ದಾರೆಂದು ಹೇಳಲಾಗುತ್ತಿದೆ.
ಅಲ್ಲದೆ, ಅರುಣ್ ಕುಮಾರ್ ಪುತ್ತಿಲ ಅವರ ನಾಲ್ವರು ಆಪ್ತರು, ಮುಂದಿನ ಲೋಕಸಭಾ ಚುನಾವಣೆ ವೇಳೆ ದಕ್ಷಿಣ ಕನ್ನಡ ಲೋಕಸಭಾ ಸಂಸದರಾಗಿ ಪುತ್ತಿಲ ಅವರನ್ನು ನೋಡುವ ಬಯಕೆಯನ್ನೂ ವ್ಯಕ್ತಪಡಿಸಿದ್ದಾರೆಂಗೂ ವರದಿಗಳಿ ತಿಳಿಸಿವೆ.
ಈ ಹಂತದಲ್ಲಿ ಪುತ್ತಿಲ ಅವರ ‘ಒತ್ತಡದ ತಂತ್ರ’ ಫಲ ನೀಡುತ್ತದೆಯೇ ಎಂಬುದನ್ನು ಊಹಿಸುವುದು ಕಷ್ಟ’ ಎಂದು ಹೆಸರು ಹೇಳಲು ಇಚ್ಛಿಸದ ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.
ಅರುಣ್ ಕುಮಾರ್ ಪುತ್ತಿಲ ಬ್ರಾಹ್ಮಣರಾಗಿದ್ದು, ಪಕ್ಷವು ಅವರಿಗೆ ಅವಕಾಶ ನೀಡಬೇಕಾದರೆ ಅದು ರಾಜ್ಯದ ಮೂವರು ಬ್ರಾಹ್ಮಣ ಹಾಲಿ ಸಂಸದರಲ್ಲಿ ಒಬ್ಬರ ಕೈ ಬಿಡಬೇಕಾಗುತ್ತದೆ. ಇದು ಸುಲಭದ ವಿಚಾರವಲ್ಲ ಎಂದು ತಿಳಿಸಿದ್ದಾರೆ.
Advertisement