ಕರ್ನಾಟಕವನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಿದೆ ಕಾಂಗ್ರೆಸ್: ಆರ್.ಅಶೋಕ್

ಮತಾಂತರ ನಿಷೇಧ ತಿದ್ದುಪಡಿ ಕಾಯ್ದೆ ರದ್ದು ನಿರ್ಧಾರ ಕುರಿತು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹರಿಹಾಯ್ದಿದ್ದು, ಕರ್ನಾಟಕವನ್ನು ಮಿನಿ ಪಾಕಿಸ್ತಾನ ಮಾಡಲು ಕಾಂಗ್ರೆಸ್ ಹೊರಟಿದ್ದಾರೆಂದು ಶುಕ್ರವಾರ ವಾಗ್ದಾಳಿ ನಡೆಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಬಿಜೆಪಿ ನಾಯಕ ಆರ್.ಅಶೋಕ್.
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಬಿಜೆಪಿ ನಾಯಕ ಆರ್.ಅಶೋಕ್.
Updated on

ಬೆಂಗಳೂರು: ಮತಾಂತರ ನಿಷೇಧ ತಿದ್ದುಪಡಿ ಕಾಯ್ದೆ ರದ್ದು ನಿರ್ಧಾರ ಕುರಿತು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹರಿಹಾಯ್ದಿದ್ದು, ಕರ್ನಾಟಕವನ್ನು ಮಿನಿ ಪಾಕಿಸ್ತಾನ ಮಾಡಲು ಕಾಂಗ್ರೆಸ್ ಹೊರಟಿದ್ದಾರೆಂದು ಶುಕ್ರವಾರ ವಾಗ್ದಾಳಿ ನಡೆಸಿದೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಾಯಕ ಆರ್.ಅಶೋಕ್ ಅವರು, ರಾಜ್ಯದಲ್ಲಿ ಕಾಂಗ್ರೆಸ್ಸಿಗರು ಮತಾಂತರದ ರಾಯಭಾರಿಯಾಗಲು ಹೊರಟಿದ್ದಾರೆ.ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಆರ್ಚ್ ಬಿಷಪ್ ಮಾತ್ರ ಸ್ವಾಗತ ಮಾಡಿದ್ದಾರೆ. ಆದರೆ ಯಾವುದೇ ಸ್ವಾಮೀಜಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರಾ? ರಾಜ್ಯದಲ್ಲಿ ಈವರೆಗೆ 30-40 ಹಿಂದೂಗಳು ಮತಾಂತರ ಆಗಿದ್ದಾರೆ. ಆಸ್ಪತ್ರೆ, ಶಿಕ್ಷಣ, ಲವ್ ಜಿಹಾದ್ ಇವುಗಳಿಗಾಗಿ ಹಿಂದುಗಳು ಮತಾಂತರ ಆಗಿದ್ದಾರೆ. ಕಾಂಗ್ರೆಸ್ ನಿರ್ಧಾರ ಟಿಪ್ಪು ಸಿದ್ಧಾಂತಗಳಿಗೆ ಪೂರಕವಾಗಿದೆ ಎಂದು ಕಿಡಿಕಾರಿದರು.

ತಮಗೆ ಮತ ಹಾಕಿದ ಒಂದು ವರ್ಗ ಸಂತೃಪ್ತಿಗೊಳಿಸಲು ಕಾಂಗ್ರೆಸ್ ಈ ನಿರ್ಧಾರ ಕೈಗೊಂಡಿದೆ. ಕಾಂಗ್ರೆಸ್ ವೋಟ್ಗಾಗಿ ಯಾವ ಮಟ್ಟಕ್ಕಾದರೂ ಹೋಗಬಹುದು ಎಂಬ ಭಾವನೆ ಮೂಡಿದೆ. ಕರ್ನಾಟಕವನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಿದ್ದಾರೆ ಎನಿಸುತ್ತಿದೆ. ನಾವು ಅಧಿಕಾರದಲ್ಲಿದ್ದಾಗ ಈ ಕಾಯ್ದೆ ಜಾರಿಗೆ ತಂದಿದ್ದೆವು. ಆಗ ಪಿಎಫ್ಐ ಅಂತಹವರು ಬಿಟ್ಟು ಬೇರೆ ಯಾರೂ ವಿರೋಧ ಮಾಡಿಲ್ಲ. ಕಾಯ್ದೆ ವಾಪಸ್ ಪಡೆಯದಂತೆ ಬಿಜೆಪಿ ಆಗ್ರಹಿಸುತ್ತದೆ ಎಂದು ತಿಳಿಸಿದರು.

ನಾವು ಎಪಿಎಂಸಿ ಕಾಯ್ದೆ ಜಾರಿ ಮಾಡಿರುವುದರಲ್ಲಿ ಏನು ತಪ್ಪಿದೆ. ನಿಮಗೆ ಎಪಿಎಂಸಿಗೆ ಆದಾಯ ಬರುವುದು ಮುಖ್ಯವೋ ರೈತರ ಜೇಬಿಗೆ ಹಣ ಬರೋದು ಮುಖ್ಯವೋ? ಎಪಿಎಂಸಿ ಕಾಯ್ದೆ ವಾಪಸ್ ಪಡೆಯುವ ಹಿಂದೆ ಹುನ್ನಾರ ಇದೆಯಷ್ಟೆ. ನಾವು ತಕ್ಕಡಿಯನ್ನು ರೈತರ ಕೈಗೆ ಕೊಟ್ಟಿದ್ದೆವು. ಕಾಂಗ್ರೆಸ್ ಈಗ ದಳ್ಳಾಳಿಗಳ ರಾಜ್ಯ ಮಾಡಲು ಹೊರಟಿದೆ ಎಂದು ವಿಷಾದಿಸಿದರು.

ಏಕಾಏಕಿ ಶಾಲಾ ಪಠ್ಯ ಪರಿಷ್ಕರಣೆ ಒಳ್ಳೆಯದಲ್ಲ. ಪಠ್ಯ ಪರಿಷ್ಕರಣೆ ಮೂಲಕ ಮಕ್ಕಳಿಗೆ ಕೆಟ್ಟ ಸಂದೇಶ ಕೊಡುತ್ತಿದ್ದಾರೆ. ಏಕಾಏಕಿ ಪಠ್ಯಪುಸ್ತಕ ಪರಿಷ್ಕರಣೆ ಒಳ್ಳೆಯದಲ್ಲ. ಸಮಯ ಇದೆ, ನಿಧಾನವಾಗಿ ಪರಿಷ್ಕರಣೆ ಮಾಡಿ ಎಂದು ಸಲಹೆ ನೀಡಿದರು.

ವಿದ್ಯುತ್ ಬಿಲ್ ಹೇಳುವಂತೆಯೇ ಇಲ್ಲ. 10 ರೂಪಾಯಿ ಕೊಟ್ಟು, 20 ರೂಪಾಯಿ ಕಿತ್ತುಕೊಳ್ಳುತ್ತಿದ್ದಾರೆ. ಅಂದು ಗ್ಯಾರಂಟಿ ಕಾರ್ಡ್ ಮೇಲೆ ಷರತ್ತು ಅನ್ವಯ ಅಂತಾ ಬರೆಯಬೇಕಿತ್ತು‌ ಎಂದು ಇದೇ ವೇಯೆ ಗ್ಯಾರಂಟಿ ಯೋಜನೆಗಳ ಕುರಿತು ವ್ಯಂಗ್ಯವಾಡಿದರು.

ಅನ್ನಭಾಗ್ಯ ಅಕ್ಕಿ ವಿಚಾರ ಸುರ್ಜೇವಾಲಾ ತಮ್ಮನ್ನು ತಾವು ಕರ್ನಾಟಕದ ಕ್ಯಾಬಿನೆಟ್ ಮಿನಿಸ್ಟರ್ ಎಂದು ತಿಳಿದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಅಂದ್ರೆ ಅತ್ತೆ ಮನೆ ಅಂತಾ ತಿಳಿದುಕೊಂಡಿದ್ದೀರಾ? ಕೇಂದ್ರ ಸರ್ಕಾರ ಕಾಂಗ್ರೆಸ್ ಅತ್ತೆ ಮನೆ ಅಲ್ಲ. ನಾಳೆ ಕರ್ನಾಟಕವನ್ನು ಮಾರುತ್ತೇವೆ ಅಂದ್ರೆ ಕೇಂದ್ರ ಸರ್ಕಾರ ಯೆಸ್ ಅನ್ನಬೇಕಾ? ಸಿದ್ದರಾಮಯ್ಯನವರೇ ಅಂದು ಕೇಂದ್ರ ಸರ್ಕಾರ ಕೊಟ್ಟ ಅನ್ನಭಾಗ್ಯ ಅಕ್ಕಿಗೆ ನಿಮ್ಮ ಸೀಲ್ ಹಾಕಿದ್ರಲ್ಲಾ ನಾಚಿಕೆ ಅಗಲ್ವಾ? ಒಂದು ವರ್ಷದಲ್ಲಿ ಈ ಸರ್ಕಾರ ದಿವಾಳಿ ಎದ್ದು ಹೋಗುತ್ತದೆ. ಜನ ಕಾನೂನು ಕೈಗೆ ತೆಗೆದುಕೊಳ್ಳುತ್ತಿದ್ದಾರೆ. ವಿದ್ಯುತ್ ದರದಲ್ಲಿ ಮೋಸಗಾರರು ಯಾರು ಎಂದು ಜನಕ್ಕೆ ಗೊತ್ತಾಗಬೇಕು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com