ಬೆಳಗಾವಿಯಲ್ಲಿ ಬಿಜೆಪಿಗೆ ಎಂಇಎಸ್ ಸವಾಲು; ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಕೇಸರಿ ಪಾಳಯಕ್ಕೆ ಸಂಕಷ್ಟ

ಬೆಳಗಾವಿಯಲ್ಲಿ ಮಹಾರಾಷ್ಟ್ರದೊಂದಿಗಿನ ಗಡಿ ಸಮಸ್ಯೆಯನ್ನು ಜೀವಂತವಾಗಿಡಲು ಶ್ರಮಿಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯು (ಎಂಇಎಸ್) ಜಿಲ್ಲೆಯ ನಾಲ್ಕು ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿಯ ಅದೃಷ್ಟವನ್ನು ಹಾಳುಮಾಡುವ ಸಾಧ್ಯತೆಯಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ಬೆಳಗಾವಿಯಲ್ಲಿ ಮಹಾರಾಷ್ಟ್ರದೊಂದಿಗಿನ ಗಡಿ ಸಮಸ್ಯೆಯನ್ನು ಜೀವಂತವಾಗಿಡಲು ಶ್ರಮಿಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯು (ಎಂಇಎಸ್) ಜಿಲ್ಲೆಯ ನಾಲ್ಕು ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿಯ ಅದೃಷ್ಟವನ್ನು ಹಾಳುಮಾಡುವ ಸಾಧ್ಯತೆಯಿದೆ.

ಈ ಪ್ರದೇಶಗಳು ಬಿಜೆಪಿಯ ಭದ್ರಕೋಟೆಗಳಾಗಿದ್ದು, ಕೇಸರಿ ಪಕ್ಷವು ಈ ಬೆಲ್ಟ್‌ನಲ್ಲಿ ಗೆದ್ದೇ ಗೆಲ್ಲುವ ಉತ್ಸಾಹದಲ್ಲಿದೆ. ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿರುವ ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸಬೇಕೆಂದು ಎಂಇಎಸ್ ಹೋರಾಟ ನಡೆಸುತ್ತಿದೆ.

ಬೆಳಗಾವಿಯು ಈ ಹಿಂದಿನ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿತ್ತು ಮತ್ತು ಶೇ 40ರಷ್ಟು ಮರಾಠಿ ಮಾತನಾಡುವ ಜನರು ಇಲ್ಲಿದ್ದಾರೆ ಎಂಬುದನ್ನು ಗಮನಿಸಬಹುದು.

ಬೆಳಗಾವಿ (ದಕ್ಷಿಣ)ದಿಂದ ರಮಾಕಾಂತ್ ಕೊಂಡೂಸ್ಕರ್ ಅವರನ್ನು ಎಂಇಎಸ್ ಕಣಕ್ಕಿಳಿಸಿದೆ ಮತ್ತು ಅವರು ಬಿಜೆಪಿಯ ಮೂರು ಅವಧಿಯ ಶಾಸಕ ಅಭಯ ಪಾಟೀಲ್ ವಿರುದ್ಧ ಸೆಣಸಲಿದ್ದಾರೆ. ಶ್ರೀರಾಮಸೇನೆ ಹಿಂದೂಸ್ತಾನದ ಅಧ್ಯಕ್ಷರೂ ಆಗಿರುವ ಕೊಂಡೂಸ್ಕರ್ ಅವರು ಹೆಚ್ಚಿನ ಸಂಖ್ಯೆಯ ಬಿಜೆಪಿ ಮತಗಳನ್ನು ಸೆಳೆಯಬಹುದು ಎನ್ನಲಾಗಿದೆ.

ಬೆಳಗಾವಿ (ಗ್ರಾಮೀಣ)ದಿಂದ ಆರ್‌ಎಂ ಚೌಗಲೆ ಅವರನ್ನು ಎಂಇಎಸ್ ಕಣಕ್ಕಿಳಿಸಿದ್ದು, ಕಾಂಗ್ರೆಸ್‌ನ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಬಿಜೆಪಿಯ ನಾಗೇಶ್ ಮುನ್ನೋಳ್ಕರ್ ಅವರಿಗೆ ತೀವ್ರ ಪೈಪೋಟಿ ನೀಡುವ ನಿರೀಕ್ಷೆಯಿದೆ. ಮುನ್ನೋಳ್ಕರ್ ಅವರು ಈ ಬಾರಿ ಲಕ್ಷ್ಮಿ ಅವರಿಂದ ಸೀಟು ವಶಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದರು. ಆದರೆ, ಚೌಗಲೆ ಉಪಸ್ಥಿತಿಯಿಂದ ಅದು ಕಠಿಣವಾಗಿ ಮಾರ್ಪಟ್ಟಿದೆ.

ಬೆಳಗಾವಿ (ಉತ್ತರ) ಕ್ಷೇತ್ರದಿಂದ ಎಂಇಎಸ್ ಟಿಕೆಟ್‌ನಲ್ಲಿ ವಕೀಲ ಅಮರ ಯಳ್ಳೂರಕರ್ ಸ್ಪರ್ಧಿಸುತ್ತಿದ್ದು, ಸ್ಥಳೀಯ ಉದ್ಯಮಿ ಮುರಳೀಧರ ಪಾಟೀಲ ಖಾನಾಪುರ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಪಕ್ಷವು ಬೆಳಗಾವಿ (ದಕ್ಷಿಣ), ಬೆಳಗಾವಿ (ಗ್ರಾಮೀಣ) ಮತ್ತು ಖಾನಾಪುರ ಎಂಬ ಮೂರು ಸ್ಥಾನಗಳ ಮೇಲೆ ಗಮನ ಕೇಂದ್ರೀಕರಿಸಿದೆ.

ಬೆಳಗಾವಿ (ಉತ್ತರ)ದಿಂದ ಮರಾಠ ನಾಯಕರಾಗಿರುವ ಅನಿಲ್ ಬೆನಕೆ ಅವರನ್ನು ಕಣಕ್ಕಿಳಿಸುವಲ್ಲಿ ಬಿಜೆಪಿ ವಿಫಲವಾಗಿದ್ದು, ಇದು ಮರಾಠ ಭಾಷಿಕ ಜನರು ಎಂಇಎಸ್ ಅನ್ನು ಬೆಂಬಲಿಸಲು ಕಾರಣವಾಗಿದೆ. ಹೀಗಾಗಿ, ಜಿಲ್ಲೆಯ ಈ ನಾಲ್ಕು ಕ್ಷೇತ್ರಗಳಲ್ಲಿ ಬಿಜಿಪಿಗೆ ಅಂದುಕೊಂಡಷ್ಟು ಸುಲಭವಾಗಿ ಪರಿಸ್ಥಿತಿ ಇಲ್ಲ. 

ಬೆಳಗಾವಿ (ಉತ್ತರ)ದಲ್ಲಿ ಬಿಜೆಪಿಯಿಂದ ಅನಿಲ್ ಬೆನಕೆ ಬದಲಿಗೆ ಬಿಜೆಪಿಯು ಪಂಚಮಸಾಲಿ ಲಿಂಗಾಯತ ರವಿ ಪಾಟೀಲ್ ಅವರನ್ನು ಕಣಕ್ಕಿಳಿಸಿದೆ.  ಎಂಇಎಸ್ ಮರಾಠಾ ಭಾಷಿಕರೂ ಆಗಿರುವ ಅಮರ ಯಲ್ಲೂರಕರ್ ಅವರನ್ನು ಕಣಕ್ಕಿಳಿಸಿದೆ. ಯಳ್ಳೂರಕರ್ ಅವರ ಪ್ರಚಾರ ವೈಖರಿ ಬಿಜೆಪಿ ವಿರುದ್ಧ ಕೇಂದ್ರೀಕೃತವಾಗಿದ್ದು, ಬಿಜೆಪಿಗೆ ಮತ ಹಾಕಿದರೆ ‘ಮತ ನಷ್ಟ’ವಾಗಲಿದೆ ಎಂದು ಸಾರ್ವಜನಿಕರನ್ನು ಹುರಿದುಂಬಿಸುತ್ತಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಆಸಿಫ್ (ರಾಜು) ಸೇಟ್ ಮಾಜಿ ಶಾಸಕ ಫಿರೋಸ್ ಸೇಠ್ ಅವರ ಸಹೋದರ. ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ಏಕೈಕ ಮುಸ್ಲಿಂ ಅಭ್ಯರ್ಥಿಯಾಗಿದ್ದಾರೆ. ಯಲ್ಲೂರಕರ್ ಮತ್ತು ರವಿ ಪಾಟೀಲ್ ನಡುವೆ ಹಿಂದುತ್ವದ ಮತಗಳ ವಿಭಜನೆಯಿಂದ, ಮುಸ್ಲಿಂ ಬೆಂಬಲ ತಮಗೆ ದೊರೆಯಲಿದೆ ಎಂದು ಆಸಿಫ್ ಸೇಟ್ ಅಚ್ಚರಿಯ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಬೆಳಗಾವಿ ದಕ್ಷಿಣದಲ್ಲಿ ಮೂರು ಬಾರಿ ಶಾಸಕರಾಗಿರುವ ಬಿಜೆಪಿ ನಾಯಕ ಅಮರ್ ಪಾಟೀಲ್‌ಗೆ ರಮಾಕಾಂತ್ ಕೊಂಡೂಸ್ಕರ್ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಕೊಂಡೂಸ್ಕರ್ ಅವರು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರೊಂದಿಗೆ ಇದ್ದರು ಮತ್ತು ಈಗ ತಮ್ಮದೇ  ಶ್ರೀರಾಮಸೇನೆ ಹಿಂದೂಸ್ತಾನವನ್ನು ಸ್ಥಾಪಿಸಿದ್ದಾರೆ. ಮರಾಠರ ಭಾವನೆಗಳೊಂದಿಗೆ ಕೊಂಡೂಸ್ಕರ್ ತಮ್ಮ ಕಠಿಣ ಹಿಂದುತ್ವದ ನಿಲುವುಗಳನ್ನು ಪ್ರದರ್ಶಿಸುತ್ತಿದ್ದಾರೆ.

ಎಂಇಎಸ್‌ನ ಹಿರಿಯ ನಾಯಕ ರಾಜು ಚೌಗಲೆ ಅವರು ಕಾಂಗ್ರೆಸ್‌ನಿಂದ ಹಾಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಎದುರಿಸುತ್ತಿದ್ದು, ಬಿಜೆಪಿ ಅಭ್ಯರ್ಥಿ ನಾಗೇಶ್ ಮನೋಲ್ಕರ್ ಈ ಕ್ಷೇತ್ರದಲ್ಲಿ ಅಷ್ಟೇನು ದೊಡ್ಡ ಸವಾಲಲ್ಲ ಎಂದೇ ಪರಿಗಣಿಸಲಾಗಿದೆ. ಆದರೆ, ಮನ್ನೋಲ್ಕರ್ ಮತ್ತು ಚೌಗಲೆ ಇಬ್ಬರೂ ಮರಾಠಾ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ವಲ್ಪಮಟ್ಟಿಗೆ ಮುನ್ನಡೆ ಸಾಧಿಸಿದ್ದಾರೆ.

ಖಾನಾಪುರದ ಎಂಇಎಸ್ ಅಭ್ಯರ್ಥಿ ಮುರಳೀಧರ ಪಾಟೀಲ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಗೆ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಅಂಜಲಿ ನಿಂಬಾಳ್ಕರ್, ಬಿಜೆಪಿಯಿಂದ ವಿಟ್ಲ ಹಲಗೇಕರ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ನಾಸೀರ್ ಭಗವಾನ್ ಸ್ಪರ್ಧಿಸಿದ್ದಾರೆ. ಈ ಪೈಕಿ ನಾಸೀರ್ ಮಾತ್ರ ಮುಸ್ಲಿಂ ಆಗಿದ್ದರೆ, ಉಳಿದ ಮೂವರು ಮರಾಠ ಹಿಂದೂಗಳು.

ಬೊಮ್ಮಾಯಿ ಸಂಪುಟದ ಪ್ರತಿಷ್ಠಿತ ಜೊಲ್ಲೆ ಕುಟುಂಬದ ಶಶಿಕಲಾ ಜೊಲ್ಲೆ ಪ್ರತಿನಿಧಿಸುತ್ತಿರುವ ನಿಪ್ಪಾಣಿ ಕ್ಷೇತ್ರದಲ್ಲಿ ಮಾಜಿ ಶಾಸಕ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಕಾಕಾಸಾಹೇಬ ಪಾಟೀಲ ಹಾಗೂ ಎನ್‌ಸಿಪಿ ಮತ್ತು ಎಂಇಎಸ್ ಬೆಂಬಲ ಪಡೆದ ಸಹಕಾರಿ ಮುಖಂಡ ಉತ್ತಮ್ ಪಾಟೀಲ ನಡುವೆ ತ್ರಿಕೋನ ಹಣಾಹಣಿ ಏರ್ಪಟ್ಟಿದೆ. ಶಶಿಕಲಾ ಜೊಲ್ಲೆ ಅವರು ತಮ್ಮ ಕುಟುಂಬದ ವರ್ಚಸ್ಸಿನಿಂದ ಗೆಲ್ಲಬಹುದಾಗಿದ್ದರೂ, ಅಲ್ಪ ಮತಗಳ ಅಂತರದಿಂದ ಗೆಲ್ಲುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com