ಕರ್ನಾಟಕ ವಿಧಾನಸಭಾ ಚುನಾವಣೆ: ಸಮೀಕ್ಷೆ ಆಧರಿಸಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ, ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ

ಗುರುವಾರ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸಿದ ನಂತರ ಮತ್ತು ಹೊಸ ಮುಖಗಳನ್ನು ಆಯ್ಕೆ ಮಾಡಿದ್ದರಿಂದ ಭಿನ್ನಾಭಿಪ್ರಾಯದ ಧ್ವನಿಗಳು ಇದೀಗ ಜೋರಾಗಿ ಕೇಳಿಸುತ್ತಿವೆ. ಪಕ್ಷದ ಪದಾಧಿಕಾರಿಗಳು ಅಸಮಾಧಾನಗೊಂಡಿದ್ದರೂ, ಕೇಂದ್ರ ಚುನಾವಣಾ ಸಮಿತಿ ಮತ್ತು ಸ್ಕ್ರೀನಿಂಗ್ ಕಮಿಟಿಯ ನೇತೃತ್ವ ವಹಿಸಿದ್ದವರು, ಖಾಸಗಿ ಏಜೆನ್ಸಿಯು ನೀಡಿದ ಸಮೀಕ್ಷೆಯ ವರದಿಯನ್ನು
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಮೈಸೂರು: ಗುರುವಾರ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸಿದ ನಂತರ ಮತ್ತು ಹೊಸ ಮುಖಗಳನ್ನು ಆಯ್ಕೆ ಮಾಡಿದ್ದರಿಂದ ಭಿನ್ನಾಭಿಪ್ರಾಯದ ಧ್ವನಿಗಳು ಇದೀಗ ಜೋರಾಗಿ ಕೇಳಿಸುತ್ತಿವೆ. ಪಕ್ಷದ ಪದಾಧಿಕಾರಿಗಳು ಅಸಮಾಧಾನಗೊಂಡಿದ್ದರೂ, ಕೇಂದ್ರ ಚುನಾವಣಾ ಸಮಿತಿ ಮತ್ತು ಸ್ಕ್ರೀನಿಂಗ್ ಕಮಿಟಿಯ ನೇತೃತ್ವ ವಹಿಸಿದ್ದವರು, ಖಾಸಗಿ ಏಜೆನ್ಸಿಯು ನೀಡಿದ ಸಮೀಕ್ಷೆಯ ವರದಿಯನ್ನು ಆಧರಿಸಿ ಪಕ್ಷ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್ ನಾಯಕರು, ಸಮೀಕ್ಷೆಯ ಪ್ರಕಾರ ರಾಜ್ಯದ 224 ಕ್ಷೇತ್ರಗಳಲ್ಲಿ 140 ಸ್ಥಾನಗಳನ್ನು ಕಾಂಗ್ರೆಸ್‌ ಗೆಲ್ಲಲಿದೆ ಎಂದು ಹೇಳಿದರು. ಪಕ್ಷದ ನಾಯಕರು ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಆಂತರಿಕ ಸಮೀಕ್ಷೆಯನ್ನು ಮಾತ್ರ ಮಾನದಂಡವಾಗಿ ಬಳಸುವುದು ಸಾಮಾನ್ಯ. ಆದಾಗ್ಯೂ, ಪಕ್ಷದ ಕೆಲವು ಸದಸ್ಯರು ಈ ವಿಧಾನವು ಪಕ್ಷಕ್ಕೆ ಹಿನ್ನಡೆಯಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅವರು ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದನ್ನು ತಡೆಯಲು ಈ ಸಮೀಕ್ಷೆಯನ್ನು ನೆಪವಾಗಿಟ್ಟುಕೊಳ್ಳಲಾಗಿದೆ ಎಂದು ಕೆಲವು ಕಾರ್ಯಕರ್ತರು ಆರೋಪಿಸಿದ್ದಾರೆ.

ವರದಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ ಆಕಾಂಕ್ಷಿಗಳು, ಪಕ್ಷವು ಈ ನೆಲದ ಜನರ ನಾಡಿಮಿಡಿತವನ್ನು ಆಧರಿಸಬೇಕಿತ್ತು. ಪಕ್ಷದ ಸ್ಥಳೀಯ ಕಾರ್ಯಕರ್ತರು ನೀಡುವ ಅಭಿಪ್ರಾಯಗಳಿಗೆ ಸಮಾನ ತೂಕ ನೀಡಬೇಕು ಎಂದು ಅವರು ಹೇಳಿದರು.

ಕೋಲಾರದಿಂದ ಪ್ರಬಲ ಪ್ರತಿರೋಧ ವ್ಯಕ್ತವಾಗಬಹುದು, ಹೀಗಾಗಿ ಸಿದ್ದರಾಮಯ್ಯ ಸೋಲಬಹುದು ಎಂದು ಸಮೀಕ್ಷೆಯೊಂದು ಹೇಳಿದೆ. ಆದರೆ, ಸಿದ್ದರಾಮಯ್ಯ 30 ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲಬಹುದು ಎಂದು ಸ್ಥಳೀಯ ಮುಖಂಡರು ಹೇಳಿದ್ದಾರೆ.

ಹೆಸರುಹೇಳಲಿಚ್ಛಿಸದ ಕಾಂಗ್ರೆಸ್ ಶಾಸಕ ಮತ್ತು ಇತರ ಇಬ್ಬರು ಅಭ್ಯರ್ಥಿಗಳು, ಪಕ್ಷವು ಗ್ರೌಂಡ್ ರಿಪೋರ್ಟ್‌ನಿಂದ ಹೋಗಬೇಕೇ ಹೊರತು ಸಮೀಕ್ಷೆಯ ವರದಿಯಿಂದಲ್ಲ. ಏಕೆಂದರೆ, ಚುನಾವಣೆ ಪೂರ್ವದಲ್ಲಿ ಜನರ ಮನಸ್ಥಿತಿ ಮತ್ತು ಪ್ರವೃತ್ತಿಗಳು ಬದಲಾಗುತ್ತಲೇ ಇರುತ್ತವೆ ಎಂದಿದ್ದಾರೆ.

ಆಂತರಿಕ ಸಮೀಕ್ಷೆಯ ವರದಿಯೇ ಮಾನದಂಡವಾಗಿದ್ದರೆ, ಚಿತ್ರದುರ್ಗ, ಮಂಡ್ಯ, ಗೋಕಾಕ, ಕಡೂರು ಮತ್ತು ಕೆಆರ್‌ಪೇಟೆಯಲ್ಲಿ ಹೊಸಬರು ಎರಡನೇ ಪಟ್ಟಿಯಲ್ಲಿ ಹೇಗೆ ಕಾಣಿಸಿಕೊಂಡಿದ್ದಾರೆ. ಈಗ, ಅನೇಕ ಬಂಡಾಯಗಾರರು ಸ್ವತಂತ್ರವಾಗಿ ಸ್ಪರ್ಧಿಸಬಹುದು. ಇತರರು ಜೆಡಿಎಸ್ ಬಾಗಿಲು ತಟ್ಟಬಹುದು ಎಂದು ಅವರು ಹೇಳಿದರು. 

ಕಳೆದ ವಾರ ಪಕ್ಷಕ್ಕೆ ಸೇರ್ಪಡೆಗೊಂಡ ನಾಯಕರ ಕುರಿತು ಸಮೀಕ್ಷೆ ಒಲವು ತೋರಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಸ್ಕ್ರೀನಿಂಗ್‌ ಕಮಿಟಿ ಸದಸ್ಯರೊಬ್ಬರ ಗಮನಕ್ಕೆ ತಂದ ಬಳಿಕವೂ ಕೆಆರ್‌ಪೇಟೆಯಲ್ಲಿ ಟಿಕೆಟ್‌ ನೀಡಿದ್ದು ಏಕೆ ಎಂದು ಪ್ರಶ್ನಿಸಿದರು.

ಮಂಡ್ಯದ ಅಭ್ಯರ್ಥಿ ಬಗ್ಗೆಯೂ ಪಕ್ಷದ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಕೆಲವು ಕ್ಷೇತ್ರಗಳಿಗೆ ಆಯ್ಕೆಯಾಗಿರುವ ಕೆಲವು ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಗೆಲ್ಲುವ ಅವಕಾಶವಿಲ್ಲ ಎಂದು ಪಕ್ಷದ ಒಳಗಿನವರು ಹೇಳಿದ್ದಾರೆ. ಕೇಂದ್ರ ಚುನಾವಣಾ ಸಮಿತಿಯು ಗಂಭೀರ ಟಿಕೆಟ್ ಆಕಾಂಕ್ಷಿಗಳನ್ನು ನಿರ್ಲಕ್ಷಿಸುವ ಬದಲು, ಪ್ರಬಲ ಸ್ಪರ್ಧಿಗಳೊಂದಿಗೆ ರಾಜಧಾನಿಯಲ್ಲಿ ಬಿಜೆಪಿ ಭದ್ರಕೋಟೆಗಳಲ್ಲಿ ಹೋರಾಡಬೇಕಿತ್ತು ಎಂದು ಅವರು ಸೂಚಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com