ಬಿಜೆಪಿಯ ಎನ್.ಮಹೇಶ್ ಸೋಲಿಸುವ ಗುರಿ, ನಾಮಪತ್ರ ಹಿಂಪಡೆದ ಕೊಳ್ಳೆಗಾಲ ಬಿಎಸ್ ಪಿ ಅಭ್ಯರ್ಥಿ ರೇಖಾ, ಕಾಂಗ್ರೆಸ್ ಗೆ ಬೆಂಬಲ ಘೋಷಣೆ
ಚಾಮರಾಜನಗರ: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಇಂದು ಕೊಳ್ಳೆಗಾಲ ಬಿಎಸ್ ಪಿ ಅಭ್ಯರ್ಥಿ ರೇಖಾ ಅವರು ತಮ್ಮ ನಾಪಮತ್ರ ವಾಪಸ್ ಪಡೆದಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ರೇಖಾ ನಾಮಪತ್ರ ವಾಪಸ್ ಪಡೆದು ಅಚ್ಚರಿ ಮೂಡಿಸಿದ್ದಾರೆ. ದಿಢೀರ್ ಬೆಳವಣಿಗೆಯಲ್ಲಿ ರೇಖಾ ಸೋಮವಾರ ನಾಮಪತ್ರ ವಾಪಸ್ ಪಡೆದಿದ್ದು, ‘ಹೈಕಮಾಂಡ್ ಸೂಚನೆಯಂತೆ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದಿದ್ದಾರೆ.
ಎನ್.ಮಹೇಶ್ ಸೋಲಿಸುವ ಗುರಿ
ಪಕ್ಷಕ್ಕೆ ಮೋಸ ಮಾಡಿರುವ ಎನ್.ಮಹೇಶ್ ಅವರನ್ನು ಸೋಲಿಸುವ ಗುರಿಯೊಂದಿಗೆ ನಿರ್ಧಾರ ಕೈಗೊಳ್ಳಲಾಗಿದೆ. ಬಿಎಸ್ಪಿಯು ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಅವರನ್ನು ಬೆಂಬಲಿಸಲಿದೆ’ ಎಂದು ಬಿಎಸ್ಪಿ ಮುಖಂಡರು ಮಾಹಿತಿ ನೀಡಿದ್ದಾರೆ.
ಬಿಎಸ್ಪಿ ಬಾಹುಳ್ಯವಿರುವ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಎನ್.ಮಹೇಶ್ ಗೆಲ್ಲುವುದರೊಂದಿಗೆ ವಿಧಾನಸಭೆಯಲ್ಲಿ ಪಕ್ಷ ಖಾತೆ ತೆರೆದಿತ್ತು. ಜೆಡಿಎಸ್– ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾದ ಬಳಿಕ ಎನ್.ಮಹೇಶ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಬಳಿಕ ಅವರು ಬಿಜೆಪಿ ಸೇರಿದ್ದರು. ಈ ಬಾರಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಎನ್.ಮಹೇಶ್ ದೂರವಾದ ಬಳಿಕ ಕ್ಷೇತ್ರದಲ್ಲಿ ಪಕ್ಷದ ಹಿಡಿತ ಕೊಂಚ ಕಡಿಮೆಯಾದಂತೆ ಕಂಡು ಬಂದರೂ, ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿಯೇ ಇದ್ದಾರೆ. ಪಕ್ಷದ ರಾಜ್ಯ ಕಾರ್ಯದರ್ಶಿ ಕಮಲ್ ನಾಗರಾಜು ಹಾಗೂ ಅವರ ಪತ್ನಿ ರೇಖಾ ನಾಮಪತ್ರ ಸಲ್ಲಿಸಿದ್ದರು. ಕಮಲ್ ನಾಮಪತ್ರ ತಿರಸ್ಕೃತವಾಗಿದ್ದರೆ. ರೇಖಾ ಉಮೇದುವಾರಿಕೆ ಕ್ರಮಬದ್ಧವಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ