'ಸ್ಯಾಂಟ್ರೋ' ರವಿ ಪ್ರಕರಣ: ಗೃಹ ಸಚಿವ ಆರಗ ರಾಜೀನಾಮೆಗೆ ಕಿಮ್ಮನೆ ರತ್ನಾಕರ್ ಆಗ್ರಹ

ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿರುದ್ಧ ಸರಣಿ ಆರೋಪಗಳನ್ನು ಮಾಡಿರುವ ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ್ ಅವರು, ಸ್ಯಾಂಟ್ರೋ ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಕಿಮ್ಮನೆ ರತ್ನಾಕರ್
ಕಿಮ್ಮನೆ ರತ್ನಾಕರ್

ಶಿವಮೊಗ್ಗ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿರುದ್ಧ ಸರಣಿ ಆರೋಪಗಳನ್ನು ಮಾಡಿರುವ ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ್ ಅವರು, ಸ್ಯಾಂಟ್ರೋ ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಎನ್ಐಎ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2015ರಲ್ಲಿ ಮಾಲೀಕರ ಬಳಿ ರೂ. 10 ಲಕ್ಷ ಠೇವಣಿ ಇಟ್ಟು ಕಟ್ಟಡವನ್ನು ಬಾಡಿಗೆ ಪಡೆದುಕೊಂಡಿದ್ದೇವೆಂದು ಅಧಿಕಾರಿಗಳಿಗೆ ತಿಳಿಸಿದ್ದೇವೆ. ಡಿಸೆಂಬರ್ 2022 ರವರೆಗೆ ನಿಯಮಿತವಾಗಿ 1,000 ಬಾಡಿಗೆ ನೀಡಿದ್ದೇವೆ. ಮಾಲೀಕರು ಠೇವಣಿ ಮೊತ್ತವನ್ನು ಹಿಂದಿರುಗಿಸಿದ ನಂತರ ಕಟ್ಟಡವನ್ನು ಖಾಲಿ ಮಾಡುತ್ತೇವೆ. ನಮ್ಮ ನಡುವೆ ಮಾಲೀಕರು ಮತ್ತು ಬಾಡಿಗೆದಾರರ ಸಂಬಂಧ ಮಾತ್ರ ಇದೆ ಎಂದು ಹೇಳಿದ್ದಾರೆ.

ಕೆಲ ವಿದ್ಯುನ್ಮಾನ ಮಾಧ್ಯಮಗಳು ತಮ್ಮ ಮನೆ ಮೇಲೆ ದಾಳಿ ನಡೆದಿದೆ ಎಂದು ಸುಳ್ಳು ಹೇಳಿಕೆ ನೀಡಿದ್ದು, ಇದರ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿಯವರು ರಾಜಕೀಯ ಮಾಡಲು ಪ್ರಯತ್ನಿಸುತ್ತಿದ್ದಾರೆ. “ಕೆಲವು ದೂರದರ್ಶನ ಚಾನೆಲ್‌ಗಳು ನನ್ನನ್ನು ಕುಕ್ಕರ್ ಹೊತ್ತೊಯ್ಯುತ್ತಿರುವಂತೆ ಬಿಂಬಿಸಿದವು. ನನ್ನ ಫೋಟೋ ಜೊತೆ ಶಾರಿಕ್ ಚಿತ್ರದ ಕ್ಲಿಪ್ಪಿಂಗ್ಸ್ ಇತ್ತು. ನಾನು ಯಾವತ್ತೂ ತೀರ್ಥಹಳ್ಳಿಯಿಂದ ಓಡಿ ಹೋಗಿಲ್ಲ, ಕಿಮ್ಮನೆ ಏನೆಂದು ಜನರಿಗೆ ಗೊತ್ತಿದೆ. ಬಿಜೆಪಿಯವರು ನಾಟಕವಾಡಲು ಯತ್ನಿಸುತ್ತಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಸ್ಯಾಂಟ್ರೋ ರವಿ ವಿಚಾರದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ನಂಬರ್ ಒನ್ ಆರೋಪಿಯಾಗಿದ್ದಾರೆಂದು ಕಿಮ್ಮನೆ ರತ್ನಾಕರ್ ಅವರು ಆರೋಪಿಸಿದ್ದಾರೆ.

ನಿಯೋಜನೆಗೊಳ್ಳಬೇಕಿರುವ ಅಧಿಕಾರಿಗಳ ಪಟ್ಟಿ ಸ್ಯಾಂಟ್ರೋ ರವಿ ಬಳಿ ಇದೆ. ಅದಕ್ಕೆ ಅನುಗುಣವಾಗಿ ಪೋಸ್ಟಿಂಗ್ ಮಾಡಲಾಗುತ್ತದೆ. ಈ ಪ್ರಕರಣದಲ್ಲಿ ಆರಗ ಜ್ಞಾನೇಂದ್ರ ಅವರನ್ನು ಬಂಧಿಸಬೇಕು, ಪಿಎಸ್ಐ ಹಗರಣದಲ್ಲಿ ಅವರು ಕೂಡ ಆರೋಪಿಯಾಗಿದ್ದರು, ಫೆಬ್ರವರಿ ಮೊದಲು ಆರಗ ರಾಜೀನಾಮೆ ನೀಡಲು ವಿಫಲವಾದರೆ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದ್ದಾರೆ.

ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕಿನ ಎಲ್ಲಾ ಪಿಡಬ್ಲ್ಯುಡಿ ಕಾಮಗಾರಿಗಳನ್ನು ಜ್ಞಾನೇಂದ್ರ ಅವರ ಸಂಬಂಧಿ ಸಿ ವಿ ಚಂದ್ರಶೇಖರ್ ಅವರಿಗೆ ವಹಿಸಲಾಗಿದೆ. ಸಚಿವರ ಪುತ್ರ ಲೇಔಟ್‌ಗಳನ್ನು ಮಾಡುತ್ತಿದ್ದು, ಅದಕ್ಕಾಗಿ ಸರ್ಕಾರಿ ಜಮೀನುಗಳನ್ನು ಖಾಸಗಿಯಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com