ಸಂಪುಟ ಪುನರ್ರಚನೆ: ನನಸಾಗದೇ ಉಳಿದ ಕನಸು; ಮಂತ್ರಿ ಸ್ಥಾನ ಆಕಾಂಕ್ಷಿಗಳ ಮನವೊಲಿಕೆಗೆ ಬಿಜೆಪಿ ಕಸರತ್ತು

ಚುನಾವಣೆ ಹೊಸ್ತಿಲಿನಲ್ಲಿ ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಆಡಳಿತಾರೂಢ ಬಿಜೆಪಿ ಪಕ್ಷದ ಒಂದು ವಿಭಾಗದೊಳಗಿನ ಸಂಭಾವ್ಯ ಅಸಮಾಧಾನವನ್ನು ಚಾತುರ್ಯದಿಂದ ಬದಿಗೊತ್ತುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಚುನಾವಣೆ ಹೊಸ್ತಿಲಿನಲ್ಲಿ ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಆಡಳಿತಾರೂಢ ಬಿಜೆಪಿ ಪಕ್ಷದ ಒಂದು ವಿಭಾಗದೊಳಗಿನ ಸಂಭಾವ್ಯ ಅಸಮಾಧಾನವನ್ನು ಚಾತುರ್ಯದಿಂದ ಬದಿಗೊತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲದಿದ್ದರೆ, ವಿಧಾನಸಭಾ ಚುನಾವಣೆಯ ಈ ಹೊತ್ತಿನಲ್ಲಿ, ಚುನಾವಣಾ ಗೆಲುವಿಗಾಗಿ ಕಾರ್ಯತಂತ್ರ ರೂಪಿಸುವ ಬದಲು ಪಕ್ಷದಲ್ಲಿ ಇದು ಒಂದು ರೀತಿಯ ಬೇಗುದಿಗೆ ಎಡೆಮಾಡಿಕೊಡುತ್ತಿತ್ತು. 

ಬೊಮ್ಮಾಯಿ ನೇತೃತ್ವದ ಸರ್ಕಾರವು ಮೇ ತಿಂಗಳೊಳಗೆ ಆರು ಖಾಲಿ ಸ್ಥಾನಗಳೊಂದಿಗೆ ಚುನಾವಣೆಗೆ ಹೋಗುತ್ತಿದ್ದು, ಮುಂದಿನ ಕೆಲವು ದಿನಗಳಲ್ಲಿ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ.

ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಸಿಎಂ ಕುರ್ಚಿ ಏರಿದ ಬಸವರಾಜ ಬೊಮ್ಮಾಯಿಯವರು ಆಗಸ್ಟ್ 3, 2021 ರಂದು 29 ಸಚಿವರನ್ನು ಸೇರ್ಪಡೆಗೊಳಿಸುವ ಮೂಲಕ ತಮ್ಮ ಹೊಸ ಸಚಿವಾಲಯವನ್ನು ವಿಸ್ತರಿಸಿದರು. ಸಚಿವ ಸಂಪುಟದಲ್ಲಿ ಮಂತ್ರಿಗಳ ಸಂಖ್ಯೆ 30ಕ್ಕೆ ಏರಿತು.

ಆದರೆ, ಗುತ್ತಿಗೆದಾರರೊಬ್ಬರ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಡಿ ಸಚಿವ ಕೆ ಎಸ್ ಈಶ್ವರಪ್ಪ ರಾಜೀನಾಮೆ ನೀಡಿದ್ದರಿಂದ ಹಾಗೂ ಸಚಿವ ಉಮೇಶ್ ಕತ್ತಿ ಅವರ ಸಾವಿನಿಂದಾಗಿ ಹಾಲಿ ಸಚಿವ ಸಂಪುಟದ ಬಲ 28ಕ್ಕೆ ಇಳಿದಿದೆ. 

ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿದ್ದು, ಪಕ್ಷದ ಹಳೆಯ ನಾಯಕರು, ನಿಷ್ಠಾವಂತರು, ಸ್ಥಳೀಯರು ಮತ್ತು ವಲಸಿಗರ ನಡುವೆ ಸಮತೋಲನ ಕಾಯ್ದುಕೊಳ್ಳುವ ತಂತ್ರವನ್ನು ಬೊಮ್ಮಾಯಿಯವರು ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾದ ಜೆಡಿಎಸ್-ಕಾಂಗ್ರೆಸ್ ನ ಹಲವು ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಸೇರಿ ಕಮಲ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಹಾಯ ಮಾಡಿದರು. 

ಸಿಎಂ ಬೊಮ್ಮಾಯಿಯವರು ಸಂಪುಟ ವಿಸ್ತರಣೆಯನ್ನು ತಳ್ಳಿಹಾಕುತ್ತಿರಲಿಲ್ಲ. ಆದರೆ ಸಮಯ ದೂಡುತ್ತಾ ಬಂದರು. ಪಕ್ಷದ ಕೇಂದ್ರ ನಾಯಕತ್ವವು ಒಪ್ಪಿಗೆ ನೀಡಿದ ನಂತರ ಮಾಡುವುದಾಗಿ ಯಾವಾಗಲೂ ಹೇಳುತ್ತಿದ್ದರು, ಆದರೆ ಪಕ್ಷದ ಕರ್ನಾಟಕ ಉಸ್ತುವಾರಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸೇರಿದಂತೆ ಹೈಕಮಾಂಡ್ ನಿಲುವಿಗೆ ಅಂಟಿಕೊಂಡಿದ್ದರು,

ಸಿಎಂ ದೆಹಲಿಗೆ ಪ್ರಯಾಣಿಸಿದಾಗಲೆಲ್ಲಾ ಸಚಿವ ಸಂಪುಟ ವಿಸ್ತರಣೆಯ ಊಹಾಪೋಹಗಳು ಹುಟ್ಟಿಕೊಂಡವು. ಬೊಮ್ಮಾಯಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅಥವಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚಿಸುವುದಾಗಿ ಹೇಳಿಕೊಂಡೇ ಬಂದರು ಹೊರತು ಯಾವುದೇ ಸಕಾರಾತ್ಮಕ ಸುದ್ದಿಯೊಂದಿಗೆ ಹಿಂತಿರುಗಲಿಲ್ಲ. 

ಒಂದೆರಡು ನಿದರ್ಶನಗಳಲ್ಲಿ, ವಿಸ್ತರಣೆಯು ರಿಯಾಲಿಟಿ ಆಗಿ ಹೊರಹೊಮ್ಮುವ ಲಕ್ಷಣಗಳು ಕಂಡುಬಂದವು, ಇದರ ಪರಿಣಾಮವಾಗಿ ಕೆಲವು ಆಕಾಂಕ್ಷಿಗಳು ಮಂತ್ರಿ ಸ್ಥಾನಕ್ಕಾಗಿ ದೆಹಲಿಗೆ ಹೋಗಿ ಮೊಕ್ಕಾಂ ಹೂಡಿದ್ದರು. 

ಉತ್ತರಾಖಂಡ ಮತ್ತು ಗುಜರಾತ್‌ನಲ್ಲಿ ಅಸೆಂಬ್ಲಿ ಚುನಾವಣೆಗೆ ಮುನ್ನ ನಡೆದ ರಾಜಕೀಯ ಬೆಳವಣಿಗೆಗಳ ನಂತರ, ಸಚಿವ ಸಂಪುಟ ವಿಸ್ತರಣೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಬಿಜೆಪಿ ವಲಯಗಳಲ್ಲಿ ಹೇಳುತ್ತಿದ್ದರು. ಸಚಿವ ಸ್ಥಾನದ ಆಕಾಂಕ್ಷಿಗಳು ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಸಂಬಂಧಿಸಿದ ನಿರ್ಧಾರದ ಬಗ್ಗೆ ಭರವಸೆಯಲ್ಲಿದ್ದರು. 

ಈಶ್ವರಪ್ಪ ಅವರ ಬೆಂಬಲಕ್ಕೆ ಕೆಲವು ಧಾರ್ಮಿಕ ವ್ಯಕ್ತಿಗಳು ಬಂದಿದ್ದರು, ಆದರೆ, ಪಕ್ಷ ಮತ್ತು ಸಿಎಂ ಎಡವಿದ್ದಂತೆ, ಮಾಜಿ ಸಚಿವರೇ ತಾವು ಇನ್ನು ಮುಂದೆ ಆಕಾಂಕ್ಷಿಯಲ್ಲ ಎಂದು ಘೋಷಿಸಿದರು.

ಹಿಂದಿನ ಯಡಿಯೂರಪ್ಪ ಸಂಪುಟಕ್ಕೆ ರಾಜೀನಾಮೆ ನೀಡಿದ್ದ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರ ಒತ್ತಡದ ತಂತ್ರಗಾರಿಕೆಯನ್ನು ಪಕ್ಷವು ಇದೇ ಮಾದರಿಯಲ್ಲಿ ನಿಭಾಯಿಸಿದೆ.

ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನರ್ರಚನೆಗೆ ಅನುಮತಿ ನೀಡದ ಬಿಜೆಪಿ ನಾಯಕತ್ವದ ಕ್ರಮವನ್ನು "ಲೆಕ್ಕಾಚಾರ" ಎಂದು ಕರೆದ ರಾಜಕೀಯ ವೀಕ್ಷಕರು, ಗುಜರಾತ್ ಮತ್ತು ಉತ್ತರಾಖಂಡಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಪಕ್ಷದ ರಚನೆ ಮತ್ತು ಅದರ ಸಾಮರ್ಥ್ಯದ ಸ್ವರೂಪ ವಿಭಿನ್ನವಾಗಿದೆ ಎಂದು ಹೇಳಿದರು. 

ಏತನ್ಮಧ್ಯೆ, ಬಿಜೆಪಿಯ ಪ್ರಬಲ ನಾಯಕ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರನ್ನು ಸಚಿವರನ್ನಾಗಿ ಮಾಡುವುದನ್ನು ತಪ್ಪಿಸಲು ಬೊಮ್ಮಾಯಿ ಸಂಪುಟ ವಿಸ್ತರಣೆ ಮಾಡದಿರುವ ಹಿಂದಿನ ರಹಸ್ಯ ಎಂದು ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದ್ದರು.

ಸಂಪುಟ ಸ್ತರಣೆಯಾದರೆ ಯಡಿಯೂರಪ್ಪನವರ ಮಗನನ್ನು ಸಚಿವರನ್ನಾಗಿ ಮಾಡಬೇಕಾಗಿರುವುದರಿಂದ ಮುಖ್ಯಮಂತ್ರಿಗಳು ಸಚಿವ ಸಂಪುಟ ವಿಸ್ತರಣೆ ಮಾಡದೆ ಆರು ಹುದ್ದೆಗಳನ್ನು ಖಾಲಿ ಇಟ್ಟುಕೊಂಡು ಒಂದೂವರೆ ವರ್ಷ ಕಳೆದಿದೆ ಎಂದು ಟೀಕಿಸಿದ್ದರು. 

ಬೊಮ್ಮಾಯಿ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR), ಬೆಂಗಳೂರು ನಗರಾಭಿವೃದ್ಧಿ ಮತ್ತು ಹಣಕಾಸು ಸೇರಿದಂತೆ ಸುಮಾರು ಎಂಟು ಖಾತೆಗಳ ಉಸ್ತುವಾರಿ ವಹಿಸಿರುವುದರಿಂದ ಬಹುತೇಕ ನಾಲ್ಕನೇ ಒಂದು ಭಾಗದಷ್ಟು ಖಾತೆಗಳು ಮುಖ್ಯಮಂತ್ರಿಯವರ ಬಳಿ ಇವೆ.

ಬೊಮ್ಮಾಯಿ ಅವರ ತಂದೆ ಮತ್ತು ಮಾಜಿ ಸಿಎಂ ಎಸ್ ಆರ್ ಬೊಮ್ಮಾಯಿ ನೇತೃತ್ವದ ಸರ್ಕಾರ (1988-89) ಸಂಪುಟ ವಿಸ್ತರಣೆಯ ಎರಡು ವಾರಗಳ ನಂತರ ಪಕ್ಷಾಂತರದಿಂದಾಗಿ ಪತನಗೊಂಡಿತ್ತು. ಈ ಅಂಶ ಬಸವರಾಜ ಬೊಮ್ಮಾಯಿ ಅವರ ಮನಸ್ಸಿನಲ್ಲಿದ್ದು, ಕಸರತ್ತು ನಡೆಸುವಲ್ಲಿ ಹೆಚ್ಚು ಜಾಗರೂಕರಾಗುವಂತೆ ಮಾಡಿದೆ ಎಂದು ಪಕ್ಷದ ಮುಖಂಡರೊಬ್ಬರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com