ವಿರೋಧ ಪಕ್ಷದ ನಾಯಕ ಯಾರು?; ಕರ್ನಾಟಕದಲ್ಲಿ ಬಿಜೆಪಿಯನ್ನು ಕಾಡುತ್ತಿದೆ ಇದೊಂದು ಪ್ರಶ್ನೆ!

ಮೂರು ದಿನಗಳ ವಿಧಾನಸಭೆ ಅಧಿವೇಶನ ಸೋಮವಾರ ಆರಂಭವಾದಾಗಲೂ ವಿರೋಧ ಪಕ್ಷದ ನಾಯಕ ಯಾರು ಮತ್ತು ಏಕೆ ವಿಳಂಬವಾಯಿತು ಎಂಬ ನಿರ್ಣಾಯಕ ಪ್ರಶ್ನೆಗಳು ಬಿಜೆಪಿ ಸುತ್ತ ಸುಳಿದಾಡುತ್ತಲೇ ಇದ್ದವು.
ಕರ್ನಾಟಕ ವಿಧಾನಸಭೆಯ ಮೊದಲ ದಿನದ ಅಧಿವೇಶನದಲ್ಲಿ ಶಾಸಕರೊಂದಿಗೆ ಸಿದ್ದರಾಮಯ್ಯ.
ಕರ್ನಾಟಕ ವಿಧಾನಸಭೆಯ ಮೊದಲ ದಿನದ ಅಧಿವೇಶನದಲ್ಲಿ ಶಾಸಕರೊಂದಿಗೆ ಸಿದ್ದರಾಮಯ್ಯ.

ಬೆಂಗಳೂರು: ಮೂರು ದಿನಗಳ ವಿಧಾನಸಭೆ ಅಧಿವೇಶನ ಸೋಮವಾರ ಆರಂಭವಾದಾಗಲೂ ವಿರೋಧ ಪಕ್ಷದ ನಾಯಕ ಯಾರು ಮತ್ತು ಏಕೆ ವಿಳಂಬವಾಯಿತು ಎಂಬ ನಿರ್ಣಾಯಕ ಪ್ರಶ್ನೆಗಳು ಬಿಜೆಪಿ ಸುತ್ತ ಸುಳಿದಾಡುತ್ತಲೇ ಇದ್ದವು.

ಹೆಸರು ಹೇಳಲಿಚ್ಛಿಸದ ಬಿಜೆಪಿಯ ಹಿರಿಯ ನಾಯಕರೊಬ್ಬರು, ಮೊದಲ ಅಧಿವೇಶನವು ಕೇವಲ ಪ್ರಮಾಣವಚನ ಸ್ವೀಕಾರಕ್ಕಾಗಿ ನಡೆಯುತ್ತಿದೆ. ಹೀಗಾಗಿ ವಿರೋಧ ಪಕ್ಷವು ಆತುರಪಡುವುದಿಲ್ಲ ಎಂದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿರೋಧ ಪಕ್ಷದ ನಾಯಕರಾಗುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ನಿರ್ಧಾರವನ್ನು ಪಕ್ಷದ ಉನ್ನತ ನಾಯಕತ್ವಕ್ಕೆ ಬಿಡಲಾಗಿದೆ. ಚುನಾವಣೆ ಸೋಲಿನ ಕುರಿತು ಭಾನುವಾರ ಬಿಜೆಪಿ ಆತ್ಮಾವಲೋಕನ ನಡೆಸಿದ್ದರೂ, ಪ್ರತಿಪಕ್ಷ ನಾಯಕನ ವಿಚಾರ ಚರ್ಚೆಯಾಗಲಿಲ್ಲ ಎಂದು ತಿಳಿಸಿದ್ದಾರೆ.

ಬೊಮ್ಮಾಯಿ ಅವರನ್ನು ಪ್ರಮುಖ ಲಿಂಗಾಯತ ನಾಯಕನನ್ನಾಗಿ ಬಿಂಬಿಸಲು ಮತ್ತು ಒಕ್ಕಲಿಗರನ್ನು ಬಹುಶಃ ಶೋಭಾ ಕರಂದ್ಲಾಜೆ, ಡಾ. ಸಿಎನ್ ಅಶ್ವತ್ಥ್ ನಾರಾಯಣ ಅಥವಾ ಸಿಟಿ ರವಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸುವ ಆಲೋಚನೆ ಇದೆ ಎಂದು ಮೂಲವೊಂದು ತಿಳಿಸಿದೆ.

ಸಾಮಾನ್ಯವಾಗಿ ಒಕ್ಕಲಿಗ ಮತಗಳಲ್ಲಿ ಸಿಂಹಪಾಲು ಪಡೆಯುವ ಜೆಡಿಎಸ್‌ನಿಂದ ಖಾಲಿ ಉಳಿದಿರುವ ಜಾಗವನ್ನು ತುಂಬಲು ಪಕ್ಷಕ್ಕೆ ಸಹಾಯ ಮಾಡಲು ಒಕ್ಕಲಿಗ ನಾಯಕನನ್ನು ರೂಪಿಸುವ ಆಲೋಚನೆ ಇದೆ. ಈ ಬಾರಿ, ಸುಮಾರು ಶೇ 5 ರಷ್ಟು ಒಕ್ಕಲಿಗ ಮತಗಳು ಕಾಂಗ್ರೆಸ್‌ಗೆ ಬದಲಾಗಿವೆ. ಇದುವೇ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಬಹುಮತ ಸಾಧಿಸಲು ಸಹಾಯ ಮಾಡಿದೆ ಎಂದು ಹೇಳಲಾಗುತ್ತಿದೆ. ಜೆಡಿಎಸ್ ಮತಗಳಿಕೆಯಲ್ಲಿ ಕುಗ್ಗುತ್ತಿರುವುದನ್ನು ಬಿಜೆಪಿ ತೀವ್ರವಾಗಿ ಗಮನಿಸುತ್ತಿದ್ದು, ಅಲ್ಲಿ ಅವಕಾಶವನ್ನು ಹುಡುಕುತ್ತಿದೆ.

ಬೊಮ್ಮಾಯಿ ಅವರು ಉತ್ತಮ ಆಡಳಿತಗಾರ ಮತ್ತು ಸಮತೋಲಿತ ಮುಖ್ಯಮಂತ್ರಿ ಎಂದು ಮೆಚ್ಚುಗೆ ಪಡೆದರೆ, ಕೆಲವು ಕಟ್ಟರ್ ಹಿಂದುತ್ವದ ನಾಯಕರು, ಬೊಮ್ಮಾಯಿ ಅವರು ಸಾಕಷ್ಟು ಬಲಿಷ್ಠ ನಾಯಕರಲ್ಲ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರಂತಹ ಅಬ್ಬರದ ಹಿಂದುತ್ವ ಸಿದ್ಧಾಂತ ಹೊಂದಿರುವ ನಾಯಕರನ್ನು ಲಿಂಗಾಯತ ಮುಖವಾಗಿ ಬಿಂಬಿಸುವಂತೆ ಸಲಹೆ ನೀಡಿದ್ದಾರೆ. ಆದರೆ, ಇನ್ನೂ ಕೆಲವರು ಮುಖ್ಯಮಂತ್ರಿಯಾಗಿ ಅನುಭವ ಹೊಂದಿರುವ ಬೊಮ್ಮಾಯಿ ಅವರು ಗಟ್ಟಿಯಾಗಿ ಮಾತನಾಡುವ ನಾಯಕನಿಗಿಂತ ಹೆಚ್ಚು ಪ್ರಬುದ್ಧ ಮತ್ತು ವಿಶ್ವಾಸಾರ್ಹರು ಎಂದು ಹೇಳಿದ್ದಾರೆ.

ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಮಾಜಿ ಸಚಿವರಾದ ಮುರುಗೇಶ್ ನಿರಾಣಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರಿಂದ ಬೊಮ್ಮಾಯಿ ಪೈಪೋಟಿ ಎದುರಿಸಬಹುದಿತ್ತು. ಆದರೆ, ಅವರಿಬ್ಬರೂ ಚುನಾವಣೆಯಲ್ಲಿ ಸೋತಿದ್ದಾರೆ. ಪಕ್ಷವು ಮಾಜಿ ಸಚಿವ ಡಾ.ಕೆ. ಸುಧಾಕರ್ ಅವರನ್ನು ಒಕ್ಕಲಿಗ ಸ್ಥಾನಕ್ಕೆ ಪರಿಗಣಿಸಿತ್ತು. ಆದರೆ, ಅವರೂ ಸಹ ಸೋಲನ್ನು ಅನುಭವಿಸಿದರು. ಆದರೆ, ಪಕ್ಷವು ಲಿಂಗಾಯತ ಮತ್ತು ಒಕ್ಕಲಿಗ ಮತಗಳಿಂದ ದೂರ ಸರಿಯಲು ಮತ್ತು ಹಿಂದುತ್ವದ ಪರವಾದ ಅಜೆಂಡಾವನ್ನು ಪ್ರಚಾರ ಮಾಡಲು ಪ್ರಯತ್ನಿಸುತ್ತಿರುವುದರಿಂದ, ಹೈಕಮಾಂಡ್ ಕೇಸರಿ ಪರಿಮಳವನ್ನು ಹೊಂದಿರುವ ನಾಯಕನನ್ನು ಹುಡುಕಬಹುದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com