ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ನಾನು ಸೇರಿ 4 ರಿಂದ 5 ಆಕಾಂಕ್ಷಿಗಳು ಸ್ಪರ್ಧೆಯಲ್ಲಿದ್ದಾರೆ: ಆರ್ ಅಶೋಕ್

ಕರ್ನಾಟಕ ವಿಧಾನಸಭೆಯ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ನಾಲ್ಕೈದು ಶಾಸಕರೊಂದಿಗೆ ತಾನು ಕೂಡ ಆಕಾಂಕ್ಷಿಗಳಾಗಿದ್ದು, ಈ ಹುದ್ದೆಗೆ ಯಾರೇ ಆಯ್ಕೆಯಾದರೂ, ಅವರನ್ನು ಒಪ್ಪಿಕೊಳ್ಳುತ್ತೇವೆ ಎಂದು ಬಿಜೆಪಿಯ ಹಿರಿಯ ಶಾಸಕ ಮತ್ತು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಗುರುವಾರ ಹೇಳಿದ್ದಾರೆ.
ಆರ್ ಅಶೋಕ್
ಆರ್ ಅಶೋಕ್
Updated on

ಬೆಂಗಳೂರು: ಕರ್ನಾಟಕ ವಿಧಾನಸಭೆಯ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ನಾಲ್ಕೈದು ಶಾಸಕರೊಂದಿಗೆ ತಾನು ಕೂಡ ಆಕಾಂಕ್ಷಿಗಳಾಗಿದ್ದು, ಈ ಹುದ್ದೆಗೆ ಯಾರೇ ಆಯ್ಕೆಯಾದರೂ, ಅವರನ್ನು ಒಪ್ಪಿಕೊಳ್ಳುತ್ತೇವೆ ಎಂದು ಬಿಜೆಪಿಯ ಹಿರಿಯ ಶಾಸಕ ಮತ್ತು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಗುರುವಾರ ಹೇಳಿದ್ದಾರೆ.

ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಶುಕ್ರವಾರ (ನವೆಂಬರ್ 17) ನಡೆಯಲಿದ್ದು, ಈ ಸಂದರ್ಭದಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಆಯ್ಕೆಯನ್ನು ಘೋಷಿಸುವ ಸಾಧ್ಯತೆಯಿದೆ.

‘ನನಗೆ ಗೊತ್ತಿಲ್ಲ, ಪಕ್ಷ ತೀರ್ಮಾನ ಮಾಡಬೇಕು. ಪಕ್ಷ ಯಾರನ್ನು ಈ ಹುದ್ದೆಗೆ ಪರಿಗಣಿಸುತ್ತದೆಯೋ ಅವರಿಗೆ ಹುದ್ದೆ ಸಿಗುತ್ತದೆ. ನಾವ್ಯಾರೂ ಅರ್ಜಿ ಸಲ್ಲಿಸಿಲ್ಲ. ಅಂತಹ ಸಂಸ್ಕೃತಿ ನಮ್ಮ ಪಕ್ಷದಲ್ಲಿ ಇಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. 
ಶಾಸಕರಾದ ಸುನೀಲ್ ಕುಮಾರ್ ವಿ, ಅಶ್ವತ್ಥ್ ನಾರಾಯಣ್ ಮತ್ತು ಆರಗ ಜ್ಞಾನೇಂದ್ರ ಅವರ ಜೊತೆಗೆ ಆರ್ ಅಶೋಕ್ ಅವರ ಹೆಸರು ಈ ಹುದ್ದೆಗೆ ಕೇಳಿಬರುತ್ತಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಕರ್ನಾಟಕ ಬಿಜೆಪಿ ಘಟಕದ ಅಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅವರನ್ನು ನೇಮಕ ಮಾಡಿರುವುದನ್ನು ಉಲ್ಲೇಖಿಸಿದ ಅವರು, 'ಆ ನೇಮಕವನ್ನು ಹೇಗೆ ಘೋಷಿಸಲಾಯಿತು ಎಂದು ನಿಮಗೆ ತಿಳಿದಿದೆ. ಹಾಗೆಯೇ ವಿರೋಧ ಪಕ್ಷದ ನಾಯಕನ ಹುದ್ದೆ ಕೂಡ ಪ್ರಮುಖವಾಗಿದೆ. ಏಕೆಂದರೆ, ಒಬ್ಬರು ಬೂತ್‌ನ ಒಳಗೆ ಮತ್ತು ಇನ್ನೊಬ್ಬರು ವಿಧಾನಸಭೆಯಿಂದ ಹೊರಗೆ ಪಕ್ಷವನ್ನು ಮುನ್ನಡೆಸಬೇಕು' ಎಂದು ಹೇಳಿದರು.

ಇದೆಲ್ಲವನ್ನೂ ಗಣನೆಗೆ ತೆಗೆದುಕೊಂಡು ನಾಳೆ ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇಂದ್ರ ವೀಕ್ಷಕರ ಸಮ್ಮುಖದಲ್ಲಿ ವಿಪಕ್ಷ ನಾಯಕನ ಹೆಸರನ್ನು ಘೋಷಿಸಲಾಗುತ್ತದೆ.

ಕೇಂದ್ರದ ನಾಯಕತ್ವವು ಎರಡು ತಿಂಗಳ ಹಿಂದೆಯೇ ಶಾಸಕರು ಮತ್ತು ಕೋರ್ ಕಮಿಟಿ ಸದಸ್ಯರ ಅಭಿಪ್ರಾಯವನ್ನು ಸಂಗ್ರಹಿಸಿತ್ತು ಎಂದು ತಿಳಿಸಿದ ಅಶೋಕ್, ಈಗ ಯಾರೇ ಪಕ್ಷದ ಅಧ್ಯಕ್ಷರಾಗಿದ್ದರೂ, ಅದಕ್ಕೆ ಯಾರೊಬ್ಬರದೂ ಅಭ್ಯಂತರವಿಲ್ಲ ಎಂದರು.

ವಿಪಕ್ಷ ನಾಯಕನ ಹುದ್ದೆಗೆ ತಮ್ಮ ಅವರ ಹೆಸರೂ ಹರಿದಾಡುತ್ತಿರುವ ಬಗ್ಗೆ ಅರಿವಿದೆ ಎಂದ ಅವರು, ನಾನು ಸೇರಿದಂತೆ ನಾಲ್ಕೈದು ಜನ ಆಕಾಂಕ್ಷಿಗಳಿದ್ದು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದಷ್ಟೇ ನಮ್ಮ ಗುರಿ. ಹೀಗಾಗಿ ಯಾವುದೇ ಗೊಂದಲ, ಅಡೆತಡೆಗಳಿಲ್ಲದೆ ಹೊಸ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ. ನಾನು ನಿನ್ನೆ ವಿ ಸುನೀಲ್ ಕುಮಾರ್, ಸಿಎನ್ ಅಶ್ವತ್ಥ್ ನಾರಾಯಣ್ ಅವರೊಂದಿಗೆ ಮಾತನಾಡಿದ್ದೇನೆ. ಯಾರೇ ಆಯ್ಕೆಯಾದರೂ, ನಮ್ಮ ಅಭ್ಯಂತರವಿಲ್ಲ. ಪಕ್ಷ ಶ್ರೇಷ್ಠವಾಗಿದ್ದು, ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದೇ ನಮ್ಮ ಆದ್ಯತೆ ಎಂದರು.

ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿ ಇನ್ನೂ ತನ್ನ ಶಾಸಕಾಂಗ ಪಕ್ಷದ ನಾಯಕನನ್ನು ನೇಮಿಸಿಲ್ಲ. ಈ ಹಿಂದೆ ಜುಲೈನಲ್ಲಿ ನಡೆದ ವಿಧಾನಸಭೆ ಅಧಿವೇಶನ ವಿರೋಧ ಪಕ್ಷದ ನಾಯಕರಿಲ್ಲದೇ ನಡೆದಿತ್ತು.

ಡಿಸೆಂಬರ್ 4 ರಿಂದ ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೂ ಮುನ್ನ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಭೆ ನಡೆಯುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com