ನಿಗಮ-ಮಂಡಳಿ ನೇಮಕ: ಪಟ್ಟಿ ಅಂತಿಮಗೊಂಡ ಬಳಿಕ ಅನುಮೋದನೆಗಾಗಿ ಹೈಕಮಾಂಡ್ಗೆ ರವಾನೆ; ಡಿಕೆ ಶಿವಕುಮಾರ್
ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ಶಾಸಕರು ಮತ್ತು ಕಾರ್ಯಕರ್ತರನ್ನು ರಾಜ್ಯ ಸರ್ಕಾರದ ಅಧೀನದ ವಿವಿಧ ನಿಗಮ - ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ ಮತ್ತು ಈ ಪಟ್ಟಿಯನ್ನು ಅಂತಿಮಗೊಳಿಸಿದ ನಂತರ ಅನುಮೋದನೆಗಾಗಿ ಪಕ್ಷದ ಹೈಕಮಾಂಡ್ಗೆ ಕಳುಹಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಂಗಳವಾರ ಹೇಳಿದ್ದಾರೆ.
ಕರ್ನಾಟಕದ ಉಸ್ತುವಾರಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಪಕ್ಷದ ರಾಜ್ಯದ ನಾಯಕತ್ವದೊಂದಿಗೆ ಈ ಕಸರತ್ತಿನ ಕುರಿತು ಚರ್ಚಿಸಲು ಇಂದು ನಗರಕ್ಕೆ ಬಂದಿದ್ದಾರೆ. ಕಳೆದ ವಾರವೂ ಇಲ್ಲಿ ಈ ಕುರಿತು ಚರ್ಚೆ ನಡೆಸಿದ್ದರು.
'ಇದು ನಮ್ಮ ನಿತ್ಯದ ಕೆಲಸ, ಇದು ಪಕ್ಷದ ಕೆಲಸ. ಅವರು (ಸುರ್ಜೇವಾಲಾ) ಬ್ಯುಸಿಯಾಗಿದ್ದರು. ನಾವು ಎರಡು ಮೂರು ಸುತ್ತಿನ ಸಭೆ ನಡೆಸಿದ್ದೇವೆ. ಇಂದು ಕೂಡ ನಾವು ಸಭೆ ನಡೆಸುತ್ತಿದ್ದೇವೆ. ಅಂತಿಮಗೊಂಡ ಪಟ್ಟಿಯನ್ನು ದೆಹಲಿಗೆ ಕಳಿಸಬೇಕು. ಅದು ಅನುಮೋದನೆಗೊಂಡ ನಂತರ ನಾವು ತಿಳಿಸುತ್ತೇವೆ' ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಅವರು ಸುರ್ಜೇವಾಲಾ ಅವರೊಂದಿಗಿನ ಭೇಟಿ ಬಗೆಗಿನ ಪ್ರಶ್ನೆಗೆ ಇಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಪಕ್ಷದ ಒಂದು ವಿಭಾಗದಲ್ಲಿ ಕೆಲವು ಅಸಮಾಧಾನ ಮತ್ತು ಅಸಹನೆ ಹೆಚ್ಚುತ್ತಿದೆ. ಸಚಿವರಾಗಲು ಸಾಧ್ಯವಾಗದ ಶಾಸಕರು ಇದೀಗ ನಿಗಮ ಮತ್ತು ಮಂಡಳಿಗಳ ಪ್ರಮುಖ ಹುದ್ದೆಗಳ ಮೇಲೆ ಕಣ್ಣಿಟ್ಟಿದ್ದು, ತೀವ್ರ ಆಕಾಂಕ್ಷಿಗಳಾಗಿದ್ದಾರೆ. ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆದಿದ್ದರೂ, ಇನ್ನೂ ಆಗದ ನೇಮಕಾತಿ ಬಗ್ಗೆ ಅಸಮಾಧಾನಗೊಂಡಿದ್ದಾರೆ.
ಅಲ್ಲದೆ, ನಿಷ್ಠಾವಂತ ಕಾರ್ಯಕರ್ತರಿಗೆ ಹುದ್ದೆಗಳನ್ನು ನೀಡುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಪಕ್ಷದೊಳಗಿನ ಹಲವರು ಅಸಮಾಧಾನಗೊಂಡಿದ್ದಾರೆ.
ನಿಗಮ - ಮಂಡಗಳಿಗಳ ಅಧ್ಯಕ್ಷ ಸ್ಥಾನಗಳಿಗೆ ಕಾಂಗ್ರೆಸ್ ಶಾಸಕರು ಮತ್ತು ಪಕ್ಷದ ಕಾರ್ಯಕರ್ತರನ್ನು ನೇಮಿಸಲಾಗುವುದು ಎಂದು ಡಿಕೆ ಶಿವಕುಮಾರ್ ಇತ್ತೀಚೆಗೆ ಹೇಳಿದ್ದರು. ಸುಮಾರು 15 ರಿಂದ 20 ಪಕ್ಷದ ಶಾಸಕರು ಮತ್ತು ಎಂಎಲ್ಸಿಗಳಿಗೆ ಅವಕಾಶ ಕಲ್ಪಿಸಲಾಗುವುದು ಮತ್ತು ಉಳಿದವುಗಳನ್ನು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಹಂಚಲಾಗುವುದು ಎಂದು ಸೂಚಿಸಿದ್ದರು.
ಪಕ್ಷದ ಮೂಲಗಳ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಕೆಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದು, ಮಂಡಳಿ ಮತ್ತು ನಿಗಮಗಳಿಗೆ ನೇಮಕಾತಿಯೂ ಒಂದಾಗಿದೆ ಎಂದು ಹೇಳಲಾಗಿದೆ.