ಶಿವಸೇನೆ, ಮುಸ್ಲಿಂ ಲೀಗ್ ಜೊತೆ ಮೈತ್ರಿ ಮಾಡಿಕೊಂಡಿದ್ದೀರಿ, ನಿಮ್ಮ ಜಾತ್ಯಾತೀತತೆಯನ್ನು ಪ್ರಶ್ನಿಸಿಕೊಳ್ಳಿ: ಕಾಂಗ್ರೆಸ್'ಗೆ ಜೆಡಿಎಸ್ ತಿರುಗೇಟು

ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೆ ನಮ್ಮನ್ನು ಕೋಮುವಾದಿ ಎಂದು ಜರೆಯುವ ಕಾಂಗ್ರೆಸ್‌, ಶಿವಸೇನೆ ಹಾಗೂ ಮುಸ್ಲಿಂ ಲೀಗ್‌ ಜೊತೆ ಮೈತ್ರಿ ಮಾಡಿಕೊಂಡಿದರ ಕುರಿತು ಏನು ಹೇಳಬೇಕು? ಕಾಂಗ್ರೆಸ್ ವಿರುದ್ಧ ಜೆಡಿಎಸ್ ಕಿಡಿಕಾರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೆ ನಮ್ಮನ್ನು ಕೋಮುವಾದಿ ಎಂದು ಜರೆಯುವ ಕಾಂಗ್ರೆಸ್‌, ಶಿವಸೇನೆ ಹಾಗೂ ಮುಸ್ಲಿಂ ಲೀಗ್‌ ಜೊತೆ ಮೈತ್ರಿ ಮಾಡಿಕೊಂಡಿದರ ಕುರಿತು ಏನು ಹೇಳಬೇಕು? ಎಂದು ಕಾಂಗ್ರೆಸ್ ವಿರುದ್ಧ ಜೆಡಿಎಸ್ ಕಿಡಿಕಾರಿದೆ.

ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಜೆಡಿಎಸ್ ಹಿರಿಯ ನಾಯಕ ಜಿ.ಟಿ ದೇವೇಗೌಡ ಅವರು, ರಾಜ್ಯಕ್ಕೆ ಹತ್ತು ಹಲವು ನಾಯಕರನ್ನು ನೀಡಿರುವ ಜೆಡಿಎಸ್ ಎಲ್ಲಾ ಭಾಗದಲ್ಲಿಯೂ ಬಲಿಷ್ಠವಾಗಿದೆ. ಹಾಗಾಗಿ ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿಯನ್ನಾಗಿ ಹಾಗೂ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಪಕ್ಷದ ಕಾರ್ಯಕರ್ತರು ಪಣತೊಡಬೇಕು ಎಂದು ಕರೆ ನೀಡಿದರು.

ಈ ಮೈತ್ರಿ ಬರೀ ಲೋಕಸಭಾ ಚನಾವಣೆಗಷ್ಟೇ ಸೀಮಿತವಲ್ಲ. ತಾಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯತಿ ಮಟ್ಟದವರೆಗೂ ಮುಂದುವರೆಯಲಿದೆ ಎಂದು ಹೇಳಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಂದೇ ಒಂದೂ ಸ್ಥಾನ ಗೆಲ್ಲಲು ಅವಕಾಶ ನೀಡದಂತೆ ಮೈತ್ರಿಯೊಂದಿಗೆ ಚುನಾವಣೆ ಎದುರಿಸಲಿದ್ದೇವೆ. ಈ ಮೈತ್ರಿಯು ತಾಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯತಿ ಮಟ್ಟದವರೆಗೂ ಮುಂದುವರೆಯಲಿದೆ. ಹಾಗಾಗಿ ಈ ಮೈತ್ರಿಯಲ್ಲಿ ಕಾರ್ಯಕರ್ತರು ಅತ್ಯಂತ ಹುಮ್ಮಸ್ಸಿನಿಂದ ಪಕ್ಷ ಸಂಘಟನೆ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಈ ಭಾಗದಲ್ಲಿ ಜನತಾ ಪರಿವಾರದಿಂದಲೂ ಇಲ್ಲಿ ಗಟ್ಟಿ ನೆಲೆಯಿದೆ. ಈಗ ಪುನಃ ಪಕ್ಷ ಬಲಪಡಿಸಲು ಪುನಶ್ಚೇತನ ಪರ್ವ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪಕ್ಷವು ಸಮಾಜದ ಎಲ್ಲಾ ವರ್ಗಗಳ ಜನರಿಗಾಗಿ ಕೆಲಸ ಮಾಡುವುದನ್ನು ಮುಂದುವರೆಸಿದೆ. ಜಾತ್ಯತೀತ ಸ್ವರೂಪದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ದೇಶಕ್ಕೆ ನರೇಂದ್ರ ಮೋದಿ ಹೇಗಿದ್ದಾರೋ ಹಾಗೆಯೇ ರಾಜ್ಯಕ್ಕೆ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಇರುತ್ತಾರೆ. ಎರಡು ಪಕ್ಷಗಳ ಮೈತ್ರಿಯಿಂದ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾಗುವುದು ಖಚಿತ ಮತ್ತು ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗುವುದೂ ಖಚಿತ. ಜೆಡಿಎಸ್ ಅನ್ನು ಮೈಸೂರು ಭಾಗದ ಪಕ್ಷ ಎಂದು ಬ್ರಾಂಡ್ ಮಾಡುವ ಕಾಂಗ್ರೆಸ್ ಪಕ್ಷದ ಪ್ರಯತ್ನವು ಫಲ ನೀಡುವುದಿಲ್ಲ, ರಾಜ್ಯದಾದ್ಯಂತ ಪಕ್ಷಕ್ಕೆ ಬೆಂಬಲವಿದೆ ಎಂದರು.

ಇದೇ ವೇಳೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ ಅವರು, ಬರ ಪರಿಸ್ಥಿತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸುತ್ತಿಲ್ಲ. ಬೆಳೆ ನಷ್ಟ ಪರಿಹಾರದ ಮೂಲಕ ರೈತರಿಗೆ ಪರಿಹಾರ ನೀಡುವಲ್ಲಿ ಸರಕಾರ ವಿಫಲವಾಗಿದೆ. ಈಗ ರೈತರು ತಮ್ಮ ಪಂಪ್‌ಸೆಟ್‌ಗಳಿಗೆ ದಿನಕ್ಕೆ ಆರರಿಂದ ಏಳು ಗಂಟೆಗಳ ಕಾಲ ವಿದ್ಯುತ್ ನೀಡದೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದ್ದಾರೆಂದು ಕಿಡಿಕಾರಿದರು.

ಸರ್ಕಾರದ 5 ಐದು ಗ್ಯಾರಂಟಿ ಯೋಜನೆಗಳೂ ಸರಿಯಾಗಿ ಜಾರಿಯಾಗಿಲ್ಲ. ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ. ಗುತ್ತಿಗೆದಾರರ ಬಿಲ್ ಪಾವತಿಯಾಗುತ್ತಿಲ್ಲ. ಕೆಂಪಣ್ಣ ಈಗ ಎಲ್ಲಿದ್ದಾರೆ? ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com