ಬೆಂಗಳೂರು: ಐಟಿ ಅಧಿಕಾರಿಗಳು ದಾಳಿ ವೇಳೆ ಕೋಟ್ಯಾಂತರ ನಗದು ವಶಪಡಿಸಿಕೊಂಡ ಬೆನ್ನಲ್ಲೇ ಭ್ರಷ್ಟಾಚಾರ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ತನ್ನ ವಾಗ್ದಾಳಿಯನ್ನು ಮುಂದುವರೆಸಿದೆ.
ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್)ನಲ್ಲಿ ಸರಣಿ ಪೋಸ್ಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ನಾಯಕರ ಕುರಿತು ವಾಗ್ದಾಳಿ ನಡೆಸಿದೆ. ಇದೇ ವೇಳೆ ಮುಖ್ಯಮಂತ್ರಿಗಳನ್ನು ಸಿಎಂ ಅಂದ್ರೆ ಕಲೆಕ್ಷನ್ ಮಾಸ್ಟರ್ ವ್ಯಂಗ್ಯವಾಡಿದೆ.
ಕಾಂಗ್ರೆಸ್ ನಾಯಕರನ್ನು ನಾಡದ್ರೋಹಿ ಲೂಟಿಕೋರರು ಎಂದು ಆರೋಪಿಸಿರುವ ಬಿಜೆಪಿ, ಸ್ವಾಭಿಮಾನಿ ಕನ್ನಡಿಗರ ಸ್ವಾವಲಂಬನೆಯ ದುಡಿಮೆಯ ತೆರಿಗೆ ಹಣವನ್ನು ಪಂಚ ರಾಜ್ಯಗಳ ಚುನಾವಣೆಗೆ ಹಂಚುತ್ತಿದ್ದಾರೆಂದು ವಾಗ್ದಾಳಿ ನಡೆಸಿದೆ.
ರಾಜ್ಯದ ಕಾಂಗ್ರೆಸ್ ಸರ್ಕಾರದ ವರ್ಗಾವಣೆ ದಂಧೆ, ರಾಜ್ಯದ ಅಭಿವೃದ್ಧಿಯನ್ನು ರಿವರ್ಸ್ ಗೇರ್ನಲ್ಲಿರಿಸಿದ್ದು ಮಾತ್ರವಲ್ಲದೇ, ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಸಹ ಬುಡಮೇಲು ಮಾಡುತ್ತಿದೆ. ಶಿಕ್ಷಕರ ಅವೈಜ್ಞಾನಿಕ ವರ್ಗಾವಣೆಯಿಂದ ರಾಯಚೂರಿನಲ್ಲಿ ಶಿಕ್ಷಕರ ತೀವ್ರ ಕೊರತೆ ಉಂಟಾಗಿದ್ದು, ಮಕ್ಕಳು ಶಾಲೆಗೆ ಗುಡ್ ಬೈ ಹೇಳುತ್ತಿದ್ದಾರೆ. ಇದು “ಕೈ” ಸರ್ಕಾರ ಶಿಕ್ಷಣದ ಬಗ್ಗೆ ಹೊಂದಿರುವ ಅಸಲಿ ಕಾಳಜಿ.
ಮುಖ್ಯಮಂತ್ರಿಗಳೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಪಡಿಸುವಲ್ಲಿ, ರಾಷ್ಟ್ರೀಯತೆಯನ್ನು ಒಳಗೊಂಡಿದ್ದ ಪಠ್ಯಪುಸ್ತಕವನ್ನು ಬದಲಿಸುವಲ್ಲಿ ತೋರಿದ ಆತುರವನ್ನು ಶಿಕ್ಷಕರ ವರ್ಗಾವಣೆಯಲ್ಲಾದ ಲೋಪ-ದೋಷಗಳ ಬಗ್ಗೆಯೂ ಸ್ವಲ್ಪ ತೋರಿ ಸ್ವಾಮಿ ಎಂದು ಹೇಳಿದೆ.
ಪಂಚ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಕೊಟ್ಟಿರುವ ಮೊದಲನೇ ಹಂತದ ರೂ.1000 ಕೋಟಿ ಟಾರ್ಗೆಟ್ ಯಾವ ರಾಜ್ಯಕ್ಕೆ ಎಷ್ಟು? ಎಂದು ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ತೆಲಂಗಾಣ ಕಾಂಗ್ರೆಸ್ಗೆ ರೂ.300 ಕೋಟಿ, ಮಿಜೋರಾಂ ಕಾಂಗ್ರೆಸ್ಗೆ ರೂ.100 ಕೋಟಿ, ಛತ್ತೀಸ್ಗಢ ಹಾಗೂ ರಾಜಸ್ಥಾನ ಕಾಂಗ್ರೆಸ್ಗೆ ತಲಾ ರೂ.200 ಕೋಟಿ, ಮಧ್ಯ ಪ್ರದೇಶ ಕಾಂಗ್ರೆಸ್ಗೆ 200 ಕೋಟಿ ರೂ. ಎಂದು ವ್ಯಂಗ್ಯ ಮಾಡಿದೆ.
Advertisement