ಲೋಕಸಭಾ ಚುನಾವಣೆ: NDA ಗೆದ್ದರೆ ಕೃಷಿ ಸಚಿವನಾಗಲು ಬಯಸುತ್ತೇನೆ- ಹೆಚ್ ಡಿ ಕುಮಾರಸ್ವಾಮಿ
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ಉತ್ತಮ ಭವಿಷ್ಯಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ಚುನಾವಣೆ ನಂತರ ಬಿಜೆಪಿಯೊಂದಿಗೆ ಮೈತ್ರಿ ಮುಂದುವರಿಕೆ ಅವರ ಪಕ್ಷ ಮತ್ತು ನಾಯಕರು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಕೇಂದ್ರದಲ್ಲಿ ಮತ್ತೆ ಎನ್ ಡಿಎ ಅಧಿಕಾರಕ್ಕೆ ಬಂದ್ದು, ಪ್ರಧಾನಿ ಮೋದಿ ಅವರನ್ನು ನನ್ನ ಮೇಲೆ ವಿಶ್ವಾಸವಿಟ್ಟು ಅವಕಾಶ ಕೊಟ್ಟರೆ ಕೃಷಿ ಸಚಿವನಾಗಲು ಬಯಸುವುದಾಗಿ ಅವರು ತಿಳಿಸಿದ್ದಾರೆ.
ಗುರುವಾರ ಮಂಡ್ಯದಿಂದ ನಾಮಪತ್ರ ಸಲ್ಲಿಸಿದ ನಂತರ ಪಿಟಿಐ ವಿಡಿಯೋಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು, “ನಾವು ಎನ್ಡಿಎ ಭಾಗವಾಗುವುದು ಭವಿಷ್ಯದಲ್ಲಿ ನಮ್ಮ ಪಕ್ಷದ ನಾಯಕರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು, ಬಿಜೆಪಿಯೊಂದಿಗೆ ದೀರ್ಘಕಾಲದ ಸಂಬಂಧವನ್ನು ಬಯಸುತ್ತೇವೆ ಆದರೆ ಅಂತಿಮವಾಗಿ ನಮ್ಮನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಮತ್ತು ಬಿಜೆಪಿಯಿಂದ ನಮಗೆ ಎಷ್ಟು ಗೌರವ ಸಿಗುತ್ತದೆ ಎಂಬುದರ ಮೇಲೆ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ನೇತೃತ್ವದ ಜೆಡಿಎಸ್ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸೇರಿತ್ತು. ಸೀಟು ಹಂಚಿಕೆ ಒಪ್ಪಂದದ ಭಾಗವಾಗಿ, ಕರ್ನಾಟಕದಲ್ಲಿ 25 ಕ್ಷೇತ್ರಗಳಲ್ಲಿ ಬಿಜೆಪಿ, ಉಳಿದ ಮೂರು ಕ್ಷೇತ್ರಗಳಾದ ಮಂಡ್ಯ, ಹಾಸನ ಮತ್ತು ಕೋಲಾರದಲ್ಲಿ ಜೆಡಿಎಸ್ ಸ್ಪರ್ಧಿಸಿದೆ. ದೇವೇಗೌಡರ ಪುತ್ರ ಕುಮಾರಸ್ವಾಮಿ ಅವರು, ಕೇಂದ್ರ ಕೃಷಿ ಸಚಿವರಾಗುವ ಆಸೆಯನ್ನು ಗುಟ್ಟಾಗಿಸಲಿಲ್ಲ. ''ನನ್ನನ್ನು ಕೇಂದ್ರ ಸಚಿವರನ್ನಾಗಿ ನೋಡಬೇಕು ಎಂಬುದು ಮಂಡ್ಯದ ಜನರ ಆಕಾಂಕ್ಷೆಯಲ್ಲ, ಬಿಜೆಪಿ ಗೆಳೆಯರೂ ಸಹ ನಾನು ಸಚಿವರಾದರೆ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಭಾವಿಸಿದ್ದಾರೆ, ನಾನು ಕೃಷಿ ಹಿನ್ನೆಲೆಯಿಂದ ಬಂದಿದ್ದೇನೆ ಮತ್ತು ನನಗೆ ಅವಕಾಶ ನೀಡಿದ್ದರೆ ಕೃಷಿ ಸಚಿವರಾರಿ ಸರ್ಕಾರಕ್ಕೆ ಒಳ್ಳೆ ಹೆಸರು ತಂದುಕೊಡುತ್ತೇನೆ. ನಾನು ಒಳ್ಳೆಯ ಕೆಲಸ ಮಾಡಬಲ್ಲೆ ಎಂಬ ನಂಬಿಕೆ ಪ್ರಧಾನಿಗೆ ಇದ್ದು, ಅವಕಾಶ ಸಿಕ್ಕರೆ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುತ್ತೇನೆ ಎಂದರು.
ಕರ್ನಾಟಕದ ಉತ್ತಮ ಭವಿಷ್ಯಕ್ಕಾಗಿ ಹೋರಾಡಲು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ ಹೊರತು ರಾಜಕೀಯ ಉಳಿವಿಗಾಗಿ ಅಲ್ಲ. ಇದರಿಂದ ಬಿಜೆಪಿ ಮತ್ತು ಜೆಡಿಎಸ್ ಎರಡಕ್ಕೂ ಪರಸ್ಪರ ಪ್ರಯೋಜನಕಾರಿಯಾಗಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ನಡುವಿನ ಮತ ವಿಭಜನೆಯ ಲಾಭವನ್ನು ಕಾಂಗ್ರೆಸ್ ಪಡೆದುಕೊಂಡಿದೆ. ನಾವು ತಪ್ಪನ್ನು ಅರಿತುಕೊಂಡಿದ್ದು, ಒಟ್ಟಾಗಿ ಕಾಂಗ್ರೆಸ್ ವಿರುದ್ಧ ಹೋರಾಡಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು.
ಜೆಡಿಎಸ್ಗೆ ಸ್ವಾಭಾವಿಕವಾಗಿ ಬಿಜೆಪಿಯೇ ಮಿತ್ರ ಪಕ್ಷ ಹೊರತು ಕಾಂಗ್ರೆಸ್ ಅಲ್ಲ. ಕಳೆದ 50 ವರ್ಷಗಳಿಂದ ತಮ್ಮ ಪಕ್ಷವು ಹಳೆಯ ಪಕ್ಷದೊಂದಿಗೆ ಹೋರಾಡುತ್ತಿದೆ ಎಂದು ಹೇಳಿದ ಕುಮಾರಸ್ವಾಮಿ, ಬಿಜೆಪಿಯೊಂದಿಗಿನ ಮೈತ್ರಿಯಿಂದ ಮುಖ್ಯಮಂತ್ರಿಯಾದದ್ದು ಉತ್ತಮ ಅವಧಿಯಾಗಿದೆ ಮತ್ತು ಕೆಲವು ತಪ್ಪು ತಿಳುವಳಿಕೆ ಮತ್ತು ಕೆಲವು ಕಿಡಿಗೇಡಿಗಳ ದುಷ್ಕೃತ್ಯಗಳಿಂದ ನಾವು ದೂರವಾಗಬೇಕಾಯಿತು. ಉಭಯ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಈಗ ಪ್ರಾಮಾಣಿಕವಾಗಿ ಪರಸ್ಪರ ಕೆಲಸ ಮಾಡುತ್ತಿದ್ದಾರೆ ಎಂದರು.
"ಈ ಬಾರಿ ನಮ್ಮ ನಡುವೆ ಸಾಕಷ್ಟು ಸಕಾರಾತ್ಮಕತೆ, ಶಕ್ತಿಯಿದೆ. ಬಿ ಎಸ್ ಯಡಿಯೂರಪ್ಪ ಅಥವಾ ದೇವೇಗೌಡ ಯಾರೇ ಆಗಿರಲಿ ನಾವೆಲ್ಲರೂ ರಾಜ್ಯದ 28 ಕ್ಷೇತ್ರಗಳಲ್ಲಿ ಎನ್ ಡಿಎ ಗೆಲ್ಲಿಸಲು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ